ರಸ್ತೆ ಅಪಘಾತ ಪ್ರಕರಣ ಪರಿಹಾರ: ಪೊಲೀಸ್‌ ಐಟಿ ವ್ಯವಸ್ಥೆ ಜೊತೆಗೆ ವಿವಿಧ ಇಲಾಖೆಗಳ ಮಾಹಿತಿ ಸಂಯೋಜನೆಗೆ ಹೈಕೋರ್ಟ್‌ ಆದೇಶ

ಎಲ್ಲ ಪೊಲೀಸ್ ಅಧಿಕಾರಿಗಳು ಎಫ್‌ಎಆರ್ ದಾಖಲಿಸಿದ ನಂತರ ಮೋಟಾರು ವಾಹನ ಕಾಯಿದೆ ಸೆಕ್ಷನ್ 159 ಅನ್ನು ಪಾಲಿಸಬೇಕು. ಆಗ ನ್ಯಾಯಾಲಯ ಎಫ್‌ಎಆರ್‌ಅನ್ನು ಪರಿಹಾರದ ಅರ್ಜಿ ಎಂದು ಪರಿಗಣಿಸಿ ವಿಚಾರಣಾ ಪ್ರಕ್ರಿಯೆ ಆರಂಭಿಸಬಹುದು ಎಂದಿರುವ ಪೀಠ.
Justice Suraj Govindaraj and Karnataka HC, Kalburgi bench
Justice Suraj Govindaraj and Karnataka HC, Kalburgi bench

ರಸ್ತೆ ಅಪಘಾತ ಪ್ರಕರಣಗಳಲ್ಲಿ ಪರಿಹಾರದ ಅರ್ಜಿಗಳ ಶೀಘ್ರ ವಿಲೇವಾರಿಗೆ ಪೊಲೀಸ್ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಜೊತೆಗೆ ರಸ್ತೆ ಅಪಘಾತ ದತ್ತಾಂಶ, ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ವಿಮಾ ಇಲಾಖೆಯನ್ನು ಸಂಯೋಜಿಸಬೇಕು ಎಂಬುದೂ ಸೇರಿದಂತೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಹಲವು ಪ್ರಮುಖ ನಿರ್ದೇಶನಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ.

ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪರಿಹಾರ ಕೋರಿ ಅರ್ಜಿ ಸಲ್ಲಿಕೆ ವಿಳಂಬವಾಗಿದೆ ಎಂದು ವಿಮಾ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ಮೋಟಾರು ವಾಹನ ಅಪಘಾತ ಕಾಯಿದೆ ಇರುವುದೇ ಸಂತ್ರಸ್ತರಿಗೆ ಅನುಕೂಲಕ್ಕಾಗಿ, ಅದರಲ್ಲಿನ ತಾಂತ್ರಿಕ ಅಂಶಗಳೂ ಸೇರಿದಂತೆ ಎಲ್ಲ ಅಂಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಹೇಳಿದೆ.

ಮೋಟಾರು ವಾಹನ ಅಪಘಾತ ಕಾಯಿದೆಗೆ 2019ರಲ್ಲಿ ತಿದ್ದುಪಡಿ ಮಾಡಲಾಗಿದ್ದು, 2022ರಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಅದರಂತೆ ಅಪಘಾತ ನಡೆದ ಸಮಯದಲ್ಲಿ ತನಿಖಾಧಿಕಾರಿ ದಾಖಲಿಸುವ ಮೊದಲ ಅಪಘಾತ ವರದಿಯನ್ನೇ (ಎಫ್‌ಎಆರ್) ಪರಿಹಾರದ ಅರ್ಜಿ ಎಂದು ಪರಿಗಣಿಸಬಹುದಾಗಿದೆ. ಹೀಗಾಗಿ ಅರ್ಜಿದಾರರು ತಡವಾಗಿ ಪರಿಹಾರ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಮಾ ಕಂಪನಿಯ ವಾದವನ್ನು ಪುರಸ್ಕರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ತನಿಖಾಧಿಕಾರಿ ಎಫ್‌ಎಆರ್ ಅನ್ನು ನ್ಯಾಯಾಲಯಕ್ಕೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಪರಿಹಾರ ಅರ್ಜಿ ಸಲ್ಲಿಸುವಲ್ಲಿ ವಿಳಂಬವಾಗಿದೆ ಎನ್ನುವ ವಾದದಲ್ಲಿ ಅರ್ಥವಿಲ್ಲ. ಎಲ್ಲ ಪೊಲೀಸ್ ಅಧಿಕಾರಿಗಳು ಎಫ್‌ಎಆರ್ ದಾಖಲಿಸಿದ ನಂತರ ಮೋಟಾರು ವಾಹನ ಕಾಯಿದೆ ಸೆಕ್ಷನ್ 159 ಅನ್ನು ಪಾಲಿಸಬೇಕು. ಆಗ ನ್ಯಾಯಾಲಯ ಎಫ್‌ಎಆರ್ ಅನ್ನು ಪರಿಹಾರದ ಅರ್ಜಿ ಎಂದು ಪರಿಗಣಿಸಿ ವಿಚಾರಣಾ ಪ್ರಕ್ರಿಯೆ ಆರಂಭಿಸಬಹುದು ಎಂದು ಪೀಠ ಆದೇಶಿಸಿದೆ.

ನ್ಯಾಯಾಲಯದ ನಿರ್ದೇಶನಗಳು ಇಂತಿವೆ

  • ಕೇಂದ್ರ ಮೋಟಾರು ವಾಹನ ತಿದ್ದುಪಡಿ ನಿಯಮ 2022 ಪರಿಣಾಮಕಾರಿ ಜಾರಿಗೆ ಡಿಜಿಪಿ, ಸಾರಿಗೆ ಆಯುಕ್ತರು, ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಇ-ಆಡಳಿತ ಇಲಾಖೆ ಕಾರ್ಯದರ್ಶಿ ಕ್ರಮ ಕೈಗೊಳ್ಳಬೇಕು.

  • ರಾಜ್ಯ ಪೊಲೀಸ್ ಇಲಾಖೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ಪರಿವಾಹನ್ ವೆಬ್‌ಸೈಟ್ ಜೊತೆ ರಸ್ತೆ ಅಪಘಾತ ದತ್ತಾಂಶ/ಇ-ಡಿಟೈಲ್ ಆಕ್ಸಿಡೆಂಟ್ ರಿಪೋರ್ಟ್ (ಇ-ಡಿಎಆರ್) ಅನ್ನು ಸಂಯೋಜಿಸಬೇಕು.

  • ಪೊಲೀಸ್ ಇಲಾಖೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ರೂಪಿಸಿರುವ ಯೂನಿಕ್ ಡಿಸೇಬಿಲಿಟಿ ಐಡಿ ವೆಬ್ ತಾಣದ ಜೊತೆ ದತ್ತಾಂಶವನ್ನು ಸಂಯೋಜಿಸಬೇಕು. ಜೊತೆಗೆ ಕರ್ನಾಟಕ ಸರ್ಕಾರದಡಿ ಬರುವ ಎಫ್‌ಎಸ್‌ಎಲ್‌ಗಳು ನೀಡಿರುವ ವರದಿಗಳನ್ನು ವಾಹನ್ ವೆಬ್‌ಸೈಟ್‌ನಲ್ಲಿ ಹಾಕಬೇಕು.

  • ದೇಶಾದ್ಯಂತ ವಿಮಾ ಸೇವೆ ಒದಗಿಸುತ್ತಿರುವ ವಿಮಾ ಕಂಪೆನಿಗಳು ಅಪಘಾತಕ್ಕೊಳಗಾದ ವಾಹನಗಳಿಗೆ ಮಾಡಿಸಿರುವ ವಿಮೆಯ ವಿವರಗಳನ್ನು ಪೊಲೀಸ್ ಇಲಾಖೆ ಇಂಟಿಗ್ರೇಟ್ ಮಾಡಬೇಕು.

  • ರಸ್ತೆ ಅಪಘಾತದಲ್ಲಿ ತೊಡಗಿರುವ ವಾಹನ, ಅದರ ಮಾಲೀಕರು, ಚಾಲಕರು ಮತ್ತಿತರ ವಿವರಗಳನ್ನು ಸಾರಿಗೆ ಇಲಾಖೆಯಿಂದ ಪಡೆದು ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು.

  • ಮೇಲಿನ ಎಲ್ಲಾ ದಾಖಲೆಗಳು ನ್ಯಾಯಾಲಯದ ಕೇಸ್ ಇನ್ಫರ್ಮೇಷನ್‌ ವ್ಯವಸ್ಥೆಯಲ್ಲಿ ಲಭ್ಯವಾಗುವಂತೆ ಮಾಡಬೇಕು.

  • ಈ ಎಲ್ಲ ನಿರ್ದೇಶನಗಳನ್ನು ಪಾಲಿಸಲು ನಾಲ್ಕು ವಾರಗಳಲ್ಲಿ ಈ ಕುರಿತು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು

Attachment
PDF
United India Insurance Company Ltd Vs Ramu @ Ramesh.pdf
Preview

Related Stories

No stories found.
Kannada Bar & Bench
kannada.barandbench.com