ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದೋಷದ ವಿರುದ್ಧ ಧ್ವನಿ ಎತ್ತಿದ್ದ ರಾಜಕೀಯ ಪಕ್ಷವೊಂದರ ಮನವಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಅರ್ಜಿದಾರರಿಗೆ ₹ 50 ಸಾವಿರ ದಂಡ ವಿಧಿಸಿದೆ [ಮಧ್ಯಪ್ರದೇಶ ಜನ ವಿಕಾಸ್ ಪಕ್ಷ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ].
ಇವಿಎಂಗಳು ದಶಕಗಳಿಂದ ದೇಶದಲ್ಲಿ ಬಳಕೆಯಲ್ಲಿದ್ದು ಆಗಾಗ್ಗೆ ಅವುಗಳಲ್ಲಿ ಸಮಸ್ಯೆ ಇದೆಯೆಂದು ಹೇಳುವ ಯತ್ನ ನಡೆಯುತ್ತಿದೆ. ಪ್ರಸ್ತುತ ಅರ್ಜಿ ಅಂತಹ ಮತ್ತೊಂದು ಪ್ರಯತ್ನ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠ ಟೀಕಿಸಿತು.
"ಮತದಾರರಿಂದ ಹೆಚ್ಚು ಮನ್ನಣೆ ಪಡೆಯದ ಪಕ್ಷ ಈಗ ಅರ್ಜಿ ಸಲ್ಲಿಸುವ ಮೂಲಕ ಮಾನ್ಯತೆ ಪಡೆಯಲು ಹೊರಟಿದೆ!" ಎಂದು ಕೂಡ ನ್ಯಾಯಾಲಯ ಕಿಡಿ ಕಾರಿತು.
ಇಂತಹ ಅರ್ಜಿಗಳಿಗೆ ಕಡಿವಾಣ ಹಾಕಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಅರ್ಜಿ ಸಲ್ಲಿಸಿದ್ದ ಮಧ್ಯಪ್ರದೇಶ ಜನ್ ವಿಕಾಶ್ ಪಕ್ಷಕ್ಕೆ ₹ 50 ಸಾವಿರ ದಂಡ ವಿಧಿಸಿ ಅದನ್ನು ಸುಪ್ರೀಂ ಕೋರ್ಟ್ ಗ್ರೂಪ್- ಸಿ (ಗುಮಾಸ್ತೇತರ) ನೌಕರರ ಕಲ್ಯಾಣ ಸಂಘದ ಹೆಸರಿನಲ್ಲಿ ಠೇವಣಿ ಇಡುವಂತೆ ಸೂಚಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]