ಬಹುಕೋಟಿ ಗೋ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಇನಾಮುಲ್ ಹಕ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ತನ್ನ ಜಾಮೀನು ಅರ್ಜಿ ವಜಾಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಹಕ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು.
Cattle smuggling

Cattle smuggling

Published on

ಭ್ರಷ್ಟಾಚಾರ ತಡೆ ಕಾಯಿದೆಯ ಹಲವು ಸೆಕ್ಷನ್‌ಗಳಡಿಯಲ್ಲಿ ಆರೋಪಿಯಾಗಿರುವ ಬಹುಕೋಟಿ ಗೋವು ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಇನಾಮುಲ್ ಹಕ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ [ಎಂಡಿ ಇನಾಮುಲ್ ಹಕ್ ಮತ್ತು ಸಿಬಿಐ ನಡುವಣ ಪ್ರಕರಣ].

ತನ್ನ ಜಾಮೀನು ಅರ್ಜಿ ವಜಾಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್‌ನ ನವೆಂಬರ್ 2021ರ ಆದೇಶದ ವಿರುದ್ಧ ಹಕ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ದಿನೇಶ್‌ ಮಹೇಶ್ವರಿ ಅವರಿದ್ದ ಪೀಠ ಪುರಸ್ಕರಿಸಿತು.

ʼಮೇಲ್ಮನವಿದಾರರ ಸತತ ಬಂಧನವನ್ನು ಸಮರ್ಥಿಸಲಾಗದು. ಹೀಗಾಗಿ, ಪಶ್ಚಿಮ ಬಂಗಾಳದ ಪಶ್ಚಿಮ್ ಬರ್ಧಮಾನ್‌ನ ಅಸನ್ಸೋಲ್‌ನ ಸಿಬಿಐ ವಿಶೇಷ ನ್ಯಾಯಾಧೀಶರು ವಿಧಿಸಿದ ಷರತ್ತಿಗೊಳಪಟ್ಟು ಮೇಲ್ಮನವಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Also Read
ಬಿಎಸ್ಎಫ್ ಸೀಮಾ ವ್ಯಾಪ್ತಿ ಹೆಚ್ಚಳದಿಂದ ದೇಶ ವಿರೋಧಿ ಶಕ್ತಿಗಳ ನಿಗ್ರಹ, ಗೋ ಕಳ್ಳಸಾಗಣೆ ತಡೆಗೆ ಸಹಕಾರಿ: ಗೃಹ ಸಚಿವಾಲಯ

ಇತರ ಆರೋಪಿಗಳಂತೆಯೇ ಹಕ್‌ ಅವರನ್ನೂ ಈ ಪ್ರಕರಣದಲ್ಲಿ ಸಮಾನವಾಗಿ ಪರಿಗಣಿಸಬೇಕು ಎಂಬ ಸಿಬಿಐ ವಾದ ಸೂಕ್ತವಾದುದಾದರೂ ಅವರು ಎದುರಿಸುತ್ತಿರುವ ಅಪರಾಧ ಮತ್ತು ಅವರನ್ನು ಈಗಾಗಲೇ ಕಸ್ಟಡಿಗೆ ಒಳಪಡಿಸಿರುವುದರಿಂದ ಹೆಚ್ಚಿನ ಕಸ್ಟಡಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿತು. ಅವರಿಗೆ ಕೊಚ್ಚಿಯ ನ್ಯಾಯಾಲಯ ಈಗಾಗಲೇ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿದೆ. ಎಂಬುದನ್ನೂ ನ್ಯಾಯಾಲಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಿತು.

ಜಾನುವಾರು ಕಳ್ಳಸಾಗಣೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಶ್ಚಿಮ ಬಂಗಾಳದ ರೋಷನ್‌ಬಾಗ್‌ನ ಗಡಿ ಭದ್ರತಾ ಪಡೆಯ ಬೆಟಾಲಿಯನ್‌ ಒಂದರ ಕಮಾಂಡಂಟ್‌ ಒಬ್ಬರು ಪಹರೆ ಸಡಿಲಿಸಿ ಅಕ್ರಮ ಲಾಭ ಪಡೆದಿದ್ದ ಪ್ರಕರಣ ಇದಾಗಿದೆ.

ನಂತರ ಕೇರಳದ ಅಲೆಪ್ಪಿ ರೈಲ್ವೇ ನಿಲ್ದಾಣದಲ್ಲಿ ತನಿಖಾಧಿಕಾರಿಗಳು ಕಮಾಂಡಂಟ್‌ ಅಧಿಕಾರಿಯನ್ನು ಬಂಧಿಸಿದಾಗ ಅವರು ಬಳಿ ₹ 43 ಲಕ್ಷದ ಕರೆನ್ಸಿನೋಟುಗಳು ಪತ್ತೆಯಾಗಿದ್ದವು. ಈ ಕಮಾಂಡಂಟ್‌ ಜೊತೆಗೆ ಅಕ್ರಮ ವ್ಯವಹಾರ ಕುದುರಿಸಿದ ಆರೋಪ ಹಕ್‌ ಮೇಲಿತ್ತು. ಹಕ್‌ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ ವಾದಿಸಿದರು.

Kannada Bar & Bench
kannada.barandbench.com