Justice S M Subramaniam
Justice S M Subramaniam

ಸಹಿಷ್ಣುತೆ ಹಿಂದೂ ಧರ್ಮದ ಪರಮ ಕುರುಹು: ಎರಡು ಪಂಥಗಳಿಗೂ ದೇವಾಲಯದಲ್ಲಿ ಪಠನೆ ಮಾಡಲು ಅನುಮತಿಸಿದ ಮದ್ರಾಸ್‌ ಹೈಕೋರ್ಟ್‌

ಸಹಿಷ್ಣುತೆ ಹಿಂದೂ ಧರ್ಮದ ಪರಮ ಕುರುಹು ಎಂದಿರುವ ನ್ಯಾಯಮೂರ್ತಿ ಎಸ್‌ ಎಂ ಸುಬ್ರಮಣಿಯಮ್‌ ಅವರು ಸಣ್ಣಪುಟ್ಟ ವಿಚಾರಗಳಿಗೆ ಒಡೆದಾಡುವ ಬದಲು ಎರಡು ಗುಂಪುಗಳೂ ದೇವರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹೇಳಿದರು.
Published on

ದೇವರಿಗೆ ಪ್ರಾರ್ಥನೆ ಸಲ್ಲಿಸುವ ಭಕ್ತರ ಹಕ್ಕನ್ನು ನಿರಾಕರಿಸಲಾಗದು ಎಂದು ಮಂಗಳವಾರ ಹೇಳಿರುವ ಮದ್ರಾಸ್‌ ಹೈಕೋರ್ಟ್‌ ವಡಗಲೈ ಮತ್ತು ತೆಂಗಲೈ ಸಮುದಾಯಗಳಿಗೆ ತಮಿಳುನಾಡಿನ ಶ್ರೀ ವರದರಾಜ ಪೆರುಮಾಳ್‌ ದೇವಸ್ಥಾನದಲ್ಲಿ ಪಠನೆ ಮಾಡಲು ಅನುಮತಿಸಿದೆ (ಎಸ್‌ ನಾರಾಯಣನ್‌ ವರ್ಸಸ್‌ ತಮಿಳುನಾಡು ರಾಜ್ಯ).

ವಡಗಲೈ ಸಮುದಾಯಕ್ಕೆ ಪಠನೆ ಮಾಡಲು ಅನುಮತಿ ನಿರಾಕರಿಸಿ ದೇವಸ್ಥಾನದ ಕಾರ್ಯಕಾರಿ ಟ್ರಸ್ಟಿ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಎಂ ಸುಬ್ರಮಣಿಯಮ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಸಹಿಷ್ಣುತೆ ಹಿಂದೂ ಧರ್ಮದ ಪರಮ ಕುರುಹು. ಸಣ್ಣಪುಟ್ಟ ವಿಚಾರಗಳಿಗೆ ಕಿತ್ತಾಡುವ ಬದಲು ಎರಡು ಪಂಥಗಳೂ ದೇವರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. “ಸಹಿಷ್ಣುತೆ ಹಿಂದೂ ಧರ್ಮದ ತಾತ್ವಿಕ ಕುರುಹು. ಪರಸ್ಪರ ಅರ್ಥ ಮಾಡಿಕೊಳ್ಳುವುದು ಮತ್ತು ಗೌರವಿಸುವುದು ಹಾಗೂ ದೇವರನ್ನು ಸ್ಮರಿಸುವುದು ದೇವಸ್ಥಾನದ ಚಟುವಟಿಕೆಗಳ ಪಾವಿತ್ರ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ, ಎರಡೂ ಗುಂಪುಗಳು ಇಂಥ ಸಣ್ಣಪುಟ್ಟ ವಿಚಾರಗಳಿಗೆ ಕಿತ್ತಾಡುವ ಬದಲು ಶ್ರೀ ವರದರಾಜ ಪೆರುಮಾಳ್‌ ಸ್ವಾಮಿಗೆ ಸೇವೆ ಸಲ್ಲಿಸಬಹುದಾಗಿದೆ” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಭಾರತ ಸಂವಿಧಾನದ 25(1)ನೇ ವಿಧಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಲಾಗಿದ್ದು, ಧರ್ಮದ ಜೊತೆ ಸೇರಿಕೊಂಡಿರುವ ಪಠನೆ ಮತ್ತು ಸಮಾರಂಭಕ್ಕೂ ಅದು ಅನ್ವಯಿಸುತ್ತದೆ. ಪ್ರತಿಯೊಬ್ಬ ಭಕ್ತನೂ ತನ್ನ ಇಚ್ಛೆಯಂತೆ ಬೇರೆಯ ಭಕ್ತರಿಗೆ/ಆರಾಧಿಸುವವರಿಗೆ ಮತ್ತು ದೇವಸ್ಥಾನದ ಚಟುವಟಿಕೆಗಳಿಗೆ ಭಂಗ ಉಂಟು ಮಾಡದೇ ಶ್ರೀ ವರದರಾಜ ಪೆರುಮಾಳ್‌ ದೇವಾಲಯಕ್ಕೆ ಪ್ರವೇಶಿಸುವ ಹಕ್ಕು ಹೊಂದಿದ್ದಾರೆ” ಎಂದು ನ್ಯಾಯಾಲಯ ಒತ್ತಿ ಹೇಳಿದೆ.

Kannada Bar & Bench
kannada.barandbench.com