ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ದೇವಾಲಯವಿತ್ತು; ಹಿಂದೂ ದೇವರ ಕೆತ್ತನೆಗಳು ಕೆಳಗೆ ಮುಚ್ಚಲ್ಪಟ್ಟಿವೆ: ಎಎಸ್ಐ ವರದಿ

ವರದಿಯ ಪ್ರಕಾರ, ಮೊದಲೇ ಅಸ್ತಿತ್ವದಲ್ಲಿದ್ದ ರಚನೆಯನ್ನು 17 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ನಾಶಪಡಿಸಲಾಗಿದೆ ಎನ್ನಲಾಗಿದೆ.
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಜ್ಞಾನವಾಪಿ ಮಸೀದಿಯ ಬಗ್ಗೆ ತನ್ನ ವೈಜ್ಞಾನಿಕ ಸಮೀಕ್ಷೆಯ ವರದಿಯಲ್ಲಿ ಮಸೀದಿ ನಿರ್ಮಾಣಕ್ಕೂ ಮೊದಲು ಜ್ಞಾನವಾಪಿ ಮಸೀದಿಯಿದ್ದ ಸ್ಥಳದಲ್ಲಿ ಹಿಂದೂ ದೇವಾಲಯವಿತ್ತು ಎಂದು ತೀರ್ಮಾನಿಸಿದೆ.

ವರದಿಯ ಪ್ರಕಾರ, ಮೊದಲೇ ಅಸ್ತಿತ್ವದಲ್ಲಿದ್ದ ರಚನೆಯು 17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ನಾಶವಾಯಿತು.

"ಮೊದಲೇ ಅಸ್ತಿತ್ವದಲ್ಲಿದ್ದ ರಚನೆಯು 17ನೇ ಶತಮಾನದಲ್ಲಿ, ಔರಂಗಜೇಬನ ಆಳ್ವಿಕೆಯಲ್ಲಿ ನಾಶವಾದಂತೆ ತೋರುತ್ತದೆ, ಮತ್ತು ಅದರ ಒಂದು ಭಾಗವನ್ನು ಮಾರ್ಪಡಿಸಿದ್ದು ಪ್ರಸ್ತುತ ಅಸ್ತಿತ್ವದಲ್ಲಿರುವ ರಚನೆಯಲ್ಲಿ ಮರುಬಳಕೆ ಮಾಡಲಾಗಿದೆ. ಇಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನಗಳು / ಸಮೀಕ್ಷೆ, ವಾಸ್ತುಶಿಲ್ಪದ ಅವಶೇಷಗಳು, ಬಹಿರಂಗಪಡಿಸಿದ ವೈಶಿಷ್ಟ್ಯಗಳು ಮತ್ತು ಕಲಾಕೃತಿಗಳು, ಶಾಸನಗಳು, ಕಲೆ ಮತ್ತು ಶಿಲ್ಪಗಳ ಅಧ್ಯಯನದ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ರಚನೆಯ ನಿರ್ಮಾಣಕ್ಕೂ ಮೊದಲು ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಹೇಳಬಹುದು" ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಹಿಂದೂ ದೇವತೆಗಳ ಶಿಲ್ಪಗಳು ಮತ್ತು ಕೆತ್ತಲಾಗಿರುವ ವಿವಿಧ ವಾಸ್ತುಶಿಲ್ಪಗಳು ಕೆಳಗೆ ಹೂತುಹೋಗಿರುವುದು ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಮಸೀದಿಗೆ ಮುಂಚಿತವಾಗಿ ಈ ಸ್ಥಳದಲ್ಲಿ ದೇವಾಲಯವಿತ್ತು ಎಂದು ಆರೋಪಿಸಿ ಹಿಂದೂ ಪಕ್ಷಗಳು ಸಲ್ಲಿಸಿದ ಮೊಕದ್ದಮೆಗಳ ವಿಚಾರಣೆಯ ಸಂದರ್ಭದಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯವು ಈ ಸಮೀಕ್ಷೆಯಗೆ ಅನುಮತಿಸಿದ ನಂತರ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಲಾಗಿದೆ.

ಸುಪ್ರೀಂ ಕೋರ್ಟ್‌ ನಿರ್ಬಂಧಿಸಿದ್ದ ಸ್ಥಳ ಹೊರತುಪಡಿಸಿ (ವುಝೂಖಾನಾ) ಕಳೆದ ವರ್ಷ ಜುಲೈನಲ್ಲಿ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ನ್ಯಾಯಾಲಯವು ಎಎಸ್ಐ ನಿರ್ದೇಶಕರಿಗೆ ಆದೇಶಿಸಿತ್ತು .

ಇದರ ಅನುಸಾರವಾಗಿ, ಎಎಸ್ಐ ಸಮೀಕ್ಷೆಯನ್ನು ನಡೆಸಿತ್ತು.

ಎಎಸ್ಐ ವರದಿಯ ಇತರ ಪ್ರಮುಖ ಅಂಶಗಳು ಹೀಗಿವೆ:

ಕಂಬಗಳು ಮತ್ತು ಚೌಕಸ್ಥಂಭಗಳು

ಪ್ರಸ್ತುತ ಸಮೀಕ್ಷೆಯಲ್ಲಿ ಒಟ್ಟು 34 ಶಾಸನಗಳನ್ನು ಗುರುತಿಸಲಾಗಿದೆ ಮತ್ತು 32ರ ನಕಲುಗಳನ್ನು ತೆಗೆದುಕೊಳ್ಳಲಾಗಿದೆ. ವಾಸ್ತವವಾಗಿ, ಇವು ಮೊದಲೇ ಅಸ್ತಿತ್ವದಲ್ಲಿರುವ ಹಿಂದೂ ದೇವಾಲಯಗಳ ಕಲ್ಲುಗಳ ಮೇಲಿನ ಶಾಸನಗಳಾಗಿವೆ, ಇವುಗಳನ್ನು ಅಸ್ತಿತ್ವದಲ್ಲಿರುವ ರಚನೆಯ ನಿರ್ಮಾಣ / ದುರಸ್ತಿಯ ಸಮಯದಲ್ಲಿ ಮರುಬಳಕೆ ಮಾಡಲಾಗಿದೆ. ಇವುಗಳಲ್ಲಿ ದೇವನಾಗರಿ, ಗ್ರಂಥ, ಕನ್ನಡ, ತೆಲುಗು ಲಿಪಿಗಳಲ್ಲಿನ ಶಾಸನಗಳು ಸೇರಿವೆ. ಹಿಂದಿನ ಶಾಸನಗಳನ್ನು ಕಟ್ಟಡ ಮರುರಚನೆಯ ವೇಳೆ ಮರುಬಳಕೆ ಮಾಡಿರುವುದು ಇದಕ್ಕೂ ಮುಂಚೆ ಇಲ್ಲಿದ್ದ ರಚನೆಗಳನ್ನು ನಾಶಪಡಿಸಲಾಗಿದೆ ಎನ್ನುವುದರ ಹಾಗೂ ಅವುಗಳ ಭಾಗಗಳನ್ನು ಅಸ್ತಿತ್ವದಲ್ಲಿರುವ ರಚನೆಯ ನಿರ್ಮಾಣ / ದುರಸ್ತಿಯಲ್ಲಿ ಮರುಬಳಕೆ ಮಾಡಿಕೊಳ್ಳಲಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಈ ಶಾಸನಗಳಲ್ಲಿ ಜನಾರ್ದನ, ರುದ್ರ ಮತ್ತು ಉಮೇಶ್ವರನಂತಹ ಮೂರು ದೇವರುಗಳ ಹೆಸರುಗಳು ಕಂಡುಬಂದಿವೆ.

ದೇವಾಲಯ ನೆಲಸಮಕ್ಕೆ ಆದೇಶ

ಇತ್ತೀಚಿನ ಸಮೀಕ್ಷೆಯ ಸಮಯದಲ್ಲಿ, ಮಸೀದಿಯ ಕೋಣೆಯೊಂದರಿಂದ ಶಾಸನವಿರುವ ಕಲ್ಲನ್ನು ವಶಪಡಿಸಿಕೊಳ್ಳಲಾಗಿದೆ. ಚಕ್ರವರ್ತಿ ಔರಂಗಜೇಬ್ ಜೀವನ ಚರಿತ್ರೆಯಾದ ಮಾಸಿರ್-ಇ-ಆಲಂಗಿರಿಯಲ್ಲಿ ಇಲ್ಲಿನ ದೇವಾಲಯಗಳು ಹಾಗೂ ಶಾಲೆಗಳನ್ನು ನೆಲಸಮಗೊಳಿಸಲು ಹೊರಡಿಸಿದ್ದ ಆದೇಶದ ಬಗ್ಗೆ ಮಾಹಿತಿ ಇದೆ.

ಹಿಂದೂ ದೇವತೆಗಳ ಶಿಲ್ಪಗಳು ಸಮಾಧಿ

ಹಿಂದೂ ದೈವಗಳ ಶಿಲ್ಪಗಳು ಮತ್ತು ವಾಸ್ತುಶಿಲ್ಪ ಕೆತ್ತನೆಗಳು ನೆಲಮಾಳಿಗೆಯಲ್ಲಿ ಎಸೆಯಲಾದ ಮಣ್ಣಿನ ಅಡಿಯಲ್ಲಿ ಹೂತುಹೋಗಿರುವುದು ಕಂಡುಬಂದಿದೆ. ಅಸ್ತಿತ್ವದಲ್ಲಿದ್ದ ವಾಸ್ತುಶಿಲ್ಪದ ಅವಶೇಷಗಳು, ಗೋಡೆಗಳ ಮೇಲೆ ಕಂಡುಬಂದಿವೆ. ಪಶ್ಚಿಮ ಕೋಣೆಯ ಪೂರ್ವ ಗೋಡೆಯ ಮೇಲೆ ತೋರಣದಿಂದ ಕೂಡಿದ ದೊಡ್ಡ ಅಲಂಕೃತ ಪ್ರವೇಶ ದ್ವಾರವಿದೆ. ಅಲ್ಲದೆ ಒಳ ಮತ್ತು ಹೊರ ಗೋಡೆಗಳಲ್ಇ ಅಲಂಕಾರಕ್ಕಾಗಿ ಕೆತ್ತಲಾದ ಪಕ್ಷಿಗಳು ಮತ್ತು ಪ್ರಾಣಿಗಳು ಕಂಡು ಬಂದಿವೆ.

ಕಳೆದ ವರ್ಷ ಆಗಸ್ಟ್‌ನಲ್ಲಿ, ಸಮೀಕ್ಷೆಯನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಸಮೀಕ್ಷೆಗಾಗಿ ಹೈಕೋರ್ಟ್ ಆದೇಶವು ಈ ಹಂತದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪವನ್ನು ಬಯಸುವುದಿಲ್ಲ ಮತ್ತು ಅಂತಹ ಸಮೀಕ್ಷೆಯನ್ನು ಅಯೋಧ್ಯೆ ಪ್ರಕರಣದಲ್ಲಿಯೂ ನಡೆಸಲಾಗಿತ್ತು ಎಂದು ಹೇಳಿದೆ.

ರಾಮ ಜನ್ಮಭೂಮಿ ಚಳವಳಿಯ ಉತ್ತುಂಗದಲ್ಲಿ ಪರಿಚಯಿಸಲಾದ 1991 ರ ಪೂಜಾ ಸ್ಥಳಗಳ ಕಾಯ್ದೆಯು 1947ರ ಆಗಸ್ಟ್ 15 ರಂದು ಇದ್ದಂತೆ ಎಲ್ಲಾ ಧಾರ್ಮಿಕ ರಚನೆಗಳ ಸ್ಥಾನಮಾನವನ್ನು ರಕ್ಷಿಸಲು ಸೂಚಿಸುತ್ತದೆ ಎಂಬ ಆಧಾರದ ಮೇಲೆ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಗಳು ಸಿಪಿಸಿಯ ಆದೇಶ 7 ನಿಯಮ 11 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದವು.

ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಎರಡೂ ಇದನ್ನು ತಿರಸ್ಕರಿಸಿದ್ದವು ಮತ್ತು ದಾವೆಯನ್ನು ನಿರ್ವಹಿಸಬಹುದು ಎಂದು ಅಭಿಪ್ರಾಯಪಟ್ಟಿದ್ದವು.

[ಎಎಸ್ಐ ಸಮೀಕ್ಷೆ ವರದಿ ಇಲ್ಲಿದೆ ಓದಿ]

Attachment
PDF
Gyanvapi ASI Survey Report .pdf
Preview

Related Stories

No stories found.
Kannada Bar & Bench
kannada.barandbench.com