ಸಿಂಹಿ
ಸಿಂಹಿಪ್ರಾತಿನಿಧಿಕ ಚಿತ್ರ

ಸಿಂಹಿಣಿಗೆ ಸೀತೆಯ ಹೆಸರು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂದು ಕಲ್ಕತ್ತಾ ಹೈಕೋರ್ಟ್‌ ಮೆಟ್ಟಿಲೇರಿದ ವಿಎಚ್‌ಪಿ

ಸಿಂಹಿಣಿಗೆ ದೇವತೆಯ ಹೆಸರಿಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದ್ದು ಹೈಕೋರ್ಟ್‌ ಫೆಬ್ರವರಿ 20 ರಂದು ವಿಚಾರಣೆ ನಡೆಸಲಿದೆ.

ಸಿಲಿಗುರಿಯ ಉತ್ತರ ಬಂಗಾಳ ವನ್ಯಜೀವಿ ಉದ್ಯಾನದಲ್ಲಿರುವ (ಬಂಗಾಳ ಸಫಾರಿ ಪಾರ್ಕ್) ಸಿಂಹಿಣಿಗೆ ʼಸೀತೆʼ ಎಂದು ಹೆಸರಿಡುವುದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಲ್ಕತ್ತಾ ಹೈಕೋರ್ಟ್‌ನ ಜಲಪೈಗುರಿ ಸರ್ಕ್ಯೂಟ್ ಪೀಠದ ಕದ ತಟ್ಟಿದೆ.

ಸಿಂಹಿಣಿಗೆ ದೇವತೆಯ ಹೆಸರಿಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದ್ದು ಹೈಕೋರ್ಟ್‌ ಫೆಬ್ರವರಿ 20ರಂದು ವಿಚಾರಣೆ ನಡೆಸಲಿದೆ.

"ವಿಶ್ವದ ಎಲ್ಲಾ ಹಿಂದೂಗಳಿಗೆ ಪವಿತ್ರ ದೇವತೆಯಾಗಿರುವ ʼಸೀತೆʼಯ ಹೆಸರನ್ನು ಬೆಕ್ಕಿನ ಕುಟುಂಬದ ಒಂದು ಜಾತಿಗೆ ಇಟ್ಟಿರುವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರ ನೋವಿನಿಂದ ಕಂಡಿದೆ. ಇಂತಹ ಕೃತ್ಯ ಧರ್ಮನಿಂದನೆಗೆ ಸಮನಾಗಿದ್ದು ಎಲ್ಲಾ ಹಿಂದೂಗಳ ಧಾರ್ಮಿಕ ನಂಬಿಕೆಯ ಮೇಲಿನ ನೇರ ದಾಳಿಯಾಗಿದೆ. ಅಲಿಪೋರ್‌ನಲ್ಲಿರುವ ಏಷ್ಯಾಟಿಕ್ ಸಿಂಹಕ್ಕೆ "ಶ್ರುತಿ" ಎಂದು ಹೆಸರಿಸಲಾಗಿದೆ ಎಂಬುದಾಗಿ ವಕೀಲ ಶುಭಂಕರ್ ದತ್ತಾ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಜಲಪೈಗುರಿಯ ಕಲ್ಕತ್ತಾ ಹೈಕೋರ್ಟ್‌ ಪೀಠದ ಮುಂದೆ ಅರ್ಜಿದಾರರು ಮತ್ತು ವಕೀಲರು
ಜಲಪೈಗುರಿಯ ಕಲ್ಕತ್ತಾ ಹೈಕೋರ್ಟ್‌ ಪೀಠದ ಮುಂದೆ ಅರ್ಜಿದಾರರು ಮತ್ತು ವಕೀಲರು

ಸಿಂಹಿಣಿಗೆ ʼಸೀತಾʼ ಎಂದು ಕರೆಯುವ ಬದಲು ಬೇರೆ ಸಾಮಾನ್ಯ ಸೂಕ್ತ ಹೆಸರಿಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಹಿಂದೂ ಧರ್ಮಕ್ಕೆ ಸಂಬಂಧವಿಲ್ಲದ ಹೆಸರನ್ನು ಪ್ರಾಣಿಗೆ ತಕ್ಷಣ ಇಡಲು ಬಂಗಾಳ ಸಫಾರಿ ಉದ್ಯಾನವನಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಸಂಸ್ಥೆ ಕೇಳಿಕೊಂಡಿದೆ.

ಈ ಸಿಂಹಿಣಿಯೊಂದಿಗೆ ಸಿಂಹವನ್ನು ಸಹ ಉದ್ಯಾನವನಕ್ಕೆ ತರಲಾಗಿದ್ದು ಅದಕ್ಕೆ ಅಕ್ಬರ್‌ ಎಂದು ಹೆಸರಿಡಲಾಗಿದೆ ಎಂಬುದು ಪತ್ರಿಕಾ ವರದಿಗಳಿಂದ ತಿಳಿದುಬಂದಿದ್ದು ಇದು ಅಶ್ಲೀಲ ರೀತಿಯಲ್ಲಿ ಇದ್ದು ಆಕ್ಷೇಪಾರ್ಹವಾಗಿದೆ. ಇದು ದೇಶದ ಎಲ್ಲಾ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತದೆ ಎಂದು ಅರ್ಜಿ ವಿವರಿಸಿದೆ.

Kannada Bar & Bench
kannada.barandbench.com