[ಸಾರಿಗೆ ನೌಕರರ ಮುಷ್ಕರ] ಕಾರ್ಮಿಕ ಆಯುಕ್ತರೊಂದಿಗೆ ಜುಲೈ 15ಕ್ಕೆ ಸಂಧಾನ ಮಾತುಕತೆ: ಹೈಕೋರ್ಟ್‌ಗೆ ವಿವರಣೆ

ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಅದರಲ್ಲಿ ನೌಕರರ ಬೇಡಿಕೆಗಳ ಪರಿಹಾರದ ಬಗ್ಗೆ ಸಮಗ್ರ ಮತ್ತು ಸೌದಾರ್ಹಯುತ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದ ಸರ್ಕಾರ.
[ಸಾರಿಗೆ ನೌಕರರ ಮುಷ್ಕರ] ಕಾರ್ಮಿಕ ಆಯುಕ್ತರೊಂದಿಗೆ ಜುಲೈ 15ಕ್ಕೆ ಸಂಧಾನ ಮಾತುಕತೆ: ಹೈಕೋರ್ಟ್‌ಗೆ ವಿವರಣೆ
Published on

ಸಾರಿಗೆ ನೌಕರರ ಮುಷ್ಕರ ಪರಿಹರಿಸುವ ಸಂಬಂಧ ಜುಲೈ 15ರಂದು ಕಾರ್ಮಿಕ ಆಯುಕ್ತರೊಂದಿಗೆ ಸಂಧಾನ ಮಾತುಕತೆ ನಿಗದಿಯಾಗಿದೆ ಎಂದು ಸಾರಿಗೆ ನಿಗಮಗಳ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ತಿಳಿಸಿದರು.

ಮುಷ್ಕರವನ್ನು ಪ್ರಶ್ನಿಸಿ ಮನೆ ಕೆಲಸ ಮಾಡುತ್ತಿರುವ ಸುದ್ದುಗುಂಟೆ ಪಾಳ್ಯದ ಸಿ ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್‌ ವಿ ಶ್ರೀಧರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಾರಿಗೆ ನೌಕರರ ಪರ ಕಾರ್ಮಿಕ ಸಂಘಟನೆಗಳ ವಕೀಲರು, ನ್ಯಾಯಾಲಯ ನಿರ್ದೇಶನ ನೀಡಿದ್ದರೂ ಸರ್ಕಾರ ಸಾರಿಗೆ ಇಲಾಖೆ ನೌಕರರ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ, ಸಾರಿಗೆ ನೌಕರರ ಹಿತಾಸಕ್ತಿಯನ್ನು ಹೈಕೋರ್ಟ್‌ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸಾರಿಗೆ ನಿಗಮಗಳ ಪರ ವಕೀಲರು, ಇದೇ 15ರಂದು ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಅದರಲ್ಲಿ ನೌಕರರ ಬೇಡಿಕೆಗಳ ಪರಿಹಾರದ ಬಗ್ಗೆ ಸಮಗ್ರ ಮತ್ತು ಸೌದಾರ್ಹಯುತ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನು ದಾಖಲಿಸಿಕೊಂಡ ಪೀಠವು ಸಂಧಾನ ಮಾತುಕತೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಆಗಸ್ಟ್‌ 5ಕ್ಕೆ ಮುಂದೂಡಿತು. ಅಂತೆಯೇ, ಮುಷ್ಕರ ನಡೆಸದಂತೆ ಈ ಹಿಂದೆ ನೀಡಿದ್ದ ನಿರ್ಬಂಧದ ಆದೇಶವನ್ನು ಮುಂದುವರಿಸಿತು.

Kannada Bar & Bench
kannada.barandbench.com