ಇವಿಎಂ-ವಿವಿಪ್ಯಾಟ್ ತಾಳೆ ತೀರ್ಪು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚಲಾವಣೆಯಾದ ಮತಗಳೊಂದಿಗೆ ಎಲ್ಲಾ ವಿವಿಪ್ಯಾಟ್ ಚೀಟಿಗಳನ್ನು ತಾಳೆ ಮಾಡಲು ನಿರ್ದೇಶಿಸುವಂತೆ ಕೋರಿದ್ದ ಅರ್ಜಿಯನ್ನು ಕಳೆದ ತಿಂಗಳು ನ್ಯಾಯಾಲಯ ತಿರಸ್ಕರಿಸಿತ್ತು.
Supreme Court, EVM
Supreme Court, EVM

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚಲಾವಣೆಯಾದ ಮತಗಳೊಂದಿಗೆ ಎಲ್ಲಾ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಚೀಟಿಗಳನ್ನು ತಾಳೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ [ಅರುಣ್ ಕುಮಾರ್ ಅಗರ್ವಾಲ್ ವಿರುದ್ಧ ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ].

ಏಪ್ರಿಲ್ 26ರ ತೀರ್ಪಿನಲ್ಲಿ ತಪ್ಪುಗಳು ಮತ್ತು ದೋಷಗಳು ಸ್ಪಷ್ಟವಾಗಿ ಕಾಣುತ್ತಿವೆ ಎಂದು ಅರ್ಜಿದಾರರಾದ ಅರುಣ್ ಕುಮಾರ್ ಅಗರ್‌ವಾಲ್‌ ಅವರು ಪ್ರತಿಪಾದಿಸಿದ್ದಾರೆ.

"ವಿವಿಪಿಎಟಿ ಸ್ಲಿಪ್‌ಗಳೊಂದಿಗೆ ಇವಿಎಂ ಮತಗಳನ್ನು ಎಣಿಸಿದರೆ ಫಲಿತಾಂಶ ಅಸಮಂಜಸ ರೀತಿಯಲ್ಲಿ ವಿಳಂಬವಾಗುತ್ತದೆ ಅಥವಾ ಅಗತ್ಯವಿರುವ ಮಾನವಶಕ್ತಿಯು ಈಗಾಗಲೇ ನಿಯೋಜಿಸುವುದಕ್ಕಿಂತಲೂ ದುಪ್ಪಟ್ಟು ಆಗುತ್ತದೆ ಎಂದು ಹೇಳುವುದು ಸರಿಯಲ್ಲ... ಮತ ಎಣಿಕೆ ಹಾಲ್‌ಗಳಲ್ಲಿ ಅಸ್ತಿತ್ವದಲ್ಲಿರುವ ಸಿಸಿಟಿವಿ ಕಣ್ಗಾವಲು ವಿವಿಪ್ಯಾಟ್ ಚೀಟಿ ಎಣಿಕೆಯಲ್ಲಿ ಅಕ್ರಮ ನಡೆಯದಂತೆ ನೋಡಿಕೊಳ್ಳುತ್ತದೆ,’’ ಎಂದು ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.

ಮನವಿಯ ಪ್ರಮುಖಾಂಶಗಳು

  • ಚಿಹ್ನೆ ಭರ್ತಿ ಮಾಡುವ ಘಟಕಗಳ (ಸಿಂಬಲ್‌ ಲೋಡಿಂಗ್ ಯುನಿಟ್‌- ಎಸ್‌ ಎಲ್‌ಯು) ಕುರಿತಾದ ಚರ್ಚೆ ದುರ್ಬಲವಾಗಿದ್ದು ಅದನ್ನು ಲೆಕ್ಕ ಹಾಕುವ ಅಗತ್ಯವಿದೆ ಎಂಬ ಅಂಶವನ್ನು ತೀರ್ಪು ನಿರ್ಲಕ್ಷಿಸಿದೆ.

  • ಎಸ್‌ಎಲ್‌ಯುನ ದತ್ತಾಂಶ ಅಗತ್ಯ ಚಿತ್ರಗಳನ್ನು ಹೊರತುಪಡಿಸಿ ಹೆಚ್ಚುವರಿ ಬೈಟ್‌ಗಳನ್ನು ಹೊಂದಿರುವ ಸಾಧ್ಯತೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ಕಡೆಗಣಿಸಿದೆ.

  • ಶೇಕಡಾ 5ರಷ್ಟು ವಿವಿಪ್ಯಾಟ್‌ ಸ್ಲಿಪ್‌ಗಳು ಚಲಾವಣೆಯಾದ ಮತಗಳೊಂದಿಗೆ ತಾಳೆಯಾಗುತ್ತವೆ ಎಂದು ತಪ್ಪಾಗಿ ತೀರ್ಪು ನೀಡಲಾಗಿದೆ.

  • ಆದರೆ ವಾಸ್ತವಿಕವಾಗಿ ಕೇವಲ 1.97 ಶೇಕಡಾ VVPAT ಸ್ಲಿಪ್‌ಗಳು EVM ಮತಗಳೊಂದಿಗೆ ತಾಳೆಯಾಗುತ್ತಿವೆ.

  • ಯಾರಿಗೆ ಮತಹಾಕಿದ್ದೇವೆ ಎಂಬುದನ್ನು ಪರಿಶೀಲಿಸಲು ಮತದಾರರಿಗೆ ಇವಿಎಂಗಳು ಅನುಮತಿಸುವುದಿಲ್ಲ.

  • ಅಲ್ಲದೆ ಇವುಗಳ ಸ್ವರೂಪ ಗಮನಿಸಿದರೆ ವಿನ್ಯಾಸಕರು, ಪ್ರೋಗ್ರಾಮರ್‌ಗಳು, ತಯಾರಕರು, ನಿರ್ವಹಣೆ ತಂತ್ರಜ್ಞರು ಮುಂತಾದ ಒಳಗಿನವರಿಂದ ದುರುದ್ದೇಶಪೂರಿತ ಬದಲಾವಣೆಗಳಿಗೆ ಇವಿಎಂಗಳು ವಿಶೇಷವಾಗಿ ಗುರಿಯಾಗುತ್ತವೆ ಎನ್ನಬಹುದು.

ವಕೀಲೆ ನೇಹಾ ರಾಠಿ ಮೂಲಕ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ.

ಏಪ್ರಿಲ್ 26 ರಂದು ಅರ್ಜಿ ತಿರಸ್ಕರಿಸಿದ್ದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ಅವರಿದ್ದ ಪೀಠ ಇವಿಎಂ ಬದಲು ಮತಪತ್ರ ಆಧಾರಿತ ಚುನಾವಣಾ ವ್ಯವಸ್ಥೆಗೆ ಮರಳುವಂತೆ ನೀಡಿದ್ದ ಸಲಹೆಯನ್ನೂ ತಿರಸ್ಕರಿಸಿತ್ತು.

ಅರ್ಜಿ ವಜಾಗೊಳಿಸುವಾಗ ನ್ಯಾಯಾಲಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ನಂಬಿಕೆ ಮತ್ತು ಸಹಭಾಗಿತ್ವದ ಸಂಸ್ಕೃತಿಯನ್ನು ಪೋಷಿಸುವ ಅಗತ್ಯದ ಬಗ್ಗೆ ತಿಳಿಸಿತ್ತು. ಆದಾರೂ ಇವಿಎಂಗಳ ವಿಶ್ವಾಸಾರ್ಹತೆ ಹೆಚ್ಚಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅದು ಸೂಚಿಸಿತ್ತು.

Kannada Bar & Bench
kannada.barandbench.com