
ವಿರೋಧ ಪಕ್ಷಗಳ ಆಕ್ಷೇಪ ಭಾರೀ ಗದ್ದಲದ ನಡುವೆ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಬುಧವಾರ ಮಂಡನೆಯಾಗಿದೆ.
ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಕಿರೆನ್ ರಿಜಿಜು ಲೋಕಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಮಸೂದೆ ಮಂಡಿಸಿದರು.
ವಕ್ಫ್ ಆಸ್ತಿಗಳ ನಿಯಂತ್ರಣಕ್ಕಾಗಿ 1995ರ ವಕ್ಫ್ ಕಾಯಿದೆಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮೊದಲ ಬಾರಿಗೆ ಆಗಸ್ಟ್ 2024ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು.
ವಕ್ಫ್ ಎನ್ನುವುದು ಇಸ್ಲಾಮ್ ಧಾರ್ಮಿಕ ಕಾನೂನಿನ ಅಡಿ ಕೇವಲ ದಾನ, ದತ್ತಿಗೆ ಮಾತ್ರವೇ ಮೀಸಲಾದ ಅಸ್ತಿಗಳಾಗಿವೆ. ಈ ಆಸ್ತಿಗಳನ್ನು ಮಸೀದಿ, ಸ್ಮಶಾನದಂತಹ ಸಾಮುದಾಯಿಕ ನಿರ್ವಹಣೆಗೆ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯಕೀಯ ಚಟುವಟಿಕೆಗಳಿಗೆ, ಬಡವರು ಮತ್ತು ವಿಕಲಚೇತನರ ಕಲ್ಯಾಣಕ್ಕೆ ಬಳಕೆ ಮಾಡಬಹುದಾಗಿರುತ್ತದೆ. ಇದರ ಹೊರತಾಗಿ ಆಸ್ತಿಗಳನ್ನು ಮತ್ತಾವುದೇ ಉದ್ದೇಶಕ್ಕೆ ಬಳಕೆ ಮಾಡುವುದು ಮಾರಾಟ ಮಾಡುವುದನ್ನು ಇಸ್ಲಾಮ್ ಧಾರ್ಮಿಕ ಕಾನೂನು ನಿಷೇಧಿಸುತ್ತದೆ.
ವಕ್ಫ್ ತಿದ್ದುಪಡಿ ಮಸೂದೆಯ ಪ್ರಮುಖ ಅಂಶಗಳು
ವಕ್ಫ್ ಮಂಡಳಿಗಳು ಮತ್ತು ಆಸ್ತಿಗಳ ನಿರ್ವಹಣೆ ಮತ್ತು ದಕ್ಷತೆಯನ್ನು ಸುಧಾರಿಸುವ ವಿಶಾಲ ಉದ್ದೇಶದಿಂದ ಕಾಯಿದೆಯನ್ನು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ, 1995 ಎಂದು ಮಸೂದೆ ಮರುನಾಮಕರಣ ಮಾಡುತ್ತದೆ.
ಘೋಷಣೆ, ದೀರ್ಘಾವಧಿಯ ಬಳಕೆ ಅಥವಾ ದತ್ತಿ ಮೂಲಕ ವಕ್ಫ್ ರಚನೆಗೆ ಕಾಯಿದೆ ಅವಕಾಶ ನೀಡಿದ್ದರೂ, ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಆಚರಿಸುವ ವ್ಯಕ್ತಿ ಮಾತ್ರವೇ ವಕ್ಫ್ ಘೋಷಿಸಬಹುದು ಎಂದು ಮಸೂದೆ ಹೇಳುತ್ತದೆ.
ವಕ್ಫ್ ಎಂದು ಘೋಷಿಸುವ ಆಸ್ತಿ ಆ ವ್ಯಕ್ತಿಯದ್ದಾಗಿರಬೇಕು ಎಂದು ಅದು ಸ್ಪಷ್ಟಪಡಿಸುತ್ತದೆ. ಧಾರ್ಮಿಕ ಉದ್ದೇಶಗಳಿಗಾಗಿ ದೀರ್ಘಕಾಲದ ಬಳಕೆಯ ಆಧಾರದಲ್ಲಿ ಯಾವುದೇ ಆಸ್ತಿಗಳನ್ನು ವಕ್ಫ್ ಎಂದು ಪರಿಗಣಿಸುವುದನ್ನು ಇದು ತೆಗೆದುಹಾಕುತ್ತದೆ. ಮಹಿಳಾ ಉತ್ತರಾಧಿಕಾರಿಗಳು ಸೇರಿದಂತೆ ದಾನಿಗಳ ಉತ್ತರಾಧಿಕಾರಿಗೆ ವಕ್ಫ್-ಅಲಾಲ್-ಔಲಾದ್ ಆನುವಂಶಿಕ ಹಕ್ಕುಗಳನ್ನು ನಿರಾಕರಿಸಬಾರದು ಎಂದು ಅದು ವಿವರಿಸುತ್ತದೆ.
ಆಸ್ತಿಯು ವಕ್ಫ್ ಆಗಿದೆಯೇ ಎಂದು ಪರಿಶೀಲಿಸಲು ಮತ್ತು ನಿರ್ಧರಿಸಲು ಕಾಯಿದೆಯು ವಕ್ಫ್ ಮಂಡಳಿಗೆ ನೀಡಿರುವ ಅಧಿಕಾರವನ್ನು ಮಸೂದೆ ತೆಗೆದುಹಾಕುತ್ತದೆ.
ಎಲ್ಲಾ ಮಂಡಳಿ ಸದಸ್ಯರು ಮುಸ್ಲಿಮರಾಗಿರಬೇಕು ಎಂದು ಈ ಹಿಂದಿನ ಕಾಯಿದೆ ಹೇಳಿದ್ದರೆ, ಪ್ರಸ್ತುತ ಮೂಸದೆಯು ಇಬ್ಬರು ಸದಸ್ಯರು ಮುಸ್ಲಿಮೇತರರಾಗಿರಬೇಕು ಎಂದು ಹೇಳುತ್ತದೆ. ಸಂಸತ್ತಿನ ಸದಸ್ಯರು, ಮಾಜಿ ನ್ಯಾಯಾಧೀಶರು ಮತ್ತು ಕಾಯಿದೆಯ ಪ್ರಕಾರ ಮಂಡಳಿಗೆ ನೇಮಕಗೊಂಡ ಗಣ್ಯ ವ್ಯಕ್ತಿಗಳು ಮುಸ್ಲಿಮರಾಗಿರಬೇಕಾಗಿಲ್ಲ. ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು, ಇಸ್ಲಾಮಿಕ್ ಕಾನೂನಿನಲ್ಲಿ ವಿದ್ವಾಂಸರು ಮತ್ತು ವಕ್ಫ್ ಮಂಡಳಿಗಳ ಅಧ್ಯಕ್ಷರು ಮುಸ್ಲಿಮರಾಗಿರಬೇಕು. ಮುಸ್ಲಿಂ ಸದಸ್ಯರಲ್ಲಿ ಇಬ್ಬರು ಮಹಿಳೆಯರಿರಬೇಕು ಎಂಬ ಕಾಯಿದೆಯ ಅಂಶ ಮಸೂದೆಯಲ್ಲೂ ಮುಂದುವರೆದಿದೆ.
ನೋಂದಣಿ, ವಕ್ಫ್ ಖಾತೆಗಳ ಪ್ರಕಟಣೆ ಮತ್ತು ವಕ್ಫ್ ಮಂಡಳಿಗಳ ಪ್ರಕ್ರಿಯೆಗಳ ಪ್ರಕಟಣೆಗೆ ಸಂಬಂಧಿಸಿದಂತೆ ನಿಯಮ ರಚಿಸಲು ಕೇಂದ್ರ ಸರ್ಕಾರಕ್ಕೆ ಮಸೂದೆ ಅಧಿಕಾರ ನೀಡುತ್ತದೆ. ಕಾಯಿದೆಯಡಿಯಲ್ಲಿ, ರಾಜ್ಯ ಸರ್ಕಾರಗಳು ಯಾವುದೇ ಹಂತದಲ್ಲಿ ವಕ್ಫ್ ಖಾತೆಗಳ ಲೆಕ್ಕ ಪರಿಶೋಧನೆ ನಡೆಸಬಹುದು ಎಂದು ಹೇಳುತ್ತದೆ. ಮಸೂದೆಯು ಕೇಂದ್ರ ಸರ್ಕಾರಕ್ಕೆ ಸಿಎಜಿ ಅಥವಾ ಗೊತ್ತುಪಡಿಸಿದ ಅಧಿಕಾರಿಯಿಂದ ಲೆಕ್ಕಪರಿಶೋಧನೆ ಮಾಡಲು ಅಧಿಕಾರ ನೀಡುತ್ತದೆ.
ಶಿಯಾ ವಕ್ಫ್ ರಾಜ್ಯದಲ್ಲಿನ ಎಲ್ಲಾ ವಕ್ಫ್ ಆಸ್ತಿಗಳು ಅಥವಾ ವಕ್ಫ್ ಆದಾಯದ 15% ಕ್ಕಿಂತ ಹೆಚ್ಚು ಇದ್ದರೆ ಸುನ್ನಿ ಮತ್ತು ಶಿಯಾ ಪಂಗಡಗಳಿಗೆ ಪ್ರತ್ಯೇಕ ವಕ್ಫ್ ಮಂಡಳಿಗಳನ್ನು ಸ್ಥಾಪಿಸಲು ಕಾಯಿದೆ ಅವಕಾಶ ನೀಡಿತ್ತು. ಇದೀಗ ತಿದ್ದುಪಡಿ ಮಸೂದೆ ಅಘಾಖಾನಿ ಮತ್ತು ಬೊಹ್ರಾ ಪಂಗಡಗಳಿಗೆ ಕೂಡ ಪ್ರತ್ಯೇಕ ವಕ್ಫ್ ಮಂಡಳಿ ರಚಿಸಿಕೊಳ್ಳಲು ಅನುಮತಿ ನೀಡಿದೆ.
ಕಾಯಿದೆ ಪ್ರಕಾರ ವಕ್ಫ್ ನ್ಯಾಯಮಂಡಳಿಯ ನಿರ್ಧಾರಗಳೇ ಅಂತಿಮವಾಗಿತ್ತು. ನ್ಯಾಯಾಲಯದಲ್ಲಿ ಅದರ ನಿರ್ಧಾರ ಪ್ರಶ್ನಿಸುವಂತಿರಲಿಲ್ಲ. ಮಂಡನೆಯಾಗಿರುವ ಮಸೂದೆಯ ಪ್ರಕಾರ ವಕ್ಫ್ ನ್ಯಾಯಮಂಡಳಿಗಳ ಆದೇಶಗಳನ್ನು 90 ದಿನಗಳಲ್ಲಿ ಹೈಕೋರ್ಟ್ಗಳಲ್ಲಿ ಪ್ರಶ್ನಿಸಬಹುದಾಗಿದೆ.