ಪತಂಜಲಿ ನ್ಯಾಯಾಂಗ ನಿಂದನೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ರಾಮದೇವ್‌ ಮತ್ತು ಬಾಲಕೃಷ್ಣ ಅವರು ಖುದ್ದು ಹಾಜರಾಗಬೇಕೆಂಬ ಆದೇಶವನ್ನೂ ನ್ಯಾಯಾಲಯ ಇದೇ ವೇಳೆ ಕೈಬಿಟ್ಟಿದೆ.
Baba Ramdev, Acharya Balkrishna, Patanajali and Supreme court
Baba Ramdev, Acharya Balkrishna, Patanajali and Supreme courtBaba Ramdev, Acharya Balkrishna (Facebook)

ಪತಂಜಲಿ ಆಯುರ್ವೇದ ಕಂಪೆನಿ ಮತ್ತದರ ಮಾಲೀಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ್ದ ಸಂಬಂಧ ದಾಖಲಿಸಲಾದ ನ್ಯಾಯಾಂಗ ನಿಂದನೆ ಪ್ರಕರಣ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ).

ಪತಂಜಲಿ ಉತ್ಪನ್ನಗಳ ಕುರಿತಂತೆ ಪ್ರಕಟಿಸಲಾಗಿದ್ದ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತೆಗೆದುಹಾಕಲು ತೆಗೆದುಕೊಂಡ ಕ್ರಮಗಳ ವಿವರಕ್ಕೆ ಸಂಬಂಧಿಸಿದ ಅಫಿಡವಿಟ್‌ ಸಲ್ಲಿಸಲಾಗುವುದು ಎಂದು ಪತಂಜಲಿ ತಿಳಿಸಿದ ಮೇಲೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರ ವೈಯಕ್ತಿಕ ಹಾಜರಾತಿ ಆದೇಶವನ್ನೂ ಕೈಬಿಟ್ಟಿತು.

ಮೂರು ವಾರಗಳಲ್ಲಿ ಸಲ್ಲಿಸಬೇಕಾದ ಅಫಿಡವಿಟ್‌ನಲ್ಲಿ ಪರವಾನಗಿ  ಅಮಾನತುಗೊಳಿಸಿರುವ ಪತಂಜಲಿ ಉತ್ಪನ್ನಗಳನ್ನು ಹಿಂಪಡೆಯಲು ತೆಗೆದುಕೊಂಡ ಕ್ರಮಗಳನ್ನೂ ಕಂಪೆನಿ ವಿವರಿಸಬೇಕಿದೆ.

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಮತ್ತು ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಅವಹೇಳನಕಾರಿ ಅಭಿಯಾನ ನಡೆಸುತ್ತಿರುವುದನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ  ನ್ಯಾಯಾಲಯದಲ್ಲಿ ನಡೆಯಿತು.

 ಇಂದು ರಾಮ್‌ದೇವ್ ಮತ್ತು ಬಾಲಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್, ಪತಂಜಲಿ ತನ್ನ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವ ಎಲ್ಲಾ ವೇದಿಕೆಗಳಿಗೆ ಪತ್ರ ಬರೆದು ನಿಷೇಧಿತ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದೆ. ತಮ್ಮ ಕಕ್ಷಿದಾರರು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವುದರಿಂದ ವಿನಾಯತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಬಾಬಾ ರಾಮದೇವ್‌ ಅವರು ಪ್ರಭಾವಿಯಾಗಿದ್ದ ಅವರು ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿತು.

ಈ ಹಂತದಲ್ಲಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ರಾಮದೇವ್‌ ಅವರು ಯೋಗ ಕುರಿತು ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ ಎಂದರು. ಇದನ್ನು ಒಪ್ಪದ ನ್ಯಾಯಾಲಯ ಯೋಗಕ್ಕಾಗಿ ಅವರು ಉತ್ತಮ ಕೆಲಸ ಮಾಡಿರಬಹುದಾದರೂ ಪತಂಜಲಿ ಉತ್ಪನ್ನ ಬೇರೆಯದೇ ವಿಚಾರ ಎಂದಿತು.

Kannada Bar & Bench
kannada.barandbench.com