ಎನ್ಇಇಟಿ, ಜೆಇಇ ಪರೀಕ್ಷೆ ಹಾದಿ ಸುಗಮ: ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರತೆಯಲ್ಲಿ ಇರಿಸಲಾಗದು ಎಂದ ಸುಪ್ರೀಂ ಕೋರ್ಟ್

“ಬದುಕನ್ನು ಹಿಡಿದು ನಿಲ್ಲಿಸಲಾಗದು. ಎಲ್ಲಾ ರೀತಿಯ ರಕ್ಷಣೆಯೊಂದಿಗೆ ಮುನ್ನಡೆಯಬೇಕಿದೆ. ನೀವು (ವಿದ್ಯಾರ್ಥಿಗಳು) ಒಂದು ವರ್ಷವನ್ನು ವ್ಯರ್ಥವಾಗಿ ಕಳೆಯಲು ಸಿದ್ಧರಿದ್ದೀರಾ?” ಎಂದು ಕೋರ್ಟ್ ಪ್ರಶ್ನಿಸಿದೆ.
ಎನ್ಇಇಟಿ, ಜೆಇಇ ಪರೀಕ್ಷೆ ಹಾದಿ ಸುಗಮ: ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರತೆಯಲ್ಲಿ ಇರಿಸಲಾಗದು ಎಂದ ಸುಪ್ರೀಂ ಕೋರ್ಟ್

ಕೋವಿಡ್-19 ಹಿನ್ನೆಲೆಯಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಂದೂವಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ದೇಶದ ವಿವಿಧ ರಾಜ್ಯಗಳ 11 ವಿದ್ಯಾರ್ಥಿಗಳು ಎನ್ಇಇಟಿ ಹಾಗೂ ಜೆಇಇ ಮುಂದೂಡಿಕೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ ಸೋಮವಾರ ನಡೆಸಿತು, ಕೋವಿಡ್-19 ಮುಗಿದ ನಂತರ ಪರೀಕ್ಷೆಗಳನ್ನು ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಕ್ಕೆ (ಎನ್ ಟಿಎ) ಸೂಚಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ಹೀಗೆ ಹೇಳಿದರು:

“ಬದುಕನ್ನು ಹಿಡಿದು ನಿಲ್ಲಿಸಲಾಗದು. ಎಲ್ಲಾ ರೀತಿಯ ರಕ್ಷಣೆಯೊಂದಿಗೆ ಮುನ್ನಡೆಯಬೇಕಿದೆ. ನೀವು (ವಿದ್ಯಾರ್ಥಿಗಳು) ಒಂದು ವರ್ಷವನ್ನು ವ್ಯರ್ಥವಾಗಿ ಕಳೆಯಲು ಸಿದ್ಧರಿದ್ದೀರಾ?”
ನ್ಯಾಯಮೂರ್ತಿ ಅರುಣ್‌ ಮಿಶ್ರಾ

ಕೋವಿಡ್ ಹಿನ್ನೆಲೆಯಲ್ಲಿ ಹಲವು ಪರೀಕ್ಷೆಗಳು ಮುಂದೂಡಲ್ಪಟ್ಟಿರುವುದರ ಕುರಿತು ಅರ್ಜಿದಾರರ ಪರ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ನ್ಯಾಯಾಲಯದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಸಿಬಿಎಸ್ಇ ಮತ್ತು ಐಸಿಎಸ್ಇ ಪರೀಕ್ಷೆಗಳನ್ನು ರದ್ದುಪಡಿಸಲಾಗಿರುವುದು ಮತ್ತು ಎಐಬಿಇ ಪರೀಕ್ಷೆ ಮುಂದೂಡಲ್ಪಟ್ಟಿದೆ ಎಂದು ವಿವರಣೆ ನೀಡಿದ ಶ್ರೀವಾಸ್ತವ ಅವರು, “ನಾವು ಎನ್ಇಇಟಿ ಮತ್ತು ಜೆಇಇ ಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಕೋರುತ್ತಿಲ್ಲ” ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ (ಎನ್ ಟಿಎ) ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಎಲ್ಲಾ ರೀತಿಯ ಸುರಕ್ಷಾ ಕ್ರಮಕೈಗೊಳ್ಳಲಾಗುವುದು ಎಂದರು.

ಎರಡೂ ಕಡೆಯ ವಾದ ಆಲಿಸಿದ ತ್ರಿಸದಸ್ಯ ಪೀಠವು “ಬಹುಕಾಲದವರೆಗೆ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರವಾಗಿ ಇರಿಸಲಾಗದು” ಎಂದು ಹೇಳುವ ಮೂಲಕ ಪರೀಕ್ಷೆ ಮುಂದೂಡುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿತು.

ಇದೇ ಸೆಪ್ಟೆಂಬರ್ ನಲ್ಲಿ ನಿಗದಿಯಾಗಿರುವ ಎನ್ಇಇಟಿ ಮತ್ತು ಜೆಇಇ (ಮುಖ್ಯ) ಪರೀಕ್ಷೆಗಳನ್ನು ರದ್ದುಪಡಿಸಬೇಕು. ದೇಶಾದ್ಯಂತ ಎನ್ ಇಇಟಿ ಮತ್ತು ಜೆಇಇ ಪರೀಕ್ಷೆ ಕೇಂದ್ರಗಳನ್ನು ಹೆಚ್ಚಿಸಬೇಕು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪರೀಕ್ಷಾ ಕೇಂದ್ರ ಇರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ ಅನ್ನು ಕೋರಿದ್ದರು.

ಹೊಸಬರಿಗೆ ಪ್ರವೇಶಾತಿಗೆ ಅವಕಾಶ ಕಲ್ಪಿಸಲು ಸೂಚಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದ ಅರ್ಜಿದಾರರು, ಸೆಪ್ಟೆಂಬರ್ ನಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಿರುವ ನಡುವೆಯೇ ಕೋವಿಡ್ ಪ್ರಕರಣಗಳು ವ್ಯಾಪಕವಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

“ಸೆಪ್ಟೆಂಬರ್ ನಲ್ಲಿ ಲಕ್ಷಾಂತರ ಯುವ ವಿದ್ಯಾರ್ಥಿಗಳು ಜೆಇಇ ಮತ್ತು ಎನ್‌ ಇಇಟಿ ಪರೀಕ್ಷೆ ಬರೆಯಲಿದ್ದಾರೆ. ಈ ನಡುವೆ ಕೋವಿಡ್ ಪ್ರಕರಣಗಳು ವ್ಯಾಪಕವಾಗಿವೆ. ಭಾರತದಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿತರಾಗಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಕರಾಳವಾಗುತ್ತಿದೆ. ಇಂಥ ಕಷ್ಟದ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಲಕ್ಷಾಂತರ ಮೂಲಕ ವಿದ್ಯಾರ್ಥಿಗಳ ಬದುಕನ್ನು ರೋಗ ಮತ್ತು ಸಾವಿನ ಅಪಾಯದಲ್ಲಿಡುವುದು ಅಸಮ್ಮತ” ಎಂದು ಅರ್ಜಿದಾರರು ವಿವರಿಸಿದ್ದರು.

Related Stories

No stories found.
Kannada Bar & Bench
kannada.barandbench.com