ಕೃಷಿಕರ ಪರ ನೀತಿ, ಬೆಲೆ ಸ್ಥಿರೀಕರಣ ನಿಧಿಗಾಗಿ ಕೋರಿಕೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಇದಲ್ಲದೆ, ಬೆಳೆ ಇಳುವರಿ ಮಾರಾಟಕ್ಕಾಗಿ ಸಾಮಾನ್ಯ ಕೃಷಿ ಮಾರುಕಟ್ಟೆ ವೇದಿಕೆ ಸ್ಥಾಪನೆಗಾಗಿ ಕೃಷಿ ಸೆಸ್ ವಿಧಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
 ಕೃಷಿಕರ ಪರ ನೀತಿ, ಬೆಲೆ ಸ್ಥಿರೀಕರಣ ನಿಧಿಗಾಗಿ ಕೋರಿಕೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಬೆಲೆ ಸ್ಥಿರೀಕರಣ ನಿಧಿ ಸೇರಿದಂತೆ ರೈತರ ಕಲ್ಯಾಣಕ್ಕಾಗಿ ಬಹುಉದ್ದೇಶಿತ ಕ್ರಮಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಗೆ ಸಂಬಂಧಿಸಿದಂತೆ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ (ಆಗ್ನೊಸ್ಟೋಸ್‌ ಥಿಯೋಸ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ).


ಅರ್ಜಿಯಲ್ಲಿನ ಪ್ರತಿಪಾದನೆಗಳನ್ನು ಬಲಪಡಿಸುವುದಕ್ಕಾಗಿ ಉತ್ತಮ ಸಂಶೋಧನೆ ನಡೆಸುವಂತೆ ಪೀಠವು ಸಿಖ್ ಚೇಂಬರ್ ಆಫ್ ಕಾಮರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರ್ಜಿದಾರ ಅಗ್ನೋಸ್ಟೋಸ್ ಥಿಯೋಸ್ ಅವರಿಗೆ , ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ.ವಿ.ವಿಶ್ವನಾಥನ್  ಅವರಿದ್ದ ಪೀಠ ಮೌಖಿಕವಾಗಿ ತಿಳಿಸಿತು.


“ನೀವು ಇನ್ನಷ್ಟು ಕೆಲಸ, ಸಂಶೋಧನೆ ಮಾಡಬೇಕು. ಮನವಿಗಳು ನುಣುಚಿಕೊಳ್ಳುವಂತಿವೆ. ನೀವು ತಜ್ಞರ ವರದಿಗಳನ್ನು ಓದಿರುವಿರೇ? ನೀವು ರೈತರ ಪರವೇ ಅಥವಾ ಸಕ್ಕರೆ ಲಾಬಿ ಪರವೇ?” ಎಂದು ನ್ಯಾ. ಸೂರ್ಯ ಕಾಂತ್‌ ವಿಚಾರಣೆ ವೇಳೆ  ಪ್ರಶ್ನಿಸಿದರು.


ಇದಕ್ಕೆ ದನಿಗೂಡಿಸಿದ ನ್ಯಾ. ವಿಶ್ವನಾಥನ್‌ ಬೆಲೆ ಸ್ಥಿರೀಕರಣ ನಿಧಿಗಾಗಿ ಯಾರು ಹಣ ವಿನಯೋಗಿಸಬೇಕು? ಕೇಂದ್ರವೇ? ಎಂದು ಪ್ರಶ್ನಿಸಿದರು.

ವಕೀಲರಾದ ಮೃದುಲಾ ರೇ ಭಾರದ್ವಾಜ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಹಸಿವನ್ನು ಕಡಿಮೆ ಮಾಡಲು ಕೃಷಿ ಸಂಕಷ್ಟವನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದಂತಹ ದೇಶಗಳ ತಾರತಮ್ಯದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳು ವ್ಯಾಪಕವಾಗಿ ಏರಿಳಿತಗೊಳ್ಳುತ್ತಿವೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದಿಂದ ಕೃಷಿ ಉತ್ಪನ್ನಗಳ ಅಗ್ಗದ ಆಮದು ರೈತರ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ” ಎಂದು ತಿಳಿಸಲಾಗಿತ್ತು.


ಹೀಗಾಗಿ ರೈತರಿಗಾಗಿ ರಾಷ್ಟ್ರೀಯ ನೀತಿ ರೂಪಿಸಬೇಕು ಹಾಗೂ ವಿಶ್ವ ವ್ಯಾಪಾರ ಸಂಸ್ಥೆಯೊಂದಿಗೆ ಸರ್ಕಾರ ಉತ್ತಮ ಮಾತುಕತೆ ನಡೆಸಬೇಕು. ಅಲ್ಲದೆ ಬೆಲೆಗಳ ಏರಿಳಿತ ತಪ್ಪಿಸಲು ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಬೇಕು. ಇದಲ್ಲದೆ, ಬೆಳೆ ಇಳುವರಿ  ಮಾರಾಟಕ್ಕಾಗಿ ಸಾಮಾನ್ಯ ಕೃಷಿ ಮಾರುಕಟ್ಟೆ ವೇದಿಕೆ ಸ್ಥಾಪನೆಗಾಗಿ ಕೃಷಿ ಸೆಸ್ ವಿಧಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದೇ ಅರ್ಜಿದಾರರು ಈ ಹಿಂದೆ ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಪಡಿಸುವ ಕಾಯಿದೆ ಜಾರಿಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆ ಪರಿಗಣಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು.

Kannada Bar & Bench
kannada.barandbench.com