
ಆಯುಷ್ ಇಲಾಖೆ ಮುಚ್ಚುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದೆ ಇಲ್ಲ. ಆಡಳಿತ ವ್ಯವಸ್ಥೆ ಸುಧಾರಿಸಲು ಆಂತರಿಕವಾಗಿ ಮಾರ್ಪಾಡು ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ಈಚೆಗೆ ಕರ್ನಾಟಕ ಹೈಕೋರ್ಟ್ಗೆ ಮೌಖಿಕವಾಗಿ ತಿಳಿಸಿದೆ.
ಔಷಧಿಗಳ ಅಮಲುಜಾರಿ ವಿಭಾಗ ಮತ್ತು ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜೊತೆ ವಿಲೀನಗೊಳಿಸುವುದಕ್ಕೆ ಆಕ್ಷೇಪಿಸಿ ರಾಜ್ಯ ಔಷಧ ಉತ್ಪಾದಕರ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಹಾಲಿ ಇರುವ ಆಯುಷ್ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿಲೀನ ನಡೆಸುವುದಿಲ್ಲ ಎಂದು ಸರ್ಕಾರ ಹೇಳಿದೆ. ರಾಜ್ಯ ಔಷಧ ಉತ್ಪಾದಕರ ಸಂಘದ ಸದಸ್ಯರ ಸ್ಥಳಗಳ ಪರಿಶೀಲನೆಗೆ ಅರ್ಹ ಇನ್ಸ್ಪೆಕ್ಟರ್ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಫಿಡವಿಟ್ ಸಲ್ಲಿಸಲು ಸ್ವತಂತ್ರವಾಗಿದೆ” ಎಂದು ನ್ಯಾಯಾಲಯ ಆದೇಶಿಸಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಪರ ವಕೀಲ ಪಿ ಪ್ರಸನ್ನಕುಮಾರ್ ಅವರು “ಆಯುಷ್ ಇಲಾಖೆಯನ್ನು ಅಲೋಪತಿ ಔಷಧಿಗಳ ಇಲಾಖೆಯ ಜೊತೆ ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಮಾಡಿದೆ. ಇದು ಔಷಧ ಮತ್ತು ಕಾಂತಿವರ್ಧಕ ಕಾಯಿದೆಗೆ ವಿರುದ್ಧವಾಗಿದೆ. ಇದರಿಂದ ಅರ್ಜಿದಾರರ ಸ್ಥಳಗಳನ್ನು ಪ್ರಸ್ತಾವಿತ ಔಷಧ ಮತ್ತು ಕಾಂತಿವರ್ಧಕ ನಿಯಮಗಳಡಿ ಅನರ್ಹ ಇನ್ಸ್ಪೆಕ್ಟರ್ಗಳು ಪರಿಶೀಲನೆ ಮಾಡಲು ಅವಕಾಶ ಮಾಡಿಕೊಡಲಿದೆ” ಎಂದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿ ಭೂಷಣ್ ಅವರು “ಔಷಧ ಪರವಾನಗಿ ಪ್ರಾಧಿಕಾರವನ್ನು ಔಷಧ ನಿಯಂತ್ರಕರ ಕಚೇರಿಯೊಂದಿಗೆ ವಿಲೀನಗೊಳಿಸುವುದು ಔಷಧ ಮತ್ತು ಕಾಂತಿವರ್ಧಕ ನಿಯಮಗಳು ಮತ್ತು ಕಾಯಿದೆಗೆ ವಿರುದ್ಧ” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ರೊಬೆನ್ ಜಾಕಬ್ ಅವರು “29.07.2025ರಂದು ಹೊರಡಿಸಿರುವ ಆಕ್ಷೇಪಿತ ಆದೇಶವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿ ಬರುವ ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಹಾರ ಮತ್ತು ಸುರಕ್ಷತೆ ಮತ್ತು ಔಷಧ ನಿಯಂತ್ರಕರ ಆಯುಕ್ತಾಲಯಗಳಿಗೆ ಸಂಬಂಧಿಸಿದ ಆಂತರಿಕ ವ್ಯವಸ್ಥೆಯಾಗಿದೆ. 13.12.2024ರಂದು ಔಷಧ ನಿಯಂತ್ರಕರ ಕಚೇರಿಯನ್ನು ಆಹಾರ ಮತ್ತು ಸುರಕ್ಷತಾ ಆಯುಕ್ತಾಲಯದ ಜೊತೆ ವಿಲೀನಗೊಳಿಸಲಾಗಿದ್ದು, ಇದು ಆಡಳಿತಾತ್ಮಕ ವ್ಯವಸ್ಥೆಯಾಗಿದೆ. ಆಯುಷ್ ಆಯುಕ್ತಾಲಯವು ಔಷಧ ಜಾರಿ ಮತ್ತು ವಿಶ್ಲೇಷಣೆ ಮತ್ತು ಆಯುಷ್ ಆಸ್ಪತ್ರೆಗಳ ಉಸ್ತುವಾರಿ ಮಾಡಲಿದೆ” ಎಂದರು.
ಮುಂದುವರಿದು, “ಆಯುಷ್ ಔಷಧ ಉತ್ಪಾದನಾ ಘಟಕಗಳ ಪರಿಶೀಲನೆಯಲ್ಲಿ ಸಮರ್ಥತೆ ಖಾತರಿಪಡಿಸಲು ಕಾಯಿದೆ ಸೆಕ್ಷನ್ 33ಜಿ ಅಡಿ ಮತ್ತು ಸಂಬಂಧಿತ ನಿಯಮದಡಿ ಉಲ್ಲೇಖಿತವಾಗಿರುವ ಪ್ರಕಾರ ಅರ್ಹರನ್ನು ನೇಮಕ ಮಾಡಲಾಗುತ್ತದೆ. ಈ ಸಂಬಂಧ ಸೂಕ್ತ ಅಫಿಡವಿಟ್ ಸಲ್ಲಿಸಲಾಗುವುದು. ಒಂದೊಮ್ಮೆ ನಿಯಮಕ್ಕೆ ವಿರುದ್ಧವಾಗಿ ಇನ್ಸ್ಪೆಕ್ಟರ್ಗಳು ಪರಿಶೀಲನೆ ನಡೆಸಿದರೆ ಅದು ಕಾನೂನಿಗೆ ವಿರುದ್ಧವಾಗಿರಲಿದ್ದು, ಅನೂರ್ಜಿತಗೊಳ್ಳಲಿದೆ” ಎಂದರು. ಅಂತಿಮವಾಗಿ ಬಳ್ಳಾರಿಯಲ್ಲಿ ಗರ್ಭಿಣಿಯರ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಎಎಜಿ ಪೀಠಕ್ಕೆ ವಿವರಿಸಿದರು.
2025ರ ಜುಲೈ 29ರಂದು ಆಯುಷ್ ಇಲಾಖೆಯ ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಿಗಳ ಅಮಲುಜಾರಿ ವಿಭಾಗ ಮತ್ತು ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯೊಂದಿಗೆ ವಿಲೀನಗೊಳಿಸಿ ಸರ್ಕಾರ ಆದೇಶಿಸಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.