ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಅಖ್ತರ್ ಮತ್ತು ಮೊಹಮ್ಮದ್ ಗೌಸ್ ಉದಯಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 14 ದಿನ ನ್ಯಾಯಾಂಗಕ್ಕೆ ಒಪ್ಪಿಸಿದೆ ಎಂದು ವರದಿಯಾಗಿದೆ.
ಬಿಗಿ ಭದ್ರತೆಯ ನಡುವೆ ಗುರುವಾರ ರಾತ್ರಿ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರನ್ನು ಜುಲೈ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ರಾಜಸ್ಥಾನದ ಉದಯಪುರದ ಧಾನ್ ಮಂಡಿ ಜಿಲ್ಲೆಯಲ್ಲಿ ಜೂನ್ 29ರಂದು ರಾಜ್ಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಆದೇಶಿಸಿದ ಹಿನ್ನೆಲೆಯಲ್ಲಿ ಮರು ಪ್ರಕರಣ ದಾಖಲಿಸಲಾಗಿದೆ. “ಯಾವುದೇ ಸಂಘಟನೆ ಅಥವಾ ಅಂತಾರಾಷ್ಟ್ರೀಯ ಸಂಪರ್ಕ ಇದ್ದರೂ ಅದನ್ನೂ ಸಂಪೂರ್ಣವಾಗಿ ತನಿಖೆ ನಡೆಸಲಾಗುವುದು” ಎಂದು ಗೃಹ ಸಚಿವಾಲಯವು ಟ್ವೀಟ್ ಮಾಡಿತ್ತು.
ಐಪಿಸಿ ಸೆಕ್ಷನ್ 34, 452 (ಮನೆ-ಅತಿಕ್ರಮಣ), 302 (ಕೊಲೆ), 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ), 153 (ಬಿ) (ರಾಷ್ಟ್ರೀಯ ಏಕತೆಗೆ ಧಕ್ಕೆ), 295 (ಎ) (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ವಿವಿಧ ಸೆಕ್ಷನ್ಗಳ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.