ಅಕ್ರಮ ಹಣ ವರ್ಗಾವಣೆ: ಸಂಜಯ್ ರಾವುತ್ ಮೇಲ್ನೋಟಕ್ಕೆ ಕೃತ್ಯದಲ್ಲಿ ಭಾಗಿ; ಇ ಡಿ ಆರೋಪಪಟ್ಟಿ ಪರಿಗಣಿಸಿದ ಮುಂಬೈ ನ್ಯಾಯಾಲಯ

ಕಳೆದ ವಾರ ಸಲ್ಲಿಸಲಾಗಿದ್ದ 5 ಸಂಪುಟಗಳಷ್ಟಿದ್ದ ಆರೋಪಪಟ್ಟಿಯನ್ನು ಇಂದು ಸಂಜ್ಞೇಯ ಗಣನೆಗೆ ತೆಗೆದುಕೊಂಡ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನದಲ್ಲಿರುವ ರಾವುತ್ ಅವರಿಗೆ ಸಮನ್ಸ್ ಜಾರಿಗೊಳಿಸಿತು.
Sanjay Raut, ED
Sanjay Raut, ED Facebook

ಶಿವಸೇನಾ ಸಂಸದ ಸಂಜಯ್‌ ರಾವುತ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಐದು ಸಂಪುಟಗಳ ಆರೋಪಪಟ್ಟಿಯನ್ನು ಸೋಮವಾರ ಸಂಜ್ಞೇಯ ಗಣನೆಗೆ ತಗೆದುಕೊಂಡಿರುವ ಮುಂಬೈನ ನ್ಯಾಯಾಲಯವೊಂದು ಪತ್ರಾ ಚಾಲ್ ಭೂ ಹಗರಣ ಮತ್ತು ಅದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ  ಮೇಲ್ನೋಟಕ್ಕೆ ರಾವುತ್‌ ಅವರ ಪಾತ್ರ ಇರುವಂತಿದೆ ಎಂದು ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ವಿಶೇಷ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಸೋಮವಾರ ಆರೋಪಪಟ್ಟಿ ಪರಿಗಣಿಸಿದರಾದರೂ ಆ ಕುರಿತ ಆದೇಶದ ಪ್ರತಿ ಮಾಧ್ಯಮಗಳಿಗೆ ತಡವಾಗಿ ಲಭಿಸಿದೆ.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಿವಸೇನಾ ಸಂಸದ ರಾವುತ್ ಇ ಡಿ ಕಸ್ಟಡಿ ಅವಧಿ ಆ. 8ರವರೆಗೆ ವಿಸ್ತರಿಸಿದ ಮುಂಬೈ ನ್ಯಾಯಾಲಯ

ನ್ಯಾಯಾಧೀಶರ ಅವಲೋಕನ

  • ಕಿಯಾನಾ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಪ್ರಾರಂಭವಾದ ₹ 1,039 ಕೋಟಿ ಹಣದ ವ್ಯವಹಾರ. ರಾವುತ್‌ ಅವರಿಗೆ ಅವರ ಪತ್ನಿ ಮೂಲಕ ಸಂದಾಯವಾದ ಹಣ ₹ 1.06 ಕೋಟಿ.

  • ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್ 50ರ ಪ್ರಕಾರ ದಾಖಲಿಸಲಾದ ಸಾಕ್ಷ್ಯ ಮತ್ತು ಹೇಳಿಕೆಗಳ ಪ್ರಕಾರ ರಾವುತ್‌ ಅಪರಾಧ ಕೃತ್ಯದಲ್ಲಿ ಭಾಗವಹಿಸಿದ್ದಾರೆ.

  • ರಾವುತ್ ವಿರುದ್ಧ ವಿಚಾರಣೆ ನಡೆಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಆಧಾರಗಳಿವೆ.

ಈ ಅವಲೋಕನಗಳೊಂದಿಗೆ, ನ್ಯಾಯಾಲಯವು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೋಮವಾರ ರಾವುತ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿತ್ತು. ಅದರಂತೆ ರಾವುತ್‌ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದರು. ಅವರ ಹಾಜರಾತಿಯನ್ನು ಗಮನಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 27, 2022ಕ್ಕೆ ನಿಗದಿಪಡಿಸಿದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
ED_v__Sanjay_Raut__Sept_19_.pdf
Preview

Related Stories

No stories found.
Kannada Bar & Bench
kannada.barandbench.com