ವಕೀಲರ ಪೋಷಕರನ್ನೂ ಕೇಂದ್ರದ ಉದ್ದೇಶಿತ ವಿಮಾ ಯೋಜನೆ ವ್ಯಾಪ್ತಿಗೆ ತರಲು ಕೋರಿಕೆ: ಸಮಗ್ರ ಅರ್ಜಿ ಸಲ್ಲಿಸಲು ನಿರ್ದೇಶನ

ಕರ್ನಾಟಕ ವಕೀಲರ ಪರಿಷತ್‌ಗೆ ನೀಡಿದ್ದ ಮನವಿ ಪತ್ರ ಮತ್ತು ಅರ್ಜಿಯಲ್ಲಿ ಉಲ್ಲೇಖಿಸಿದ ಕೆಲವೊಂದು ಅಂಶಗಳಲ್ಲಿ ಕೆಲವೊಂದು ವ್ಯತ್ಯಾಸ ಇರುವುದನ್ನು ಪೀಠ ಗಮನಿಸಿತು.
lawyers
lawyers

ಕೇಂದ್ರ ಸರ್ಕಾರ ರಚಿಸಲು ಉದ್ದೇಶಿಸಿರುವ ವಿಮಾ ಯೋಜನೆ ವ್ಯಾಪ್ತಿಗೆ ವೃತ್ತಿ ನಿರತ ವಕೀಲರ ಪೋಷಕರನ್ನೂ ಒಳಪಡಿಸುವ ವಿಚಾರವಾಗಿ ಸಮರ್ಪಕ ಹಾಗೂ ಸಮಗ್ರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಂತೆ ವಕೀಲ ಎಲ್ ರಮೇಶ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಸೂಚಿಸಿದೆ.

ವಿಮಾ ಯೋಜನೆ ವ್ಯಾಪ್ತಿಗೆ ವೃತ್ತಿ ನಿರತ ವಕೀಲರ ಪೋಷಕರನ್ನೂ ಒಳಪಡಿಸಲು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮತ್ತು ಕರ್ನಾಟಕ ವಕೀಲರ ಪರಿಷತ್ತಿಗೆ (ಕೆಬಿಸಿ) ನಿರ್ದೇಶಿಸುವಂತೆ ಕೋರಿ ವಕೀಲ ರಮೇಶ್ ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠವು ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯಾಗಿ ಪರಿವರ್ತಿಸಿತ್ತು. ಅದರಂತೆ ಆ ಪಿಐಎಲ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಕೆಲ ಕಾಲ ವಾದ ಆಲಿಸಿದ ನಂತರ ಅರ್ಜಿದಾರ ವಕೀಲ ಎಲ್ ರಮೇಶ್ ನಾಯಕ್ ಅವರು ಪ್ರಕರಣ ಸಂಬಂಧ ಕರ್ನಾಟಕ ವಕೀಲರ ಪರಿಷತ್‌ಗೆ ನೀಡಿದ್ದ ಮನವಿ ಪತ್ರ ಮತ್ತು ಅರ್ಜಿಯಲ್ಲಿ ಉಲ್ಲೇಖಿಸಿದ ಕೆಲವೊಂದು ಅಂಶಗಳಲ್ಲಿ ಕೆಲವೊಂದು ವ್ಯತ್ಯಾಸ ಇರುವುದನ್ನು ಪೀಠ ಗಮನಿಸಿತು.

ಆ ಸಂಬಂಧ ಪ್ರತಿಕ್ರಿಯಿಸಿದ ವಿಭಾಗೀಯ ಪೀಠವು ಅರ್ಜಿದಾರರು ಸೂಕ್ತವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸೂಕ್ತ ರೀತಿಯಲ್ಲಿ ಸಲ್ಲಿಸಿಲ್ಲ. ಅರ್ಜಿದಾರರು ಯಾವುದನ್ನು ಮಾಡಬೇಕಿತ್ತೋ; ಅದನ್ನು ಮಾಡಿಲ್ಲ. ಅರ್ಧ ಕೆಲಸವಷ್ಟೇ ಮಾಡಿದ್ದಾರೆ ಎಂದು ನುಡಿಯಿತು.

Also Read
ವಕೀಲರ ಪೋಷಕರನ್ನೂ ಕೇಂದ್ರದ ಉದ್ದೇಶಿತ ವಿಮಾ ಯೋಜನೆ ವ್ಯಾಪ್ತಿಗೆ ತರಲು ಕೋರಿಕೆ: ರೋಸ್ಟರ್‌ ಪೀಠಕ್ಕೆ ಅರ್ಜಿ ವರ್ಗಾವಣೆ

ಆಗ ಅರ್ಜಿದಾರರು, ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಬೇಕು ಎಂದು ಪೀಠಕ್ಕೆ ಕೋರಿದರು. ಇದರಿಂದ ಅರ್ಜಿ ಹಿಂಪಡೆಯಲು ಒಪ್ಪಿದ ಪೀಠವು ಸಮರ್ಪಕ ಮತ್ತು ಸಮಗ್ರವಾಗಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಅನುಮತಿ ಸಹ ನೀಡಿತು.

ಕೇಂದ್ರ ಸರ್ಕಾರವು ವೃತ್ತಿ ನಿರತ ವಕೀಲರಿಗೆ ವಿಮಾ ಯೋಜನೆ ರೂಪಿಸಲು ಸಮ್ಮತಿಸಿದೆ. ಇದರಿಂದ ವೃತ್ತಿ ನಿರತ ವಕೀಲರ ಮಾಹಿತಿ ಒದಗಿಸುವಂತೆ ಎಲ್ಲಾ ರಾಜ್ಯಗಳ ವಕೀಲರ ಪರಿಷತ್‌ಗೆ ಬಿಸಿಐ ಸೂಚಿಸಿತ್ತು. ಅದರಂತೆ ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೆ ಪತ್ರ ಬರೆದಿದ್ದ ಕೆಬಿಸಿ, ಸಂಘದ ಎಲ್ಲಾ ಸದಸ್ಯರ ಹೆಸರು, ವಯಸ್ಸು, ಅವರ ಬಾಳ ಸಂಗಾತಿ (ಪತಿ/ಪತ್ನಿ) ಮತ್ತು ಮಕ್ಕಳ ಹೆಸರು ಒದಗಿಸುವಂತೆ ಸೂಚಿಸಿತ್ತು.

ಇದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ರಮೇಶ್ ನಾಯಕ್, ವಕೀಲರ ಪೋಷಕರನ್ನು ವಕೀಲರ ಅವಲಂಬಿತರಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ,ವಕೀಲರ ಪೋಷಕರನ್ನು ವಿಮಾ ಯೋಜನೆ ವ್ಯಾಪ್ತಿಗೆ ತರುವಂತೆ ರಾಜ್ಯ ಸರ್ಕಾರ, ಬಿಸಿಐ ಮತ್ತು ಕೆಬಿಸಿಗೆ ನಿರ್ದೇಶಿಸಬೇಕು ಎದು ಕೋರಿದ್ದರು. ಅರ್ಜಿದಾರರು ಎತ್ತಿರುವ ವಿಷಯದಲ್ಲಿ ಸಾಮಾಜಿಕ ಕಳಕಳಿ ಎಂದಿದ್ದ ಏಕ ಸದಸ್ಯ ಪೀಠವು ತಕರಾರು ಅರ್ಜಿಯನ್ನು ಪಿಐಎಲ್ ಆಗಿ ಪರಿವರ್ತಿಸಿತ್ತು.

Related Stories

No stories found.
Kannada Bar & Bench
kannada.barandbench.com