ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಿಡುಗಡೆಗೆ ಸುಪ್ರೀಂ ನಕಾರ: 5 ದಿನಗಳ ಕಾಲ ಇ ಡಿ ವಶಕ್ಕೆ

ಬಾಲಾಜಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಇದರೊಟ್ಟಿಗೆ ಸಚಿವರ ಬಿಡುಗಡೆ ಪ್ರಶ್ನಿಸಿ ಇ ಡಿ ಸಲ್ಲಿಸಿದ್ದ ಮನವಿಯನ್ನು ಸಹ ನ್ಯಾಯಾಲಯ ಆಲಿಸಿತು.
Senthil Balaji, ED and Supreme Court
Senthil Balaji, ED and Supreme Court

ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜೂನ್‌ನಲ್ಲಿ ಬಂಧಿತರಾಗಿರುವ ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರ ಬಿಡುಗಡೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ವಿ ಸೆಂಥಿಲ್ ಬಾಲಾಜಿ ಮತ್ತು ಉಪ ನಿರ್ದೇಶಕರ ಮೂಲಕ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

ಆಗಸ್ಟ್ 12ರವರೆಗೆ ಐದು ದಿನಗಳ ಕಾಲ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯದ (ಇ ಡಿ) ವಶಕ್ಕೆ ನೀಡಿ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಆದೇಶಿಸಿದೆ.

ಬಾಲಾಜಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಇದರ ಜೊತೆಗೆ ಸಚಿವರ ಬಿಡುಗಡೆ ಪ್ರಶ್ನಿಸಿ ಇ ಡಿ ಸಲ್ಲಿಸಿದ್ದ ಮನವಿಯನ್ನು ಸಹ ನ್ಯಾಯಾಲಯ ಆಲಿಸಿತು. ಪ್ರಕರಣದ ತೀರ್ಪನ್ನು ಆಗಸ್ಟ್ 2ರ ಬುಧವಾರದಂದು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು.

Also Read
ಸಚಿವ ಸೆಂಥಿಲ್‌ ಬಿಡುಗಡೆ ವಿರುದ್ಧ ಮದ್ರಾಸ್ ಹೈಕೋರ್ಟ್‌ನ ಮೂರನೇ ನ್ಯಾಯಮೂರ್ತಿ ತೀರ್ಪು; ಸಿಜೆಯಿಂದ ಅಂತಿಮ ಆದೇಶ

ಮದ್ರಾಸ್ ಹೈಕೋರ್ಟ್ ಈ ಹಿಂದೆ ಸಚಿವರನ್ನು ಬಿಡುಗಡೆ ಮಾಡುವುದರ ವಿರುದ್ಧ ತೀರ್ಪು ನೀಡಿತ್ತು ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಅವರ ಪತ್ನಿ ಎಸ್‌ ಮೇಘಲಾ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಈ ಮಧ್ಯೆ ಬಾಲಾಜಿ ಪತ್ನಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಪುರಸ್ಕರಿಸುವಲ್ಲಿಯೂ ಹೈಕೋರ್ಟ್‌ ಎಡವಿದೆ ಎಂದು ಸುಪ್ರೀಂ ಕೋರ್ಟ್‌ಗೆ ಇ ಡಿ ಅರ್ಜಿ ಸಲ್ಲಿಸಿತ್ತು. ಬಾಲಾಜಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ಅರ್ಜಿಗಳ ಜೊತೆಗೆ ಇಡಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಆಲಿಸಿದೆ.

Kannada Bar & Bench
kannada.barandbench.com