

ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ದಕ್ಷಿಣ ಕೊರಿಯಾದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಎಐಎಲ್ ಸಿಬ್ಬಂದಿಯ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಸೋಮವಾರ ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಬಿಐಎಎಲ್ ಸಿಬ್ಬಂದಿ ಮೊಹಮ್ಮದ್ ಅಫಾನ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
“ಸಂತ್ರಸ್ತೆಯು ಇನ್ನೊಂದು ದೇಶದ ಮಹಿಳೆ.. ಅರ್ಜಿದಾರ ಏನು ಮಾಡಿದ್ದಾನೆ ಎಂಬುದನ್ನು ಆಕೆ ವಿವರಿಸಿದ್ದಾರೆ. ಆಕೆಯನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದಿದ್ದೇಕೆ?” ಎಂದು ಖಾರವಾಗಿ ಪ್ರಶ್ನಿಸಿತು.
“ಸಂತ್ರಸ್ತೆಯನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದು ಎರಡೂ ಕೈಗಳನ್ನು ಅರ್ಧ ಎತ್ತಿ (ಟಿ ಪೊಷಿಷನ್) ನಿಲ್ಲುವಂತೆ ಮಾಡಿ, ಆಕೆಯ ಅನುಮತಿ ಇಲ್ಲದೇ ಖಾಸಗಿ ಅಂಗಗಳನ್ನು ಮುಟ್ಟಿದ್ದೀರಿ. ನೀವೆಂಥಾ ಅಧಿಕಾರಿ? ನಿಮ್ಮನ್ನು ಸುಮ್ಮನೆ ಬಿಡಬೇಕೆ? ಹೇಳಿ.. ಮಹಿಳಾ ಶೌಚಾಲಯದಲ್ಲಿ ಬೇರೊಬ್ಬರು ಇದ್ದರು ಎಂದು ಸಮರ್ಥನೆ ಬೇರೆ ನೀಡಿದ್ದೀರಿ?” ಎಂದು ಪೀಠವು ಆಕ್ರೋಶ ವ್ಯಕ್ತಪಡಿಸಿ, ಅರ್ಜಿ ವಜಾಗೊಳಿಸಿತು.
ಪ್ರಕರಣದ ಹಿನ್ನೆಲೆ: 2026ರ ಜನವರಿ 19ರಂದು ದಕ್ಷಿಣ ಕೊರಿಯಾದ 32 ವರ್ಷದ ಯುವತಿಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊರಿಯಾಗೆ ತೆರಳು ಆಗಮಿಸಿದ್ದರು. ಇಮಿಗ್ರೇಷನ್ ತಪಾಸಣೆ ಮುಗಿಸಿ ತೆರಳುವ ವೇಳೆ ಬಿಎಐಎಲ್ನ ಸಿಬ್ಬಂದಿಯೊಬ್ಬರು ಆಕೆಯ ಬಳಿ ಬಂದು ವಿಮಾನ ಟಿಕೆಟ್ ಪರಿಶೀಲಿಸಿದ್ದರು. ಆನಂತರ ಆಕೆಯ ಚೆಕ್ ಇನ್ ಬ್ಯಾಗೇಜ್ ಕುರಿತು ಸಮಸ್ಯೆ ಇದೆ ಎಂದು ಹೇಳಿ, ಬ್ಯಾಗ್ ತಪಾಸಣೆ ಮಾಡಿ ಅದರಲ್ಲಿ ಬೀಫ್ ಶಬ್ದ ಬಂದಿದೆ ಎಂದು ತಿಳಿಸಿ, ಮತ್ತೆ ತಪಾಸಣೆಗೆ ಹೋದರೆ ಸಮಯವಾಗುತ್ತದೆ. ನಿಮ್ಮನ್ನು ವೈಯಕ್ತಿಕವಾಗಿ ತಪಾಸಣೆ ಮಾಡಬೇಕು ಎಂದು ಹೇಳಿ ಪುರುಷರ ಶೌಚಾಲಯಕ್ಕೆ ಕರೆದೊಯ್ದು, ಅಲ್ಲಿ ಸಂತ್ರಸ್ತೆಯ ಅನುಮತಿ ಪಡೆಯದೇ ಆಕೆಯ ಎದೆಯ ಭಾಗ ಮತ್ತು ಹಿಂಭಾಗ ಮುಟ್ಟಿದ್ದನು. ಆನಂತರ ಆಕೆಯ ಎದೆಯನ್ನು ಪುನಾ ಸ್ಪರ್ಶಿಸಿ, ಒತ್ತಿ ಹಿಡಿದಿದ್ದನು. ನಂತರ ತಿರುಗಿಕೊಳ್ಳಲು ಹೇಳಿ, ಮತ್ತೆ ಹಿಂದಿನಿಂದ ಎದೆಯನ್ನು ಸ್ಪರ್ಶಿಸಿದ್ದನು. ಇದಕ್ಕೆ ಒಪ್ಪದೇ ಇದ್ದಾಗ ಏಕಾಏಕಿ ಅಪ್ಪಿಕೊಂಡು ಧನ್ಯವಾದ ಹೇಳಿ, ಕಳುಹಿಸಿದ್ದನು ಎಂದು ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನು ಆಧರಿಸಿ ಬಿಐಎಎಲ್ ಪೊಲೀಸರು ಬಿಎನ್ ಸೆಕ್ಷನ್ 75(1)(i) ಅಡಿ ಪ್ರಕರಣ ದಾಖಲಿಸಿದ್ದಾರೆ.