ರಾಜ್ಯದಲ್ಲಿ 16,500 ವೈದ್ಯಕೀಯ ಸಿಬ್ಬಂದಿ, 454 ಆರೋಗ್ಯ ಕೇಂದ್ರಗಳ ಕೊರತೆ: ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಪಿಐಎಲ್‌

"ಪ್ರಕರಣದಲ್ಲಿ ದೊಡ್ಡಮಟ್ಟದ ಸಾರ್ವಜನಿಕ ಹಿತಾಸಕ್ತಿ ಅಡಗಿದ್ದು, ಈ ಮಾಧ್ಯಮ ವರದಿಯ ಸಂಜ್ಞೇಯ ಪರಿಗಣಿಸಲಾಗಿದೆ. ವಕೀಲ ಶ್ರೀಧರ್‌ ಪ್ರಭು ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ” ಎಂದು ಆದೇಶಿಸಿದ ಪೀಠ.
Karnataka High Court and doctor
Karnataka High Court and doctor

ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್‌ಸಿ) ಕೊರತೆಯ ಕುರಿತು ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ವರದಿ ಕುರಿತು ಸಂಜ್ಞೇಯ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.

ದಿನದ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಮಾಧ್ಯಮ ವರದಿಯನ್ನು ಉಲ್ಲೇಖಿಸಿತು.

“ರಾಜ್ಯದಲ್ಲಿ 16,500 ವೈದ್ಯಕೀಯ ಸಿಬ್ಬಂದಿ ಮತ್ತು 454 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದೆ. ಈ ಕುರಿತ ಮಾಧ್ಯಮ ವರದಿಯಲ್ಲಿನ ಇತರೆ ಅಂಶಗಳನ್ನು ಗಮನಿಸಲಾಗಿದ್ದು ಈ ವಿಚಾರವನ್ನು ತುರ್ತಾಗಿ ಆಲಿಸಬೇಕಿದೆ. ಇದರಲ್ಲಿ ದೊಡ್ಡಮಟ್ಟದ ಸಾರ್ವಜನಿಕ ಹಿತಾಸಕ್ತಿ ಅಡಗಿದ್ದು, ಈ ಮಾಧ್ಯಮ ವರದಿಯನ್ನು ಆಧರಿಸಿ ಸಂಜ್ಞೇಯ ಪರಿಗಣಿಸಲಾಗಿದೆ. ವಕೀಲ ಶ್ರೀಧರ್‌ ಪ್ರಭು ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.

“ಅಮಿಕಸ್‌ಗೆ ವಕೀಲ ವಚನ್‌ ಅವರು ಸಹಾಯ ಮಾಡಲಿದ್ದಾರೆ. ವಚನ್‌ ಅವರು ಪ್ರೊಫಾರ್ಮಾ ಅರ್ಜಿಯನ್ನು ಎರಡು ವಾರದಲ್ಲಿ ಸಲ್ಲಿಸಬೇಕು. ಪ್ರೊಫಾರ್ಮಾ ಅರ್ಜಿ ಸಲ್ಲಿಕೆಯಾದ ಬಳಿಕ ರಿಜಿಸ್ಟ್ರಿ ಆ ಅರ್ಜಿಯನ್ನು ಮುಂದಿನ ಆದೇಶಕ್ಕೆ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಎಫ್‌ಐಸಿಸಿಐ) ಕಳೆದ ಸೆಪ್ಟೆಂಬರ್‌ನಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜ್ಯವು ಒಂದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಗುರಿ ಸಾಧಿಸಬೇಕಾದರೆ ಆರೋಗ್ಯ, ಕೃಷಿ, ಗಣಿ, ಪ್ರವಾಸೋದ್ಯಮ, ಶಿಕ್ಷಣ, ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ಕಾಣಬೇಕಿದೆ ಎಂದಿದ್ದು, ಇದಕ್ಕೆ ಸಂಬಂಧಿಸಿದಂತೆ 260 ಸಲಹೆಗಳನ್ನು ನೀಡಿದೆ.

ವರದಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 454 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 16,500 ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ ಎನ್ನಲಾಗಿದೆ. ಇದರಲ್ಲಿ 723 ಎಂಬಿಬಿಎಸ್‌ ವೈದ್ಯರು, 7,492 ನರ್ಸ್‌ಗಳು, 1,517 ಲ್ಯಾಬ್‌ ಟೆಕ್ನೀಶಿಯನ್ಸ್‌, 1,512 ಫಾರ್ಮಸಿಸ್ಟ್‌, 1,752 ಸಹಾಯಕರು ಮತ್ತು 3,253 ʼಡಿʼ ಗ್ರೂಪ್‌ ಸಿಬ್ಬಂದಿ ಹುದ್ದೆಗಳು ಸೇರಿವೆ ಎಂದು ಎಫ್‌ಐಸಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಆಧರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿತ್ತು. ಈ ವರದಿಯ ಸಂಜ್ಞೇ ಪರಿಗಣಿಸಿರುವ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪಿಐಎಲ್‌ ದಾಖಲಿಸಿಕೊಂಡಿದೆ.

Related Stories

No stories found.
Kannada Bar & Bench
kannada.barandbench.com