
ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯಿದೆ -1991ರ ವಿವಿಧ ಸೆಕ್ಷನ್ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಿರೋಧಿಸಿ ಹಲವು ಮಧ್ಯಪ್ರವೇಶ ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ .
ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಅವರಿದ್ದ ಪೀಠ , ಅಂತಹ ಮಧ್ಯಪ್ರವೇಶ ಅರ್ಜಿಗಳಿಗೆ ಮಿತಿ ಇರಬೇಕು ಎಂದು ಹೇಳಿದೆ.
"ನಾವು ಇಂದು ಪೂಜಾ ಸ್ಥಳಗಳ ಕಾಯಿದೆಯ ಪ್ರಕರಣ ಕೈಗೆತ್ತಿಕೊಳ್ಳುವುದಿಲ್ಲ. ಇದು ತ್ರಿಸದಸ್ಯ ಪೀಠ ವಿಚಾರಣೆ ನಡೆಸಬೇಕಾದ ಪ್ರಕರಣ. ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಮಾರ್ಚ್ನಲ್ಲಿ ಪ್ರಕರಣ ಪಟ್ಟಿ ಮಾಡಿ. ಮಧ್ಯಪ್ರವೇಶ ಅರ್ಜಿ ಸಲ್ಲಿಸುವುದಕ್ಕೂ ಮಿತಿ ಇರಬೇಕು" ಎಂದು ಸಿಜೆಐ ಖನ್ನಾ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪ , ಸಿಪಿಐ (ಎಂಎಲ್), ಜಾಮಿಯತ್ ಉಲೇಮಾ-ಇ-ಹಿಂದ್, ಹಾಗೂ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಮತ್ತು ನಾಯಕರು ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದರು.
ಅವರೆಲ್ಲರೂ ಕಾಯಿದೆಯ ಸಿಂಧುತ್ವವನ್ನು ಸಮರ್ಥಿಸಿಕೊಂಡಿದ್ದು ಅದನ್ನು ಪ್ರಶ್ನಿಸುವ ಅರ್ಜಿಗಳನ್ನು ವಿರೋಧಿಸಿದ್ದಾರೆ. "ಕಳೆದ ಬಾರಿ ನಾವು ಹಲವು ಮಧ್ಯಪ್ರವೇಶಗಳಿಗೆ ಅವಕಾಶ ನೀಡಿದ್ದೆವು" ಎಂದು ಪೀಠ ಹೇಳಿದೆ.
ಹಿರಿಯ ವಕೀಲ ದುಷ್ಯಂತ್ ದವೆ ಅವರು ಇನ್ನು ಮುಂದೆ ಮಧ್ಯಪ್ರವೇಶ ಅರ್ಜಿಗಳಿಗೆ ಅವಕಾಶ ನೀಡಬಾರದು ಎಂದರು. ಹೊಸ ಆಧಾರಗಳು ಹುಟ್ಟಿಕೊಂಡರೆ ಮಾತ್ರ ಹೊಸ ಮಧ್ಯಪ್ರವೇಶ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಆಗ ನ್ಯಾಯಾಲಯ ನಿರ್ದೇಶಿಸಿತು.
"ಹೊಸದಾಗಿ ಮಧ್ಯಪ್ರವೇಶ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು, ಏಕೆಂದರೆ ಇನ್ನೂ ಕೆಲವು ಅಂಶಗಳನ್ನು ಎತ್ತಿಲ್ಲ" ಎಂದ ನ್ಯಾಯಪೀಠ ಕಾಯಿದೆಯನ್ನು ಪ್ರಶ್ನಿಸಿ ಮತ್ತು ನ್ಯಾಯಾಲಯದಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲದ ಅರ್ಜಿಗಳನ್ನು ವಜಾಗೊಳಿಸಲಾಗುವುದು ಹೊಸ ಆಧಾರಗಳನ್ನು ಹೊಂದಿರುವ ಅರ್ಜಿದಾರರು ಅಸ್ತಿತ್ವದಲ್ಲಿರುವ ಅರ್ಜಿಗಳಲ್ಲೇ ತಮ್ಮ ಮನವಿ ಸಲ್ಲಿಸಬಹುದು ಎಂಬುದಾಗಿ ಹೇಳಿದೆ.
"ನೋಟಿಸ್ ನೀಡದೆ ಬಾಕಿ ಇರುವ ರಿಟ್ ಅರ್ಜಿಗಳನ್ನು, ಹೆಚ್ಚುವರಿ ಆಧಾರಗಳನ್ನು ಎತ್ತುವ ಅರ್ಜಿಯನ್ನು ಸಲ್ಲಿಸುವ ಸ್ವಾತಂತ್ರ್ಯದೊಂದಿಗೆ ವಜಾಗೊಳಿಸಲಾಗುತ್ತಿದೆ" ಎಂದು ನ್ಯಾಯಾಲಯ ಆದೇಶಿಸಿತು.
ಹಿರಿಯ ವಕೀಲ ವಿಕಾಸ್ ಸಿಂಗ್ ಮತ್ತು ವಕೀಲ ನಿಜಾಮ್ ಪಾಷಾ ಅವರು 8 ದಿನ ಕಳೆದರೂ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂದು ಗಮನಸೆಳೆದರು. ಅದನ್ನು ಗಮನಿಸಿದ ನ್ಯಾಯಾಲಯ ಪ್ರಕರಣವನ್ನು ಏಪ್ರಿಲ್ನಲ್ಲಿ ತ್ರಿಸದಸ್ಯ ಪೀಠದೆದುರು ವಿಚಾರಣೆಗೆ ಬರುವಂತೆ ಪಟ್ಟಿ ಮಾಡಲು ನಿರ್ದೇಶಿಸಿತು.
ಈ ಕಾಯಿದೆ, ಆಗಸ್ಟ್ 15, 1947ರಂದು ಇದ್ದ ಎಲ್ಲಾ ಧಾರ್ಮಿಕ ರಚನೆಗಳ ಸ್ಥಾನಮಾನವನ್ನು ಹಾಗೆಯೇ ರಕ್ಷಿಸಲು ಪ್ರಯತ್ನಿಸುತ್ತದೆ. ಅಲ್ಲದೆ ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಉಂಟುಮಾಡುವ ಪ್ರಕರಣಗಳನ್ನು ನ್ಯಾಯಾಲಯಗಳು ವಿಚಾರಣೆ ಮಾಡುವುದನ್ನು ತಡೆಯುತ್ತದೆ.
ರಾಮ ಜನ್ಮಭೂಮಿ ಚಳವಳಿ ಪರಾಕಾಷ್ಠೆಯಲ್ಲಿದ್ದಾಗ ಜಾರಿಗೆ ಬಂದ ಈ ಕಾಯಿದೆ, ಆಗಸ್ಟ್ 15, 1947ರಂದು ಇದ್ದ ಎಲ್ಲಾ ಧಾರ್ಮಿಕ ರಚನೆಗಳ ಸ್ಥಾನಮಾನವನ್ನು ಹಾಗೆಯೇ ರಕ್ಷಿಸಲು ಪ್ರಯತ್ನಿಸುತ್ತದೆ. ಅಲ್ಲದೆ ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಉಂಟುಮಾಡುವ ಪ್ರಕರಣಗಳನ್ನು ನ್ಯಾಯಾಲಯಗಳು ವಿಚಾರಣೆ ಮಾಡುವುದನ್ನು ತಡೆಯುತ್ತದೆ. ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ ಅಂತಹ ಪ್ರಕರಣಗಳು ರದ್ದಾಗುತ್ತವೆ ಎಂದು ಕೂಡ ಕಾಯಿದೆ ಹೇಳುತ್ತದೆ.