ಚುನಾವಣಾ ಪ್ರಣಾಳಿಕೆಯ ಭರವಸೆ ಭ್ರಷ್ಟ ವ್ಯವಹಾರವಲ್ಲ: ಕರ್ನಾಟಕ ಕಾಂಗ್ರೆಸ್ ಮ್ಯಾನಿಫೆಸ್ಟೋ ಕುರಿತು ಸುಪ್ರೀಂ ಅಭಿಮತ

ಕರ್ನಾಟಕ ವಿಧಾನಸಭಾ ಚುನಾವಣೆಯ 2023ರ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ ಆಶ್ವಾಸನೆಗಳು ಸಾರ್ವಜನಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆರ್ಥಿಕ ಸಹಾಯ ಕಲ್ಪಿಸಿದ್ದು, ಇದು ಭ್ರಷ್ಟ ಚುನಾವಣಾ ವ್ಯವಹಾರ ಎಂದು ದೂರುದಾರರು ವಾದಿಸಿದ್ದರು.
ಚುನಾವಣಾ ಪ್ರಣಾಳಿಕೆಯ ಭರವಸೆ ಭ್ರಷ್ಟ ವ್ಯವಹಾರವಲ್ಲ: ಕರ್ನಾಟಕ ಕಾಂಗ್ರೆಸ್ ಮ್ಯಾನಿಫೆಸ್ಟೋ ಕುರಿತು ಸುಪ್ರೀಂ ಅಭಿಮತ

ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ತೋರಿದ ಬದ್ಧತೆ ಅಂತಿಮವಾಗಿ ಸಾರ್ವಜನಿಕರಿಗೆ ನೇರ ಅಥವಾ ಪರೋಕ್ಷ ಆರ್ಥಿಕ ಸಹಾಯಕ್ಕೆ ಕಾರಣವಾಗಬಹುದು, ಇದು ಜನ ಪ್ರತಿನಿಧಿ ಕಾಯಿದೆಯಡಿ ಭ್ರಷ್ಟ ವ್ಯವಹಾರವಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಹೇಳಿದೆ [ಶಶಾಂಕ ಜೆ ಶ್ರೀಧರ ಮತ್ತು ಬಿಜಡ್‌ ಜಮೀರ್‌ ಅಹಮದ್‌ ಖಾನ್‌ ನಡುವಣ ಪ್ರಕರಣ].  

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದ ಕಾಂಗ್ರೆಸ್ ಶಾಸಕ ಬಿ.ಝಡ್.ಜಮೀರ್ ಅಹಮದ್ ಖಾನ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ಈ ಹಿಂದೆ ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿತ್ತು. ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ 2023ರ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ ಆಶ್ವಾಸನೆಗಳು ಸಾರ್ವಜನಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಚವಾಗಿ ಆರ್ಥಿಕ ಸಹಾಯ ಕಲ್ಪಿಸಿದ್ದು, ಇದು ಅಭ್ಯರ್ಥಿಯ ಭ್ರಷ್ಟ ವ್ಯವಹಾರಕ್ಕೆ ಕಾರಣವಾಗುತ್ತದೆ ಎಂಬ ವಕೀಲರ ವಾದ ನಂಬಲರ್ಹವಲ್ಲ ಹಾಗೂ ಅದನ್ನು ಒಪ್ಪಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಖಾನ್ ಅವರ ಆಯ್ಕೆ ಪ್ರಶ್ನಿಸಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರರೊಬ್ಬರು ಹೈಕೋರ್ಟ್‌ಗೆ ಚುನಾವಣಾ ಅರ್ಜಿಯನ್ನು ಸಲ್ಲಿಸಿದ್ದರು.

2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳು ಸಾರ್ವಜನಿಕರಿಗೆ ನೇರ ಮತ್ತು ಪರೋಕ್ಷ ಆರ್ಥಿಕ ಸಹಾಯ ಕಲ್ಪಿಸಿದ್ದು, ಇದು ಭ್ರಷ್ಟ ಚುನಾವಣಾ ವ್ಯವಹಾರ ಎಂದು ದೂರುದಾರರು ವಾದಿಸಿದ್ದರು.

ವಾದ ಆಲಿಸಿದ್ದ ಹೈಕೋರ್ಟ್‌ ಇದು ತಪ್ಪು ನೀತಿಗೆ ಉದಾಹರಣೆಯಾಗಿರಬಹುದಾದರೂ ಜನ ಪ್ರತಿನಿಧಿ ಕಾಯಿದೆಯಡಿ ಭ್ರಷ್ಟ ವ್ಯವಹಾರ ಎನ್ನಲಾಗದು ಎಂದು ಅಭಿಪ್ರಾಯಪಟ್ಟಿತ್ತು.

"ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಐದು ಖಾತರಿಗಳನ್ನು ಸಮಾಜ ಕಲ್ಯಾಣ ನೀತಿಗಳೆಂದು ಪರಿಗಣಿಸಬೇಕು. ಅವು ಆರ್ಥಿಕವಾಗಿ ಕಾರ್ಯಸಾಧುವೇ ಅಥವಾ ಇಲ್ಲವೇ ಎಂಬುದು ಬೇರೆ ವಿಚಾರ. ಭರವಸೆಗಳ ಜಾರಿಯಿಂದ ರಾಜ್ಯದ ಬೊಕ್ಕಸ ಹೇಗೆ ಬರಿದಾಗುತ್ತದೆ ಅದು ಅಸಮರ್ಪಕ ಆಡಳಿತಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಉಳಿದ ಪಕ್ಷಕಾರರು ತೋರಿಸಬೇಕು. ಪ್ರಕರಣದ ನಿರ್ದಿಷ್ಟ ಸಂದರ್ಭ ಸನ್ನಿವೇಶಗಳ ಅಡಿಯಲ್ಲಿ ಅವುಗಳನ್ನು ತಪ್ಪು ನೀತಿ ಎಂದು ಕರೆಯಬಹುದು, ಆದರೆ ಭ್ರಷ್ಟ ನಡೆ ಎನ್ನಲಾಗದು ”ಎಂದು ಹೈಕೋರ್ಟ್ ಹೇಳಿತ್ತು. ಇದನ್ನು ಪ್ರಶ್ನಿಸಿ ದೂರುದಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆ ಭ್ರಷ್ಟ ವ್ಯವಹಾರಕ್ಕೆ ಸಮವೇ ಎಂಬ ಬಗ್ಗೆ ಕಾನೂನಿನ ಪ್ರಶ್ನೆಗೆ ಹೋಗಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದ್ದರಿಂದ, ಅದು ಮೇಲ್ಮನವಿಯನ್ನು ತಿರಸ್ಕರಿಸಿತು. ಆದರೆ ಕಾನೂನಿನ ಪ್ರಶ್ನೆಯನ್ನು ಮುಕ್ತವಾಗಿ ಇರಿಸಿತು.

ದೂರುದಾರರ ಪರವಾಗಿ ವಕೀಲರಾದ ಬಾಲಾಜಿ ಶ್ರೀನಿವಾಸನ್, ವಿಶ್ವಾದಿತ್ಯ ಶರ್ಮಾ ಹಾಗೂ ಲಕ್ಷ್ಮಿ ರಾವ್ ವಾದ ಮಂಡಿಸಿದ್ದರು.

Kannada Bar & Bench
kannada.barandbench.com