ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟೋಲ್‌: ಆಕ್ಷೇಪಣೆ ಸಲ್ಲಿಸಲು ಎನ್‌ಎಚ್‌ಎಐಗೆ ಹೈಕೋರ್ಟ್‌ ನಿರ್ದೇಶನ

ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ಮತ್ತು ಸಂಗ್ರಹ ನಿರ್ಧಾರ) ರಸ್ತೆ 2008ರ ನಿಯಮ 3ರ ಅಡಿ ಅವಕಾಶವಿದೆ. ಇದಕ್ಕೂ ಮುನ್ನ, ಅಧಿಸೂಚನೆ ಪ್ರಕಟ ಸೇರಿದಂತೆ ಹಲವು ಪೂರ್ವಾಗತ್ಯಗಳನ್ನು ಪೂರೈಸಬೇಕು ಎಂದಿರುವ ನ್ಯಾಯಾಲಯ.
Bengaluru-Mysore Express Highway Toll gate
Bengaluru-Mysore Express Highway Toll gatewikipedia

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಂದ ಟೋಲ್‌ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಬೆಂಗಳೂರು-ಕನಕಪುರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಎಸ್‌ ಪಿ ಸಂದೀಪ್‌ ರಾಜು ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಈ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಸಂಬಂಧ ಮಂಗಳವಾರ (ಮಾರ್ಚ್‌ 14) ನಡೆದಿದ್ದ ಧರಣಿ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಬೇಕಿದೆ ಎಂದು ನ್ಯಾಯಾಲಯವು ಹೇಳಿತು.

ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ಮತ್ತು ಸಂಗ್ರಹ ನಿರ್ಧಾರ) ನಿಯಮ 2008ರ ನಿಯಮ 3ರ ಅಡಿ ಅವಕಾಶವಿದೆ. ಇದಕ್ಕೂ ಮುನ್ನ, ಅಧಿಸೂಚನೆ ಪ್ರಕಟ ಸೇರಿದಂತೆ ಹಲವು ಪೂರ್ವಾಗತ್ಯಗಳನ್ನು ಪೂರೈಸಬೇಕು. ಸವಾರರಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು, ಈ ವಿಷಯವನ್ನು ಪರಿಗಣಿಸಬೇಕಿದೆ. ಈ ಸಂಬಂಧ ಎನ್‌ಎಚ್‌ಎಐ, ಅದರ ಯೋಜನಾ ನಿರ್ದೇಶಕ, ಯೋಜನೆ ಜಾರಿ ಘಟಕ ಮತ್ತು ಎನ್‌ಎಚ್‌ಎಐನ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳು ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಾಲಯವು ಆದೇಶ ಮಾಡಿದೆ.

ಮಾರ್ಚ್‌ 15ರಂದು ಮಾಧ್ಯಮಗಳಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಾಮನಗರ ಸಮೀಪ ಹೆಚ್ಚುವರಿ ಟೋಲ್‌ ಸಂಗ್ರಹಕ್ಕೆ ಆಕ್ಷೇಪಿಸಿ ಧರಣಿ ನಡೆಸಿರುವ ಕುರಿತು ಸುದ್ದಿ ಪ್ರಕಟವಾಗಿದೆ. ಏಜೆನ್ಸಿ ಟೋಲ್‌ ಆಂಗ್ರಹಿಸಿಲು ಆರಂಭಿಸಿದ್ದು, 135-205 ರೂಪಾಯಿಗಳನ್ನು ಕಾರ್‌ ಮತ್ತು ವ್ಯಾನ್‌ಗಳಿಗೆ, ಲಘು ವಾಣಿಜ್ಯ ವಾಹನಗಳಾದ ಮಿನಿ ಬಸ್‌ಗೆ 220-330 ರೂಪಾಯಿ ವಿಧಿಸಲಾಗುತ್ತಿದೆ. ಟ್ರಕ್‌, ಬಸ್‌ಗಳಿಗೆ 460-690 ರೂಪಾಯಿ, ಮೂರು ಆಕ್ಸೆಲ್‌ ವಾಣಿಜ್ಯ ವಾಹನಗಳಿಗೆ 500-750 ರೂಪಾಯಿ, ಬೃಹತ್‌ ನಿರ್ಮಾಣ ಸಂಬಂಧಿತ ವಾಹನಗಳಿಗೆ 720-1,080 ರೂಪಾಯಿ, ಅತಿ ಬೃಹತ್‌ ವಾಹನಗಳಿಗೆ 880-1,315 ರೂಪಾಯಿ ವಿಧಿಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಸ್ತೆ ನಿರ್ಮಾಣ ಕೆಲಸ ಮುಗಿಯದಿದ್ದರೂ ಟೋಲ್‌ ಸಂಗ್ರಹಣೆಯು ಅಸಮರ್ಥನೀಯವಾಗಿದ್ದು, ದೊಡ್ಡ ತಾಂತ್ರಿಕ ಸಮಸ್ಯೆಗಳಿಂದಾಗಿ ವಾಹನಗಳಿಗೆ ಡ್ಯಾಮೇಜ್‌ ಆಗುತ್ತಿದೆ ಎಂದು ಮಾಧ್ಯಮ ವರದಿಯಲ್ಲಿ ವಿವರಿಸಲಾಗಿದೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಆರಂಭವಾಗಿ ಎಂದು ಹೇಳಲಾಗಿದೆ. ಫ್ಯಾಸ್ಟ್‌ಟ್ಯಾಗ್‌ ಸರಿಯಾದ ರೀತಿಯಲ್ಲಿ ಕೆಲಸ ಮಾಡದೇ ಇರುವುದರಿಂದ ಸಿಬ್ಬಂದಿಯು ಮ್ಯಾನುವಲ್‌ ಯಂತ್ರವನ್ನು ಬಳಸುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಹೆಚ್ಚಿತ್ತು. ಫಾಸ್ಟ್‌ ಟ್ಯಾಗ್‌ ಕೆಲಸ ನಿರ್ವಹಿಸಲು ವಿಫಲವಾದ್ದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಬದಲಿಗೆ ಸರ್ವೀಸ್‌ ರಸ್ತೆ ಬಳಸುವಂತೆ ಸೂಚಿಸಿದ್ದರಿಂದ ಸವಾರರಿಗೆ ಹೆಚ್ಚು ಸಮಯ ತಗುಲುವಂತಾಯಿತು ಎಂದು ಮತ್ತೊಂದು ಮಾಧ್ಯಮದಲ್ಲಿ ವರದಿಯಾಗಿದೆ ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ವಕೀಲ ಶಿವಪ್ರಸಾದ್‌ ಶಾಂತನಗೌಡರ್‌ ಕೋರ್ಟ್‌ ಕಮಿಷನರ್‌

ಬೆಂಗಳೂರು-ಕನಕಪುರ ರಸ್ತೆ ಅಗಲೀಕರಣ ಕೆಲಸದ ನಿರ್ಮಾಣ, ನಿಗಾ ಮತ್ತು ಮೇಲ್ವಿಚಾರಣೆ ನಡೆಸಲು ಹೈಕೋರ್ಟ್‌ ವಕೀಲ ಶಿವಪ್ರಸಾದ್‌ ಶಾಂತನಗೌಡರ್‌ ಅವರನ್ನು ನ್ಯಾಯಾಲಯದ ಆಯುಕ್ತರನ್ನಾಗಿ (ಕೋರ್ಟ್‌ ಕಮಿಷನರ್‌) ನೇಮಕ ಮಾಡಿದೆ.

ನಿರ್ಮಾಣ ಒಪ್ಪಂದಕ್ಕೆ ಸಂಬಂಧಿಸಿದ ಕೆಲಸದ ಸೂಕ್ತ ನಿಗಾ ಮತ್ತು ಮೇಲ್ವಿಚಾರಣೆಯನ್ನು ಸ್ವತಂತ್ರ ಎಂಜಿನಿಯರ್‌ ನಡೆಸಬೇಕು. ನ್ಯಾಯಾಲಯ ನೇಮಿಸಿದ ಆಯುಕ್ತರು ಅಗತ್ಯವಾದ ಸಹಾಯ ಪಡೆದುಕೊಳ್ಳಬಹುದು. ನ್ಯಾಯಾಲಯ ನೇಮಿಸಿದ ಆಯುಕ್ತರಿಗೆ ನೆರವಾಗಲು ಸಹಾಯಕ ಎಂಜಿನಿಯರ್‌ ಅವರನ್ನು ತಾಂತ್ರಿಕ ವಿಚಾರದಲ್ಲಿ ನೆರವಾಗಲು ನೇಮಿಸುವಂತೆ ಲೋಕೋಪಯೋಗಿ ಇಲಾಖೆಯ ರಾಮನಗರ ವಿಭಾಗದ ಕಾರ್ಯಾಕಾರಿ ಎಂಜಿನಿಯರ್‌ಗೆ ಪೀಠವು ನಿರ್ದೇಶಿಸಿದ್ದು, ಮೂರು ವಾರಗಳಲ್ಲಿ ವರದಿ ಸಲ್ಲಿಸಲು ಕೋರ್ಟ್‌ ಕಮಿಷನರ್‌ ಒಪ್ಪಿದ್ದಾರೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

Related Stories

No stories found.
Kannada Bar & Bench
kannada.barandbench.com