ಅರಣ್ಯ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿವೃತ್ತ ಅಧಿಕಾರಿಗಳು

ಕಾಡುಗಳಲ್ಲಿ ಬೃಹತ್ ಯೋಜನೆಗಳಿಗೆ ಅವಕಾಶ ನೀಡುವುದರಿಂದ ಸಂಕೀರ್ಣ ಪರಿಸರ ವ್ಯವಸ್ಥೆಗೆ ಅಡ್ಡಿಯುಂಟಾಗಿ ಅಳಿವಿನಂಚಿನಲ್ಲಿರುವ ಜೀವಿಗಳ ಸಂಚಕಾರ ಎದುರಾಗಬಹುದು ಎನ್ನುವುದು ಅರ್ಜಿದಾರರು ವಾದ.
Forest
Forest Image for representative purpose

ಅರಣ್ಯ ಸಂರಕ್ಷಣಾ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳ ಗುಂಪೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಈ ತಿದ್ದುಪಡಿ ಅಭಿವೃದ್ಧಿ ಚಟುವಟಿಕೆ ನಿಷೇಧಿಸುವ ನಿಯಮಾವಳಿಗಳನ್ನು ಸಡಿಲಗೊಳಿಸಿದೆ ಎಂದು ಆತಂಕ ವ್ಯಕ್ತಪಡಿಸಿದೆ [ಅಶೋಕ್‌ ಕುಮಾರ್‌ ಶರ್ಮಾ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಅರಣ್ಯ ಮತ್ತು ಕಾಡುಗಳಲ್ಲಿ ಬೃಹತ್‌ ಯೋಜನೆಗಳಿಗೆ ಅವಕಾಶ ನೀಡುವುದರಿಂದ ಸಂಕೀರ್ಣ ಪರಿಸರ ವ್ಯವಸ್ಥೆಗೆ ಅಡ್ಡಿಯುಂಟಾಗಿ ಅಳಿವಿನಂಚಿನಲ್ಲಿರುವ ಜೀವಿಗಳ ಸಂಚಕಾರ ಎದುರಾಗಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.

ಅಕ್ಟೋಬರ್ 20 ರಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಅರವಿಂದ್ ಕುಮಾರ್ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಾಗ, ನ್ಯಾಯಾಲಯವು ಪ್ರಕರಣದ ಸಂಬಂಧ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತು.

Also Read
ಅರಣ್ಯ ಭೂಮಿ ಹೊಂದುವ ಹಕ್ಕು ಆದಿವಾಸಿಗಳು ಮತ್ತು ಅಧಿಸೂಚಿತ ಅರಣ್ಯವಾಸಿಗಳಿಗೆ ಮಾತ್ರವೇ ಸೀಮಿತವಲ್ಲ: ಸುಪ್ರೀಂ

ಅರ್ಜಿಯ ಪ್ರಮುಖಾಂಶಗಳು

  • ಈ ತಿದ್ದುಪಡಿಗಳು ಭಾರತದ ವಿಶಾಲವಾದ ಅರಣ್ಯ ಭೂಮಿಗೆ ಈ ಹಿಂದೆ ನೀಡಲಾಗಿದ್ದ ಕಾನೂನು ರಕ್ಷಣೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ.

  • ಇದರಿಂದ ಅರಣ್ಯ ನಾಶ ಮತ್ತು ಬದಲಿಸಲಾಗದಂತಹ ಹಾನಿ ಉಂಟಾಗುತ್ತದೆ.

  • ತಿದ್ದುಪಡಿ ಕಾಯಿದೆ ದೇಶದ ಪರಿಸರ, ಜೀವವ್ಯವಸ್ಥೆ ಮತ್ತು ಆಹಾರ ಭದ್ರತೆಗೆ ಬೆದರಿಕೆ ಒಡ್ಡುತ್ತದೆ.

  • ಸ್ಥಳೀಯ ಸಮುದಾಯಗಳ ಜೀವ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ.

  • ತಿದ್ದುಪಡಿಯು ಅರಣ್ಯ ಭೂಮಿ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಅನಿಯಂತ್ರಿತ ವಿವೇಚನೆಯನ್ನು ನೀಡುತ್ತದೆ ಮತ್ತು ಅರಣ್ಯ ಭೂಮಿಗಳ ನಿಯಂತ್ರಕ ಪರಿಶೀಲನೆ ಕಡಿಮೆಯಾಗುತ್ತದೆ.

  • ವಿವಿಧ ಸಾಂವಿಧಾನಿಕ ನಿಬಂಧನೆಗಳ ಮೇಲೆ ಪ್ರಭಾವ ಬೀರಲಿರುವ ತಿದ್ದುಪಡಿ ಭಾರತೀಯ ಪರಿಸರ ಕಾನೂನಿನ ವಿವಿಧ ಸ್ಥಾಪಿತ ತತ್ವಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ 2023ರ ತಿದ್ದುಪಡಿ ಕಾಯಿದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.

  • ಕಾಯಿದೆ ಜಾರಿಗೆ ತರುವಾಗ ಸಂಸತ್ತಿನ ಕಾರ್ಯವಿಧಾನವನ್ನು ಪಾಲಿಸಿಲ್ಲ ಮತ್ತು ಸಮಾಲೋಚನೆ ನಡೆಸಿಲ್ಲ.

Kannada Bar & Bench
kannada.barandbench.com