ಪಟಾಕಿ ಸಂಪೂರ್ಣ ನಿಷೇಧ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ದೀಪಾವಳಿ ಸಮೀಪಿಸುತ್ತಿರುವ ಕಾರಣ ಈಗ ತಡೆಯಾಜ್ಞೆ ನೀಡಿದರೆ ನಷ್ಟ ಉಂಟಾಗಬಹುದು. ಅರ್ಜಿದಾರರು ಈ ಮೊದಲೇ ತನ್ನನ್ನು ಸಂಪರ್ಕಿಸಬೇಕಿತ್ತು ಎಂದ ನ್ಯಾಯಾಲಯ.
Supreme court of India, Firecrackers
Supreme court of India, Firecrackers

ದೇಶದಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಅರ್ಜಿದಾರರು ಮನವಿಯನ್ನು ಪ್ರಸ್ತಾಪಿಸಿದಾಗ, ದೀಪಾವಳಿ ಸಮೀಪಿಸುತ್ತಿರುವ ಕಾರಣ ಈಗ ತಡೆಯಾಜ್ಞೆ ನೀಡಿದರೆ ನಷ್ಟ ಉಂಟಾಗಬಹುದು. ಅರ್ಜಿದಾರರು ಈ ಮೊದಲೇ ತನ್ನನ್ನು ಸಂಪರ್ಕಿಸಬೇಕಿತ್ತು ಎಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ನೇತೃತ್ವದ ಪೀಠ ಅರ್ಜಿಯ ವಿಚಾರಣೆಗೆ ನಿರಾಕರಿಸಿತು.

“ನಾವಿದನ್ನು ಪುರಸ್ಕರಿಸುವುದಿಲ್ಲ. ದೀಪಾವಳಿ ಸಮೀಪದಲ್ಲೇ ಇದೆ. ಇದಕ್ಕೆ (ಪಟಾಕಿಗೆ) ಸಂಬಂಧಿಸಿದಂತೆ ಈಗಾಗಲೇ ಹೂಡಿಕೆ ಮಾಡಿದವರಿದ್ದಾರೆ. ಈಗ ಪ್ರತಿಬಂಧಕಾಜ್ಞೆ ನೀಡಿದರೆ ನಷ್ಟ ಉಂಟಾಗಬಹುದು. ನೀವು ಕೆಲ ತಿಂಗಳ ಮೊದಲೇ ಬರಬೇಕಿತ್ತು” ಎಂದು ಪೀಠ ತಿಳಿಸಿತು.

ದೆಹಲಿ ಸರ್ಕಾರ ಜನವರಿ 1ರವರೆಗೆ ಪಟಾಕಿ ನಿಷೇಧಿಸಿರುವುದಕ್ಕೆ ತಡೆ ನೀಡಲು ಬಿಜೆಪಿ ಸಂಸದ ಮನೋಜ್‌ ತಿವಾರಿ ಮಾಡಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಈ ವಾರದ ಆರಂಭದಲ್ಲಿ ನಿರಾಕರಿಸಿತ್ತು. ಆದರೆ, ಇದೇ ವಿಚಾರವಾಗಿ ಇರುವ ವಿವಿಧ ಮನವಿಗಳ ಜೊತೆಗೆ ಒಟ್ಟಾಗಿ ಆಲಿಸಲು ಅದನ್ನು ಎಂ ಆರ್‌ ಶಾ ನೇತೃತ್ವದ ಪೀಠದ ಮುಂದೆ ಇರಿಸಲು ಸೂಚಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com