ಅದಾನಿ ಪೋರ್ಟ್ಸ್ಗೆ 2005ರಲ್ಲಿ ಮಂಜೂರಾಗಿದ್ದ ಗುಜರಾತ್ನ ಕಚ್ ಜಿಲ್ಲೆಯ 108 ಹೆಕ್ಟೇರ್ ಭೂಮಿಯನ್ನು ಹಿಂಪಡೆಯುವ ಗುಜರಾತ್ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ [ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಹಾಗೂ ಗುಜರಾತ್ ಸರ್ಕಾರ ನಡುವಣ ಪ್ರಕರಣ].
ಜಾನುವಾರು ಮೇಯಿಸುವ ಸಲುವಾಗಿ ಹಳ್ಳಿಗರಿಗೆ ಭೂಮಿಯನ್ನು ಮರಳಿ ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿತ್ತು.
ತಾನು ವಿಚಾರಣೆ ನಡೆಸುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಕ್ಷಿದಾರರಿಗೆ ಸೂಚಿಸಿರುವ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಜಾನುವಾರು ಮೇಯಿಸುವ ಉದ್ದೇಶದಿಂದ ಭೂಮಿಯನ್ನು ಮರಳಿ ಗ್ರಾಮಸ್ಥರಿಗೆ ನೀಡುವುದಾಗಿ ಗುಜರಾತ್ ಸರ್ಕಾರ ಈ ಹಿಂದೆ ಗುಜರಾತ್ ಹೈಕೋರ್ಟ್ಗೆ ತಿಳಿಸಿತ್ತು.
ನವಿನಾಳ್ ಗ್ರಾಮದ ನಿವಾಸಿಗಳಿಗೆ ಗೋಮಾಳ ಕೊರತೆ ನೀಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಏಪ್ರಿಲ್ 19 ರಂದು ನೀಡಿದ್ದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.
ನವಿನಾಳ್ ಗ್ರಾಮದ ಗೋಮಾಳ ಭೂಮಿಯನ್ನು ಮರಳಿಸುವುದು ಸರ್ಕಾರದ ಕರ್ತವ್ಯ ಎಂದು ನ್ಯಾಯಾಲಯ ಏಪ್ರಿಲ್ 19 ರ ಆದೇಶದಲ್ಲಿ ಹೇಳಿತ್ತು.
ಜೂನ್ 21 ರಂದು, ಮುಖ್ಯ ನ್ಯಾಯಮೂರ್ತಿಗಳಾದ ಸುನೀತಾ ಅಗರ್ವಾಲ್ ಮತ್ತು ಪ್ರಣವ್ ತ್ರಿವೇದಿ ಅವರಿದ್ದ ಪೀಠವು ಏಪ್ರಿಲ್ 19 ರ ಆದೇಶ ಅನುಪಾಲನೆಯಾದ ಕುರಿತು ಅಫಿಡವಿಟ್ ಸಲ್ಲಿಸಲು ರಾಜ್ಯ ಕಂದಾಯ ಇಲಾಖೆ ಮತ್ತು ಕಛ್ ಜಿಲ್ಲಾಧಿಕಾರಿಗೆ ಕೊನೆಯ ಅವಕಾಶ ನೀಡಿತ್ತು.
ಜುಲೈ 5 ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ತನ್ನ ಆದೇಶದಲ್ಲಿ “ನವೀನಾಳ್ ಗ್ರಾಮಕ್ಕೆ ಗೋಮಾಳ ಕೊರತೆ ಇರುವುದನ್ನು ಸರಿಪಡಿಸುವುದಕ್ಕಾಗಿ ಅದಾನಿ ಪೋರ್ಟ್ಸ್ನಿಂದ 108 ಹೆಕ್ಟೇರ್ ಪ್ರದೇಶವನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದ್ದು ಈ ಕುರಿತಾದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲಾಗಿದೆ”ಎಂದು ಉಲ್ಲೇಖಿಸಿತ್ತು.
ಅದಾನಿ ಗ್ರೂಪ್ನ ಮುಂದ್ರಾ ಬಂದರು ವಿಶೇಷ ಆರ್ಥಿಕ ವಲಯ ಯೋಜನೆಗಾಗಿ ರಾಜ್ಯ ಸರ್ಕಾರ 2005ರಲ್ಲಿ ಕೆಲ ಭಾಗಗಳನ್ನು ಮಂಜೂರು ಮಾಡಿತ್ತು. 2010ರಲ್ಲಿ ಜಾನುವಾರುಗಳನ್ನು ಮೇಯಿಸಲು ಬಳಸುತ್ತಿದ್ದ ಜಮೀನಿನ ಸುತ್ತ ಬೇಲಿ ಹಾಕಿರುವುದನ್ನು ನೋಡಿದ ನಿವಾಸಿಗಳಿಗೆ ಗೋಮಾಳವನ್ನು ಯೋಜನೆಗಾಗಿ ಮಂಜೂರು ಮಾಡಿರುವುದು ತಿಳಿದುಬಂದಿತ್ತು. 2011ರಲ್ಲಿ ಅವರು ಜಮೀನು ಹಂಚಿಕೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದರು.
ನವಿನಾಳ್ ಗ್ರಾಮದಲ್ಲಿ 732 ಜಾನುವಾರುಗಳಿದ್ದು ಅವುಗಳ ಮೇವಿಗಾಗಿ ಸುಮಾರು 130 ಹೆಕ್ಟೇರ್ ಪ್ರದೇಶ ಅಗತ್ಯವಿದ್ದು ಅದಾನಿ ಗ್ರೂಪ್ಗೆ ಹಂಚಿಕೆಯಾದ ನಂತರ, ಗ್ರಾಮಸ್ಥರಿಗೆ ಉಳಿದಿರುವುದು ಕೇವಲ 17 ಹೆಕ್ಟೇರ್ ಜಮೀನು ಮಾತ್ರ ಎಂದಿತ್ತು.
ರಾಜ್ಯ ಸರ್ಕಾರ ಆರಂಭದಲ್ಲಿ 387 ಹೆಕ್ಟೇರ್ ಸರ್ಕಾರಿ ಭೂಮಿ ಮತ್ತು ಗ್ರಾಮ ಪಂಚಾಯಿತಿಗೆ ಸೇರಿದ ಸುಮಾರು 85 ಹೆಕ್ಟೇರ್ ಭೂಮಿಯನ್ನು ಗೋಮಾಳಕ್ಕಾಗಿ ಮೀಸಲಿಡುವುದಾಗಿ ತಿಳಿಸಿತ್ತು. ಹೀಗಾಗಿ 2014ರಲ್ಲಿ ಹೈಕೋರ್ಟ್ ಪ್ರಕರಣ ಇತ್ಯರ್ಥಗೊಳಿಸಿತ್ತು.
ಆದರೆ ರಾಜ್ಯ ಸರ್ಕಾರ ತನ್ನ ಆರಂಭಿಕ ಪ್ರಸ್ತಾವನೆ ಅಸಮಂಜಸವಾಗಿರುವುದನ್ನು ವಿವರಿಸಿ ಅದನ್ನು ಹಿಂಪಡೆಯುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಮತ್ತೆ ಆರಂಭವಾಗಿತ್ತು.