
ಮಾಜಿ ಸಂಸದ ಪ್ರಜ್ವಲ್ ರೇವಣ್ಣರಿಂದ ಅತ್ಯಾಚಾರಕ್ಕೆ ಒಳಗಾಗಿರುವ ಆರೋಪ ಮಾಡಿರುವ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರು ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ. ಇದರಿಂದ ಭವಾನಿ ಅವರಿಗೆ ಸಂಕಷ್ಟ ಎದುರಾಗಿದೆ.
ಎಂಟನೇ ಆರೋಪಿ ಭವಾನಿ ರೇವಣ್ಣ ಅವರ ಸೂಚನೆಯಂತೆ ಸಂತ್ರಸ್ತೆಯನ್ನು ತನ್ನ ತೋಟದ ಮನೆಯಲ್ಲಿ ಒತ್ತೆಯಾಳಾಗಿಟ್ಟಿದ್ದ ಆರೋಪಕ್ಕೆ ಗುರಿಯಾಗಿರುವ ಏಳನೇ ಆರೋಪಿ ಕೆ ಎ ರಾಜಗೋಪಾಲ್ ಅವರು ಸಲ್ಲಿಸಿದ್ದ ಅರ್ಜಿ ಕೂಡ ತಿರಸ್ಕೃತವಾಗಿದೆ. 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ಅವರು ಅರ್ಜಿಗಳನ್ನು ವಜಾಗೊಳಿಸಿದ್ದಾರೆ.
2024ರ ಏಪ್ರಿಲ್ 22 ಮತ್ತು 24ರಂದು ಸಂತ್ರಸ್ತೆಯನ್ನು ಭವಾನಿ ಅವರ ಸೂಚನೆಯಂತೆ ಅಪಹರಿಸಿಲ್ಲ ಎಂದಾದರೂ ಆನಂತರದ ಘಟನೆಗಳು ಸಂತ್ರಸ್ತೆಯನ್ನು ಅಪಹರಿಸಿರುವಂತೆ ಕಾಣುತ್ತಿವೆ. ಸಂತ್ರಸ್ತೆಯು ತನಿಖಾಧಿಕಾರಿ ಮುಂದೆ ಸಿಆರ್ಪಿಸಿ ಸೆಕ್ಷನ್ 161 ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್ಪಿಸಿ ಸೆಕ್ಷನ್ 164 ಅಡಿ ದಾಖಲಿಸಿರುವ ಹೇಳಿಕೆಯಲ್ಲಿ ಭವಾನಿ ಪಾತ್ರದ ಕುರಿತು ಉಲ್ಲೇಖಿಸಿದ್ದಾರೆ. ಅಪಹರಣ ನಡೆದಿದೆ ಎನ್ನಲಾದ ದಿನದಂದು ಭವಾನಿ ಮತ್ತು ಇತರೆ ಆರೋಪಿಗಳ ನಡುವೆ ನಡೆದಿರುವ ಕರೆ ದಾಖಲೆ ವಿಶ್ಲೇಷಣೆ, ವಾಟ್ಸಾಪ್ ಕರೆ ದಾಖಲೆ ಮತ್ತು ಸಂತ್ರಸ್ತೆ ಹೇಳಿಕೆಯು ಮೇಲ್ನೋಟಕ್ಕೆ ಆಕೆಯನ್ನು ಒತ್ತೆಯಾಳಾಗಿ ಇಡುವುದಕ್ಕೆ ಮೇಲ್ನೋಟಕ್ಕೆ ಪಿತೂರಿ ನಡೆಸಿರುವುದಕ್ಕೆ ಪೂರಕವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮುಂದುವರೆದು, "ಸಂತ್ರಸ್ತೆಯ ಅಪಹರಣದಲ್ಲಿ ಭವಾನಿ ಪಾತ್ರ ಇದೆ ಎಂಬುದರ ಕುರಿತು ಕೆಲವು ಸಾಕ್ಷಿಗಳು ಸಮಗ್ರವಾಗಿ ಮಾಹಿತಿ ಒದಗಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಸಂತ್ರಸ್ತೆಯ ಪುತ್ರ/ದೂರುದಾರನ ಹೇಳಿಕೆಯು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸತೀಶ್ ಬಾಬಣ್ಣನು ಹೇಗೆ ಭವಾನಿ ಸೂಚನೆಯಂತೆ ತಮ್ಮ ತಾಯಿಯನ್ನು ಕರೆದೊಯ್ದು ಗುಪ್ತವಾಗಿ ರಾಜಗೋಪಾಲ್ ಅವರ ತೋಟದ ಮನೆಯಲ್ಲಿ ಒತ್ತೆಯಾಗಿಸಿದ್ದರು ಎಂಬುದಕ್ಕೆ ಪೂರಕವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ, “ಆರೋಪ ಪಟ್ಟಿ ಮತ್ತು ಮತ್ತಿತರ ದಾಖಲೆಗಳನ್ನು ಪರಿಶೀಲಿಸಿದಾಗ ಸಂತ್ರಸ್ತೆಯ ಅಪಹರಣದಲ್ಲಿ ಆರೋಪಿತ ಅಪರಾಧಕ್ಕೆ ಸಂಬಂಧಿಸಿದಂತೆ ರಾಜಗೋಪಾಲ್ ಮತ್ತು ಭವಾನಿ ಅವರ ಪಾತ್ರದ ಬಗ್ಗೆ ಸಾಕಷ್ಟು ದಾಖಲೆಗಳಿರುವುದರಿಂದ ಆರೋಪ ಮುಕ್ತಗೊಳಿಸಲು ಈ ಹಂತದಲ್ಲಿ ಅವರು ಅರ್ಹರಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರರಣದ ಹಿನ್ನೆಲೆ: ಪ್ರಜ್ವಲ್ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆಯೇ ಹಾಸನದ ಹೊಳೆನರಸೀಪುರದ ಗನ್ನಿಗಢ ತೋಟದ ಮನೆಯಲ್ಲಿ ಕೆಲಸಕ್ಕಿದ್ದ ಸಂತ್ರಸ್ತೆಯನ್ನು ಹೆಚ್ಚಿನ ವಿಚಾರ ಬಹಿರಂಗವಾಗುವುದನ್ನು ತಪ್ಪಿಸಲು ಮತ್ತು ಆನಂತರದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರವು ರಚಿಸಿದ ವಿಶೇಷ ತನಿಖಾ ದಳಕ್ಕೆ ಮಾಹಿತಿ ದೊರೆಯುವುದನ್ನು ತಪ್ಪಿಸಲು 2024ರ ಏಪ್ರಿಲ್ 29ರಂದು ಮೈಸೂರು ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಹೆಬ್ಬಾಳು ಗ್ರಾಮದಿಂದ ಸತೀಶ್ ಬಾಬಣ್ಣ ಸೂಚನೆಯಂತೆ 3ನೇ ಆರೋಪಿ ಸುಜಯ್ ಮತ್ತು 4ನೇ ಆರೋಪಿ ಮಧು ಅವರು ಅಪಹರಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಆಕೆಯನ್ನು ಬಿಡುಗಡೆ ಮಾಡುವಾಗ ಭವಾನಿ ಅವರ ಕಾರಿನ ಚಾಲಕನಾದ 9ನೇ ಆರೋಪಿ ಅಜಿತ್ಕುಮಾರ್ ಸಂತ್ರಸ್ತೆಯಿಂದ ಬಲವಂತವಾಗಿ ತನ್ನನ್ನು ಯಾರು ಅಪಹರಿಸಿಲ್ಲ ಎಂದು ಆಕೆಯೇ ಹೇಳುವ ಆಕೆ ಹೇಳಿಕೆ ದಾಖಲಿಸಿಕೊಂಡಿದ್ದನು. ಈ ಹೇಳಿಕೆಯನ್ನು ಆನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿತ್ತು ಎನ್ನಲಾಗಿದೆ.
ಇದರ ಬೆನ್ನಿಗೇ, ಸಂತ್ರಸ್ತೆಯ ಪುತ್ರ ರಾಜು ಅವರು 2024ರ ಮೇ 2ರಂದು ನೀಡಿದ ದೂರಿನ ಅನ್ವಯ ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ಗಳಾದ 365, 506, 504, 201, 109, 120B ಜೊತೆಗೆ 34 ಅಡಿ ಪ್ರಕರಣ ದಾಖಲಾಗಿತ್ತು. ಇಲ್ಲಿ ಎಚ್ ಡಿ ರೇವಣ್ಣ ಮತ್ತು ಸತೀಶ್ ಬಾಬು ಎಚ್ ಎನ್, ಸುಜಯ್, ಎಚ್ ಎನ್ ಮಧು, ಎಚ್ ಡಿ ಮನುಗೌಡ, ಎಸ್ ಟಿ ಕೀರ್ತಿ, ಕೆ ಎ ರಾಜಗೋಪಾಲ್, ಅಜಿತ್ ಕುಮಾರ್ ಅವರನ್ನು ಆರೋಪಿಗಳನ್ನಾಗಿಸಲಾಗಿತ್ತು. ಆದರೆ, ಭವಾನಿ ಅವರ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಿರಲಿಲ್ಲ. ಆನಂತರ ಭವಾನಿ ಸೇರಿ ಒಂಭತ್ತು ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.
ಈ ಮಧ್ಯೆ, ಭವಾನಿ ಅವರಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಹಿನ್ನಡೆ ಅನುಭವಿಸಿತ್ತು. ಇತ್ತೀಚೆಗೆ ಭವಾನಿಗೆ ಹಾಸನ, ಮೈಸೂರು ಜಿಲ್ಲೆಗಳ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ಸಡಿಲಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.