ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿಯಲ್ಲಿ ಅಕ್ರಮ ನಿಲ್ಲಿಸಬೇಕು: ಹೈಕೋರ್ಟ್‌

“ಅರ್ಜಿದಾರರ ಮನೆಯಲ್ಲಿ ಇಡಿ ಶೋಧ ನಡೆಸಿತು. ಮನೆಯಲ್ಲಿಯೇ 20 ಅಂಕಗಳಿಗೆ ಟೆಸ್ಟ್‌ ನೀಡಿತು. ಎಫ್‌ಐಆರ್‌ ಬಾಕಿಯಿರುವುದರಿಂದ ಅರ್ಜಿದಾರರು ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದ ವಕೀಲ ರಜತ್.‌
ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿಯಲ್ಲಿ ಅಕ್ರಮ ನಿಲ್ಲಿಸಬೇಕು: ಹೈಕೋರ್ಟ್‌
Published on

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿಯಲ್ಲಿ ಅಕ್ರಮಗಳು ನಿಲ್ಲಿಸಬೇಕು ಎಂದಿರುವ ಕರ್ನಾಟಕ ಹೈಕೋರ್ಟ್‌, ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅಕ್ರಮವಾಗಿ ನೇಮಕವಾಗಲು ಬಯಸಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಅವರ ಪುತ್ರಿ ಸುಮಾ ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೆಪಿಎಸ್‌ಸಿ ನೇಮಕಾತಿ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌, ಡಾ.ಮಂಜುನಾಥ್‌ ಸಲ್ಲಿಸಿರುವ ಅರ್ಜಿ ಮತ್ತು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್‌ ರದ್ದು ಕೋರಿ ಲೋಕೇಶ್‌ ಸೇರಿದಂತೆ ಹಲವು ಯಶಸ್ವಿ ಅಭ್ಯರ್ಥಿಗಳು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆ ವೇಳೆ ಲೋಕೇಶ್‌ ಪರ ವಕೀಲ ರಜತ್‌ ಅವರು “ಅರ್ಜಿದಾರರ ಮನೆಯಲ್ಲಿ ಇಡಿ ಶೋಧ ನಡೆಸಿತು. ಮನೆಯಲ್ಲಿಯೇ 20 ಅಂಕಗಳಿಗೆ ಟೆಸ್ಟ್‌ ನೀಡಿತು. ಎಫ್‌ಐಆರ್‌ ಬಾಕಿಯಿರುವುದರಿಂದ ಅರ್ಜಿದಾರರು ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು “ಈ ಸಂಗತಿಗಳ ಬಗ್ಗೆ ಪರಿಶೀಲಿಸಲಾಗುವುದು. ಅಂತಿಮವಾಗಿ ಸಮಸ್ಯೆ ಪರಿಹರಿಸೋಣ. ಆದರೆ, ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ನಡೆಯುವುದು ನಿಲ್ಲಬೇಕು. ಅದಕ್ಕಾಗಿ ಏನಾದರೂ ಮಾಡಬೇಕಿದೆ” ಎಂದು ನುಡಿಯಿತು.

ಜೊತೆಗೆ, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಆಗಸ್ಟ್‌ 27ಕ್ಕೆ ಮುಂದೂಡಿದ ಪೀಠ, ರಾಜ್ಯ ಪೊಲೀಸರು (ಸಿಐಡಿ ಮತ್ತು ವಿಧಾನಸೌಧ ಠಾಣಾ ಪೊಲೀಸರು) ಪ್ರಕರಣ ಕುರಿತಂತೆ ನಡೆಸಿರುವ ತನಿಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಹಾಗೆಯೇ, ಅರ್ಜಿಗಳ ಸಂಬಂಧ ಹೊರಡಿಸಿರುವ ಮಧ್ಯಂತರ ಆದೇಶ ಮತ್ತು ಯಶಸ್ವಿ ಅಭ್ಯರ್ಥಿಗಳಿಗೆ ಒದಗಿಸಿರುವ ರಕ್ಷಣಾ ಕ್ರಮಗಳನ್ನು ಮುಂದಿನ ವಿಚಾರಣೆಗೆ ವಿಸ್ತರಿಸಿತು.

ಇದಕ್ಕೂ ಮುನ್ನ, ಪೊಲೀಸರ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌  ಜಗದೀಶ್‌, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು. ಆಕ್ಷೇಪಣೆ ಬಹುತೇಕ ಸಿದ್ಧವಾಗಿದೆ. ಕೊನೆ ಹಂತದ ಮಾರ್ಪಾಡುಗಳಿದ್ದು, ಸ್ವಲ್ಪ ಕಾಲಾವಕಾಶ ನೀಡಿದರೆ ಆಕ್ಷೇಪಣೆಯನ್ನು ಸಲ್ಲಿಸಲಾಗುವುದು. ಅದರ ಪ್ರತಿಯನ್ನು ಮುಂಗಡವಾಗಿ ಅರ್ಜಿದಾರರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೆಪಿಎಸ್‌ಸಿ ನೇಮಕಾತಿಯಲ್ಲಿ ಉದ್ಯೊಗ ಗಿಟ್ಟಿಸಿರುವ ಕೆ ಆರ್‌ ಲೋಕೇಶ್‌ ಹಾಗೂ ಇತರ ಯಶಸ್ವಿ ಅಭ್ಯರ್ಥಿಗಳ ಪರ ವಕೀಲರು, ಸ್ವಾಮಿ.. ಅರ್ಜಿದಾರರೆಲ್ಲರೂ ಯಶಸ್ವಿ ಅಭ್ಯರ್ಥಿಗಳಾಗಿದ್ದಾರೆ. ಅವರು ಯಾವುದೇ ಅಕ್ರಮ ಮಾರ್ಗದಿಂದ ಅಂಕ ಸಂಪಾದಿಸಿಲ್ಲ. ಬುಧವಾರ ಜಾರಿ ನಿರ್ದೇಶನಾಲಯ (ಇಡಿ) ಅರ್ಜಿದಾರನ ಮನೆಗೆ ಬಂದು ತನಿಖೆ ನಡೆಸಿದೆ. ಅರ್ಜಿದಾರರಿಗೆ ಮನೆಯಲ್ಲಿಯೇ ಟೆಸ್ಟ್‌ ನೀಡಿದೆ. ಈ ಪ್ರಕರಣವನ್ನು ಪ್ರಿಡಿಕೇಟ್‌ ಅಪರಾಧವಾಗಿ ಬಳಸಿದೆ ಎಂದು ಆರೋಪಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಅರ್ಜಿದಾರರಿಗೆ ಇಡಿ ಟೆಸ್ಟ್‌ ಮಾಡಿತ್ತೇ? ಹಾಗಾದರೆ ಆ ಕ್ರಮವನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂದು ಸೂಚಿತಲ್ಲದೆ; ಇಡಿ ಶೋಧ ನಡೆಸಿದೆಯೇ? ಎಂದು ಕೇಳಿತು.

ರಾಜ್ಯ ಸರ್ಕಾರಿ ಅಭಿಯೋಜಕರು ಉತ್ತರಿಸಿ, ಕೆಪಿಎಸ್‌ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್‌ ಅವರ ಮನೆಲ್ಲಿ ಬುಧವಾರ ಇಡಿ ಶೋಧ ನಡೆಸಿದೆ ಎಂದು ಮಾಹಿತಿ ನೀಡಿದರು.

ಆಗ ಲೋಕೇಶ್‌ ಪರ ವಕೀಲರು, ಶಿವಶಂಕರಪ್ಪ ಅವರ ಮನೆಯಲ್ಲದೆ, ಎಲ್ಲಾ ಯಶಸ್ವಿ ಅಭ್ಯರ್ಥಿಗಳ ಮನೆ ಮೇಳೆ ಇಡಿ ಶೋಧ ನಡೆಸಿದೆ. ಇಡಿ ಕ್ರಮ ಪ್ರಶ್ನಿಸಲು ಅರ್ಜಿದಾರರ ಬಳಿ ಇಸಿಐಆರ್‌ (ಇಡಿ ದಾಖಲಿಸುವ) ಪ್ರತಿ ಇಲ್ಲ. ಮನೆಯಲ್ಲಿ ಅರ್ಜಿದಾರರಿಗೆ ಇಡಿ 20 ಅಂಕಗಳಿಗೆ ಪ್ರಶ್ನೆಗಳನ್ನು ನೀಡಿ ಉತ್ತರ ಕೇಳಿ ಟೆಸ್ಟ್‌ ನಡೆಸಿದೆ. ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ 20 ಅಂಕ ಪಡೆಯುವಲ್ಲಿ ಅರ್ಜಿದಾರರು ಯಶಸ್ವಿಯಾಗಿದ್ದಾರೆ. ಅರ್ಜಿದಾರರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಇತರೆ ಪರೀಕ್ಷೆಯಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ, ಈ ಎಫ್‌ಐಆರ್‌ ಬಾಕಿ ಇರುವುದರಿಂದ ಅರ್ಜಿದಾರರು ಸರ್ಕಾರಿ ಉದ್ಯೋಗ ಪಡೆಯಲಾಗುತ್ತಿಲ್ಲ. ಅರ್ಜಿದಾರರು ಓಎಂಆರ್‌ ಎಲ್ಲವನ್ನು ತುಂಬಿದ್ದಾರೆ. ಯಾವೊಂದು ಪ್ರಶ್ನೆಯನ್ನೂ ಬಿಟ್ಟಿಲ್ಲ ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಸರ್ಕಾರಿ ಅಭಿಯೋಜಕರು ಸೋಮವಾರದೊಳಗೆ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಬೇಕು. ಗುರುವಾರ (ಆಗಸ್ಟ್‌ 27) ಅರ್ಜಿಯನ್ನು ಮತ್ತೆ ವಿಚಾರಣೆಗೆ ತೆಗೆದುಕೊಳ್ಳಲಾಗುವುದು. ಪೊಲೀಸರು ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com