ಶೋಕಾಸ್ ನೋಟಿಸ್‌ಗೆ ಉತ್ತರಿಸದ ಬಾಬಾ ರಾಮದೇವ್: ಖುದ್ದು ಹಾಜರಾಗುವಂತೆ ಸುಪ್ರೀಂ ಸೂಚನೆ

ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತನ್ನು ಇತ್ತೀಚೆಗೆ ನಿಷೇಧಿಸಿದ್ದ ನ್ಯಾಯಾಲಯವು ದಾರಿತಪ್ಪಿಸುವ ಹೇಳಿಕೆ ನೀಡಿದ್ದಕ್ಕಾಗಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು.
ಬಾಬಾ ರಾಮದೇವ್, ಪತಂಜಲಿ ಹಾಗೂ ಸುಪ್ರೀಂ ಕೋರ್ಟ್
ಬಾಬಾ ರಾಮದೇವ್, ಪತಂಜಲಿ ಹಾಗೂ ಸುಪ್ರೀಂ ಕೋರ್ಟ್ಬಾಬಾ ರಾಮದೇವ್ (ಫೇಸ್‌ಬುಕ್‌)

ಪತಂಜಲಿ ಉತ್ಪನ್ನಗಳ ಬಗ್ಗೆ ಜನಸಾಮಾನ್ಯರನ್ನು ದಾರಿತಪ್ಪಿಸುವ ಜಾಹೀರಾತು ನೀಡಿದ ಹಿನ್ನೆಲೆಯಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ ಹೂಡಲಾದ ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಲು ವಿಫಲವಾದ ಬಾಬಾ ರಾಮದೇವ್ ಅವರು ಖುದ್ದು ಹಾಜರಾಗುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ರಾಮದೇವ್ ಮತ್ತು ಪತಂಜಲಿ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರು ಔಷಧ ಮತ್ತು ಮಾಂತ್ರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ 1954ರ ಸೆಕ್ಷನ್ 3 ಮತ್ತು 4 ಅನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಹೇಳಿದೆ.

ಪತಂಜಲಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರ ತೀವ್ರ ವಿರೋಧದ ನಡುವೆಯೂ ನ್ಯಾಯಾಲಯ ಈ ಆದೇಶ ಹೊರಡಿಸಿತು.

ರಾಮದೇವ್ ಮತ್ತು ಬಾಲಕೃಷ್ಣ ಅವರಿಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ ನ್ಯಾಯಾಲಯ "ನಮ್ಮ ಆಜ್ಞೆಗಳನ್ನು ನೀವು ಹೇಗೆ ವಿರೋಧಿಸಲು ಸಾಧ್ಯ?" ಎಂದು ಪ್ರಶ್ನಿಸಿತು.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ

ಇದಕ್ಕೇ ಆಕ್ಷೇಪ ವ್ಯಕ್ತಪಡಿಸಿದ ರೋಹಟ್ಗಿ ಅವರು ರಾಮದೇವ್‌ ಅವರ ವಿಚಾರವನ್ನು ಏಕೆ ಪ್ರಸ್ತಾಪಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ಆಗ ನ್ಯಾಯಾಲಯ ನಿಷ್ಠುರವಾಗಿ "ಕಕ್ಷಿದಾರರು ಹಾಜರಾಗಬೇಕಿದೆ. ಮುಂದಿನ ದಿನಾಂಕದಂದು ಆಲಿಸೋಣ. ಇನ್ನು ಸಾಕು" ಎಂದಿತು.

ಕಾನೂನಿನ ಉಲ್ಲಂಘನೆ ನ್ಯಾಯಾಂಗ ನಿಂದನೆಯಲ್ಲ ಮತ್ತು ಮುಕ್ತ ನ್ಯಾಯಾಲಯದಲ್ಲಿ ಏನನ್ನು ಅವಲಂಬಿಸಲಾಗಿದೆ ಎಂಬುದನ್ನು ಆದೇಶದಲ್ಲಿ ದಾಖಲಿಸಬೇಕಾಗಿದೆ ಎಂದು ರೋಹಟ್ಗಿ ವಾದಿಸಿದರು.

ಆದರೆ ಇದಕ್ಕೆ ಮಣಿಯದ ನ್ಯಾಯಾಲಯ ರಾಮದೇವ್ ಅವರ ಖುದ್ದು ಹಾಜರಿಗೆ ಆದೇಶಿಸಿತು.

ಹಿಂದಿನ ವಿಚಾರಣೆಯಲ್ಲಿ, ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತನ್ನು ಇತ್ತೀಚೆಗೆ ನಿಷೇಧಿಸಿದ್ದ ನ್ಯಾಯಾಲಯವು ದಾರಿತಪ್ಪಿಸುವ ಹೇಳಿಕೆ ನೀಡಿದ್ದಕ್ಕಾಗಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮದೇವ್ ಮತ್ತು ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು.

ಯಾವುದೇ ಪ್ರಾಯೋಗಿಕ ಸಾಕ್ಷ್ಯಗಳಿಲ್ಲದಿದ್ದರೂ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡುವ ಮೂಲಕ ಪತಂಜಲಿ ದೇಶದ ಜನರ ದಿಕ್ಕುತಪ್ಪಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿತ್ತು.

2022 ರಲ್ಲಿ ಪ್ರಸ್ತುತ ಅರ್ಜಿಯನ್ನು ಸಲ್ಲಿಸಲಾಗಿದ್ದರೂ ದಾರಿತಪ್ಪಿಸುವ ಜಾಹೀರಾತುಗಳನ್ನು ನಿಭಾಯಿಸದಿದ್ದಕ್ಕಾಗಿ ಅದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಬೇರೆ ಔಷಧಗಳ ವಿರುದ್ಧ ಪತಂಜಲಿ ಪ್ರತಿಕೂಲ ಹೇಳಿಕೆ ನೀಡುವಂತಿಲ್ಲ ಎಂದು ಅದು ಆದೇಶಿಸಿತ್ತು.

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಡ್ವೊಕೇಟ್-ಆನ್-ರೆಕಾರ್ಡ್ ಅಮರಜೀತ್ ಸಿಂಗ್ ಅವರ ಮೂಲಕ ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುವ ಪತಂಜಲಿ ಆಯುರ್ವೇದ ಉತ್ಪನ್ನಗಳ ಜಾಹೀರಾತಿನಲ್ಲಿ ಮಾಡಿದ ಪ್ರತಿಯೊಂದು ಸುಳ್ಳು ಪ್ರತಿಪಾದನೆಗಳಿಗೆ ತಲಾ ₹ 1 ಕೋಟಿ ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಕಳೆದ ನವೆಂಬರ್‌ನಲ್ಲಿ ಎಚ್ಚರಿಕೆ ನೀಡಿತ್ತು.

ಇಡೀ ಪ್ರಕರಣವನ್ನು ಅಲೋಪತಿ / ಆಧುನಿಕ ಔಷಧ ಮತ್ತು ಆಯುರ್ವೇದ ಉತ್ಪನ್ನಗಳ ನಡುವಿನ ಚರ್ಚೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿತ್ತು.

ದಾರಿತಪ್ಪಿಸುವ ವೈದ್ಯಕೀಯ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಅಗತ್ಯವಿರುವುದರಿಂದ ಮುಂದೆ ಇಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಮತ್ತು ಮಾಧ್ಯಮಗಳಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ಅದು ಪತಂಜಲಿ ಆಯುರ್ವೇದಕ್ಕೆ ನಿರ್ದೇಶನ ನೀಡಿತ್ತು.

Related Stories

No stories found.
Kannada Bar & Bench
kannada.barandbench.com