ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಎಂಟು ದಿನ ಸತ್ಯನಾರಾಯಣ ವರ್ಮಾ ಜಾರಿ ನಿರ್ದೇಶನಾಲಯದ ಕಸ್ಟಡಿಗೆ

ಆರೋಪಿಯು 18 ನಕಲಿ ಬ್ಯಾಂಕ್ ಖಾತೆ ತೆರೆದು ಹಣ ಡ್ರಾ ಮಾಡಿಕೊಂಡಿದ್ದಾರೆ. ಈ ಪ್ರಕರಣದ ಹಿಂದೆ ಬಹುದೊಡ್ಡ ಪಿತೂರಿ ಇದ್ದು ಅದನ್ನು ಪತ್ತೆ ಮಾಡುವ ಸಲುವಾಗಿ ಇಡಿ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ಇ ಡಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ED and Bengaluru city civil court
ED and Bengaluru city civil court
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದ ಎರಡನೇ ಆರೋಪಿ ಹೈದರಾಬಾದ್‌ನ ಸತ್ಯನಾರಾಯಣ ವರ್ಮ ಅವರನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಎಂಟು ದಿನ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿ ಆದೇಶಿದೆ.

ಆರೋಪಿ ಸತ್ಯನಾರಾಯಣ ವರ್ಮ‌ ಅವರನ್ನು‌ ಮಂಗಳವಾರ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಮುಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಹಾಜರುಪಡಿಸಿದರು.

ವಿಚಾರಣೆ ವೇಳೆ ಆರೋಪಿ ಸತ್ಯನಾರಾಯಣ ವರ್ಮ ಪರ ಹಾಜರಿದ್ದ ವಕೀಲ ಸತ್ಯನಾರಾಯಣ ಚಾಲ್ಕೆ ಅವರು “ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿ ಅರ್ಜಿದಾರರ ವಿಚಾರಣೆ ನಡೆಸಲಾಗಿದೆ. ಈಗ ಇ ಡಿ ತನ್ನ ಕಸ್ಟಡಿಯಲ್ಲಿ ಇರಿಸಿಕೊಂಡು ವಿಚಾರಣೆ ನಡೆಸುವ ಅಗತ್ಯವಿಲ್ಲ. ಹಾಗಾಗಿ, ಇ ಡಿ ಕಸ್ಟಡಿಗೆ ನೀಡಬಾರದು” ಎಂದು ಮನವಿ ಮಾಡಿದರು.

ಆದರೆ, ಇದನ್ನು ಅಲ್ಲಗಳೆದ ಇ ಡಿ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ಆರೋಪಿಯು 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಡ್ರಾ ಮಾಡಿಕೊಂಡಿದ್ದಾರೆ. ಈ ಪ್ರಕರಣದ ಹಿಂದೆ ಬಹುದೊಡ್ಡ ಪಿತೂರಿ ಇದ್ದು ಅದನ್ನು ಪತ್ತೆ ಮಾಡುವ ಸಲುವಾಗಿ ಇ ಡಿ ಕಸ್ಟಡಿ ವಿಚಾರಣೆಯ ಅಗತ್ಯವಿದೆ” ಎಂದರು. ಅಂತೆಯೇ, ಸತ್ಯನಾರಾಯಣ ವರ್ಮ ಅವರನ್ನು ಇ ಡಿ ಕಸ್ಡಡಿಗೆ ನೀಡುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ನ್ಯಾಯಾಧೀಶರ ಗಮನಕ್ಕೆ ತಂದರು.

Also Read
ವಾಲ್ಮೀಕಿ ನಿಗಮ ಹಗರಣ: ಇ ಡಿ ವಶಕ್ಕೆ ಆರೋಪಿ ಸತ್ಯನಾರಾಯಣ ವರ್ಮಾ ನೀಡಲು ಹೈಕೋರ್ಟ್‌ ಆದೇಶ

ಪ್ರಾಸಿಕ್ಯೂಷನ್ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಸತ್ಯನಾರಾಯಣ ವರ್ಮ‌ ಅವರನ್ನು ಎಂಟು ದಿನಗಳ ಇ ಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು.

ಕರ್ನಾಟಕ ಹೈಕೋರ್ಟ್‌ನಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಸತ್ಯನಾರಾಯಣ ವರ್ಮ ಅವರನ್ನು ಆಗಸ್ಟ್ 13ರಂದು ಜಾರಿ ನಿರ್ದೇಶನಾಲಯದ (ಇ ಡಿ) ಕಸ್ಟಡಿಗೆ ನೀಡುವಂತೆ ಇತ್ತೀಚೆಗಷ್ಟೇ ಎಸ್‌ಐಟಿಗೆ ಆದೇಶಿಸಿತ್ತು. 

Kannada Bar & Bench
kannada.barandbench.com