ಸಂವಿಧಾನದ ಭಾಗ IX- ಎ ಯೊಂದಿಗೆ ಸುಸಂಬದ್ಧವಾಗಿರುವವರೆಗೆ ಪುರಸಭೆಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಪುನರುಚ್ಚರಿಸಿತು [ರಾಜಸ್ಥಾನ ಸರ್ಕಾರ ಮತ್ತು ಅಶೋಕ್ ಖೆಟೋಲಿಯಾ ಇನ್ನಿತರರ ನಡುವಣ ಪ್ರಕರಣ].
ತಮ್ಮ ಆದಾಯ ಅಥವಾ ಜನಸಂಖ್ಯೆ ಅಥವಾ ಸ್ಥಳೀಯ ಪ್ರದೇಶದ ಪ್ರಾಮುಖ್ಯತೆ ಮತ್ತಿತರ ಸಂದರ್ಭಗಳಿಗೆ ಅನುಗುಣವಾಗಿ ಪುರಸಭೆಗಳನ್ನು ವರ್ಗಗಳಾಗಿ ವಿಂಗಡಿಸಲು ರಾಜ್ಯಗಳು ಸಮರ್ಥವಾಗಿವೆ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಮತ್ತು ಮಾನ್ಯತೆಯನ್ನು ಒದಗಿಸುವ 73 ನೇ ತಿದ್ದುಪಡಿಗೆ ಸಂಬಂಧಿಸಿದಂತೆ ಪೀಠವು, "ಸ್ಥಳೀಯ ಸರ್ಕಾರಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸಲು ರಾಜ್ಯ ಶಾಸಕಾಂಗಗಳ ಅಧಿಕಾರ ಕಸಿದುಕೊಳ್ಳುವುದಕ್ಕಾಗಿ ಸಾಂವಿಧಾನಿಕ ತಿದ್ದುಪಡಿ ಮಾಡಿಲ್ಲ. ಬದಲಿಗೆ ಪ್ರಜಾಪ್ರಭುತ್ವದ ಸ್ಥಾಪನೆಯ ಭಾಗವಾಗಿ ಆಡಳಿತದ ಮೂರು ಹಂತಗಳನ್ನು ಬಲಪಡಿಸುವುದಕ್ಕಾಗಿ ರೂಪಿಸಲಾಗಿದೆ" ಎಂದಿದೆ.
ಪ್ರಸ್ತುತ ಪ್ರಕರಣದಲ್ಲಿ, ಭರತ್ಪುರ ಜಿಲ್ಲೆಯ ರೂಪಬಾಸ್ನ ಗ್ರಾಮ ಪಂಚಾಯತ್ನಲ್ಲಿ ಮುನ್ಸಿಪಲ್ ಬೋರ್ಡ್ ಸ್ಥಾಪಿಸಲು ರಾಜಸ್ಥಾನ ಮುನ್ಸಿಪಾಲಿಟಿ ಕಾಯಿದೆಯ ಸೆಕ್ಷನ್ 5ರ (ಪುರಸಭೆಯ ಸ್ಥಾಪನೆ ಮತ್ತು ಸಂಯೋಜನೆ) ಅಡಿಯಲ್ಲಿ ರಾಜಸ್ಥಾನ ಸರ್ಕಾರ ತನ್ನ ಅಧಿಕಾರವನ್ನು ಕಾನೂನುಬದ್ಧವಾಗಿ ಮತ್ತು ಸೂಕ್ತ ರೀತಿಯಲ್ಲಿ ಚಲಾಯಿಸಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.