ಶಿವಸೇನೆ ಶಾಸಕರ ಅನರ್ಹತೆ ಅರ್ಜಿಗಳ ಶೀಘ್ರ ಇತ್ಯರ್ಥಕ್ಕೆ ಮನವಿ: ಮಹಾರಾಷ್ಟ್ರ ಸ್ಪೀಕರ್‌ಗೆ ನೋಟಿಸ್ ನೀಡಿದ ಸುಪ್ರೀಂ

ಏಕನಾಥ್ ಶಿಂಧೆ ಬಣಕ್ಕೆ ಹಲವು ಶಾಸಕರು ಸೇರ್ಪಡೆಗೊಂಡ ಸಂದರ್ಭದಲ್ಲಿ ಪಕ್ಷದ ಉದ್ಧವ್ ಠಾಕ್ರೆ ಬಣದ ಶಾಸಕರಾದ ಸುನಿಲ್ ಪ್ರಭು ಅವರು ಸಲ್ಲಿಸಿದ್ದ ಮನವಿ ಇದಾಗಿದೆ.
Eknath Shinde and Uddhav Thackeray , Supreme Court
Eknath Shinde and Uddhav Thackeray , Supreme Court

ಶಿವಸೇನೆಯ ಎರಡು ಬಣಗಳ ಶಾಸಕರಿಗೆ ಸಂಬಂಧಿಸಿದಂತೆ ಬಾಕಿ ಇರುವ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ತೀರ್ಮಾನಿಸಬೇಕೆಂಬ ಮನವಿ ಕುರಿತಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ಅವರ ಪ್ರತಿಕ್ರಿಯೆ ಕೇಳಿದೆ [ಸುನೀಲ್‌ ಪ್ರಭು ಮತ್ತು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಎರಡು ವಾರಗಳಲ್ಲಿ ನೋಟಿಸ್‌ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಶಾಸಕ ಸುನೀಲ್ ಪ್ರಭು ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಹಾಗೂ ಠಾಕ್ರೆ ಬಣಕ್ಕೆ ಸೇರಿದ ಶಾಸಕರ ವಿರುದ್ಧ ಬಾಕಿ ಇರುವ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಎನ್‌ಸಿಪಿ ನಾಯಕ ಅಜಿತ್ ಪವಾರ್, ಪ್ರಫುಲ್ ಪಟೇಲ್ ಹಾಗೂ ಛಗನ್ ಭುಜಬಲ್ ಸೇರಿದಂತೆ ಎಂಟು ಶಾಸಕರು ಏಕನಾಥ್ ಶಿಂಧೆ ಸರ್ಕಾರದೊಂದಿಗೆ ಕೈಜೋಡಿಸಿದ ಸಂದರ್ಭದಲ್ಲಿ ಅವರು ಈ ಅರ್ಜಿ ಸಲ್ಲಿಸಿದ್ದರು.

Also Read
ಶಾಸಕರ ಅನರ್ಹತೆ ಪ್ರಕರಣ: ಮಹಾರಾಷ್ಟ್ರ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಮೊರೆ ಹೋದ ಉದ್ಧವ್ ಠಾಕ್ರೆ ಬಣ

ಬಾಕಿ ಉಳಿದಿರುವ ಅನರ್ಹತೆ ಅರ್ಜಿಗಳನ್ನು ಸೂಕ್ತ ಅವಧಿಯಲ್ಲಿ ನಿರ್ಧರಿಸುವಂತೆ ಸ್ಪೀಕರ್‌ಗೆ ಈ ಹಿಂದೆ ಮೇ 11ರಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಸೂಚಿಸಿತ್ತು. ಆದರೆ, ಈವರೆಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಭು ದೂರಿದ್ದರು.

ಸ್ಪೀಕರ್‌ ಅವರು ತ್ವರಿತವಾಗಿ ಅನರ್ಹತೆ ಪ್ರಕರಣವನ್ನು ಇತ್ಯರ್ಥಪಡಿಸುವುದು ನ್ಯಾಯೋಚಿತವಾದ ಸಾಂವಿಧಾನಿಕ ಅವಶ್ಯಕತೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಅನರ್ಹತೆಯ ಪ್ರಕ್ರಿಯೆಗಳನ್ನು ನಿರ್ಧರಿಸುವಲ್ಲಿನ ಸ್ಪೀಕರ್‌ ಅವರ ನಿಷ್ಕ್ರಿಯತೆಯು ಗಂಭೀರವಾದ ಸಾಂವಿಧಾನಿಕ ಅನೌಚಿತ್ಯವಾಗಿದೆ" ಎಂಬುದು ಪ್ರಭು ಅವರ ವಾದವಾಗಿದೆ.

Related Stories

No stories found.
Kannada Bar & Bench
kannada.barandbench.com