

ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ನಡೆಯುವ ಕಲಾಪಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲು ಕಂದಾಯ ಇಲಾಖೆ ಮುಂದಾಗಿದ್ದು, ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಕಂದಾಯ ನ್ಯಾಯಾಲಯಗಳ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಹೆಜ್ಜೆ ಇಟ್ಟಿರುವ ಇಲಾಖೆಯು ಪಕ್ಷಕಾರರು ಮನೆಯಲ್ಲಿಯೇ ಕುಳಿತು ತಮ್ಮ ಪ್ರಕರಣಗಳ ವಿಚಾರಣೆಯಲ್ಲಿ ಭಾಗವಹಿಸಬಹುದಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು “ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕು ಎಂದು ಯಾವುದೇ ನಿಯಮಗಳು ಇರಲಿಲ್ಲ. ಹೀಗಾಗಿ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶಗಳನ್ನು ಹೊರಡಿಸಿರುವ ಉದಾಹರಣೆಗಳು ಸಾಕಷ್ಟಿವೆ. ಕಂದಾಯ ನ್ಯಾಯಾಲಯಗಳನ್ನು ಜನಸ್ನೇಹಗೊಳಿಸುವ ಜೊತೆಗೆ ನ್ಯಾಯಿಕ ತೀರ್ಮಾನಗಳನ್ನು ಪಾರದರ್ಶಕಗೊಳಿಸಬೇಕು ಎಂಬ ಕಾರಣಕ್ಕೆ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಕಂದಾಯ ನ್ಯಾಯಾಲಯದ ವಿಚಾರಣೆಗಳ ನೇರ ಪ್ರಸಾರವನ್ನು ಪ್ರಾಯೋಗಿಕವಾಗಿ ಆರಂಭಿಸಲು ಆದೇಶ ಹೊರಡಿಸಲಾಗಿದೆ” ಎಂದಿದ್ದಾರೆ.
“ಕಂದಾಯ ನ್ಯಾಯಾಲಯಗಳಲ್ಲಿ ಕಂದಾಯ ನ್ಯಾಯಾಲಯ ಪ್ರಕರಣಗಳ ನಿಗಾ ವ್ಯವಸ್ಥೆ (ಆರ್ಸಿಸಿಎಂಎಸ್) ತಂತ್ರಾಂಶ ಸೇರಿದಂತೆ ಡಿಜಿಟಲೀಕರಣದ ಮೂಲಕ ಆದೇಶಗಳನ್ನು ನೀಡುವ ವ್ಯವಸ್ಥೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಸರ್ಕಾರಿ ಕಚೇರಿಗಳಿಗೆ ಜನರು ಅಲೆಯುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದಲೇ ʼಇ-ಆಡಳಿತʼಕ್ಕೆ ಹೆಚ್ಚು ಒತ್ತಿ ನೀಡಲಾಗಿದೆ. ಇದೀಗ ಕಲಾಪಗಳನ್ನು ಆನ್ಲೈನ್ ಮೂಲಕ ನಡೆಸುವ ವ್ಯವಸ್ಥೆ ಮಾಡಲಾಗುತ್ತಿದೆ” ಎಂದಿದ್ದಾರೆ.
“ನ್ಯಾಯಾಲಯ ಕಲಾಪಗಳ ನೇರ ಪ್ರಸಾರ ಮತ್ತು ವಿಡಿಯೋ ಸಂವಾದ ಪಾರರ್ಶಕತೆ, ಶಿಸ್ತು ಮತ್ತು ಕಂದಾಯ ನ್ಯಾಯಾಲಯಗಳಲ್ಲಿನ ದುಷ್ಕೃತ್ಯದ ಆರೋಪಗಳಿಗೆ ಕಡಿವಾಣ ಹಾಕಲಿದೆ. ಆಡಳಿತಾತ್ಮಕ ಪ್ರಕ್ರಿಯೆಗಳಳನ್ನು ಸರಳೀಕರಿಸಲು ಮತ್ತು ಸಾರ್ವಜನಿಕ ಸೇವೆಗಳನ್ನು ನಾಗರಿಕ ಸ್ನೇಹಿ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ತಲುಪಿಸುವ ಉದ್ದೇಶದ ಈ ವ್ಯವಸ್ಥೆಗೆ ಜನರ ಸ್ಪಂದನೆ ಪರಿಗಣಿಸಿ, ಹಂತಹಂತವಾಗಿ ವಿಸ್ತರಿಸಲಾಗುವುದು” ಎಂದು ವಿವರಿಸಿದ್ದಾರೆ.
ಇದರಿಂದ ಕಂದಾಯ ನ್ಯಾಯಾಲಯ ವಿಚಾರಣೆಗೆ ಕಚೇರಿಗೆ ಅಲಿಯುವುದು ತಪ್ಪಲಿದೆ. ಕಕ್ಷಿದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗವಹಿಸಬಹುದು. ಕಲಾಪಗಳ ನೇರ ಪ್ರಸಾರ ಇರುವುದರಿಂದ ಆದೇಶ ಬಹಿರಂಗವಾಗಿರಲಿದೆ. ಕಂದಾಯ ನ್ಯಾಯಾಲಯಗಳಲ್ಲಿ ಕಣ್ಣಾಮುಚ್ಚಾಲೆ ನಡೆಯುತ್ತದೆ ಎಂಬ ಆರೋಪಗಳಿಗೆ ಕಡಿವಾಣ ಬೀಳಲಿದೆ.