ಚುನಾವಣಾ ಅಕ್ರಮ ಪ್ರಕರಣ: ಪ್ರಜ್ವಲ್‌ ರೇವಣ್ಣ ಆಯ್ಕೆ ಅಸಿಂಧು ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್‌

ಸಂಸದರಾಗಿರುವ ರೇವಣ್ಣ ಅವರಿಗೆ ಯಾವುದೇ ತೆರನಾದ ಭತ್ಯೆ ಸಿಗುವುದಿಲ್ಲ. ತಡೆಯಾಜ್ಞೆ ಇರುವುದರಿಂದ ಯಾವುದೇ ಮತದಾನದಲ್ಲಿ ಭಾಗವಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಹೇಳಿದೆ.
Supreme Court and Prajwal Revanna
Supreme Court and Prajwal Revanna

ಚುನಾವಣಾ ಅಕ್ರಮ ಆರೋಪದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಸದಸ್ಯ ಪ್ರಜ್ವಲ್‌ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಸೋಮವಾರ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ [ಪ್ರಜ್ವಲ್‌ ರೇವಣ್ಣ @ ಪ್ರಜ್ವಲ್‌ ಆರ್‌ ವರ್ಸಸ್‌ ಎ ಮಂಜು ಮತ್ತು ಇತರರು].

ಪ್ರಜ್ವಲ್‌ ರೇವಣ್ಣ ಅವರು ಕರ್ನಾಟಕ ಹೈಕೋರ್ಟ್‌ನ ಸೆಪ್ಟೆಂಬರ್‌ 1ರ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು.

ಪ್ರಜ್ವಲ್‌ ಆಯ್ಕೆ ಅಸಿಂಧು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿರುವ ನ್ಯಾಯಾಲಯವು ತಡೆಯಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಸಂಸದರಾಗಿರುವ ಪ್ರಜ್ವಲ್‌ಗೆ ಯಾವುದೇ ಭತ್ಯೆಗಳು ಸಿಗುವುದಿಲ್ಲ. ತಡೆಯಾಜ್ಞೆ ಚಾಲ್ತಿಯಲ್ಲಿರುವವರೆಗೆ ಅವರು ಯಾವುದೇ ಮತದಾನದಲ್ಲಿ ಭಾಗಿಯಾಗುವಂತಿಲ್ಲ ಎಂದು ಆದೇಶದಲ್ಲಿ ಹೇಳಿದೆ.

ಪ್ರಜ್ವಲ್‌ ರೇವಣ್ಣ ಅವರ ಆಯ್ಕೆ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾ ಮಾಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಈ ಹಿಂದೆ ಎರಡು ಬಾರಿ ಸುಪ್ರೀಂ ಕೋರ್ಟ್‌ ಬದಿಗೆ ಸರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Also Read
ಪ್ರಜ್ವಲ್‌ ಆಯ್ಕೆ ಅಸಿಂಧು ಪ್ರಕರಣ: ಶಿಕ್ಷೆಗೆ ತಡೆ ಕೋರಿದ್ದ ಮಧ್ಯಂತರ ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

ಪ್ರಜ್ವಲ್‌ ಆಯ್ಕೆಗೆ ನೆರವಾದ ಆರೋಪದಲ್ಲಿ ಶಾಸಕ ಹಾಗೂ ಪ್ರಜ್ವಲ್‌ ತಂದೆ ಎಚ್‌ ಡಿ ರೇವಣ್ಣ ಮತ್ತು ಸಹೋದರ ಹಾಗೂ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರಿಗೂ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಇದನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಪ್ರಜ್ವಲ್‌ ಪರವಾಗಿ ಹಿರಿಯ ವಕೀಲರಾದ ಮುಕುಲ್‌ ರೋಹಟ್ಗಿ ಮತ್ತು ಕೆ ಕೆ ವೇಣುಗೋಪಾಲ್‌ ವಾದಿಸಿದರು. ವಕೀಲರಾದ ಮಯಾಂಕ್‌ ಕ್ಷೀರಸಾಗರ್‌, ಅಭಿಷೇಕ್‌ ಭಾರ್ತಿ ಮತ್ತು ನಿಶಾಂತ್‌ ಎ ವಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com