
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದಲ್ಲಿ ಜಾರ್ಖಂಡ್ ನ್ಯಾಯಾಲಯ ಜಾಮೀನು ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ರಾಹುಲ್ ಖುದ್ದು ಹಾಜರಾದ ನಂತರ ನ್ಯಾಯಾಧೀಶೆ ಸುಪ್ರಿಯಾ ರಾಣಿ ಟಿಗ್ಗಾ ಅವರು ಜಾಮೀನು ನೀಡಿದರು.
2018ರಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ರಾಹುಲ್ ಹೇಳಿದ್ದರು ಎಂದು ಆರೋಪಿಸಿ ಚೈಬಾಸಾ ನಿವಾಸಿ ಪ್ರತಾಪ್ ಕಟಿಯಾರ್ ಅವರು ದೂರು ಸಲ್ಲಿಸಿದ್ದರು.
ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ರದ್ದುಗೊಳಿಸುವಂತೆ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಫೆಬ್ರವರಿಯಲ್ಲಿ ತಿರಸ್ಕರಿಸಿತ್ತು.
ಫೆಬ್ರವರಿ 27ರಂದು, ವಿಚಾರಣೆಗೆ ಹಾಜರಾಗದ ಕಾರಣ ರಾಹುಲ್ ಗಾಂಧಿ ಅವರ ವಿರುದ್ಧ ಚೈಬಾಸಾ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಆದೇಶವನ್ನು ರಾಹುಲ್ ಜಾರ್ಖಂಡ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ನಂತರ ಅದು ವಾರಂಟ್ಗೆ ತಡೆ ನೀಡಿತ್ತು.
ಅದಾದ ನಂತರ, ರಾಹುಲ್ ವಿರುದ್ಧ ಎರಡನೇ ಜಾಮೀನು ರಹಿತ ವಾರಂಟ್ ಹೊರಡಿಸಿದ ಚೈಬಾಸಾ ನ್ಯಾಯಾಲಯ ಜೂನ್ 26 ರಂದು ಹಾಜರಾಗುವಂತೆ ಅವರಿಗೆ ಸೂಚಿಸಿತ್ತು. ಇದನ್ನು ಕೂಡ ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆಗ ವಿಚಾರಣಾ ನ್ಯಾಯಾಲಯದೆದುರು ಹಾಜಾರಾಗುವಂತೆ ಅದು ರಾಹುಲ್ ಅವರಿಗೆ ಸೂಚಿಸಿತ್ತು.