ಪತ್ನಿ ಕೊಲೆ: ಪತಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಏಳು ವರ್ಷಕ್ಕೆ ಇಳಿಸಿದ ಹೈಕೋರ್ಟ್‌

ಆರೋಪಿಯು ತನ್ನ ಹೆಣ್ಣು ಮಗುವಿನ ಹೆಸರಿಗೆ ₹ 3 ಲಕ್ಷ ಮೊತ್ತವನ್ನು ಠೇವಣಿಯಾಗಿ ಇರಿಸಬೇಕು ಎಂದು ನಿರ್ದೇಶಿಸಿರುವ ನ್ಯಾಯಾಲಯ.
Karnataka HC, Justice B Veerappa and K S Hemalekha
Karnataka HC, Justice B Veerappa and K S Hemalekha

ಪತ್ನಿ ಕೊಲೆ ಮಾಡಿದ್ದ ಅಪರಾಧಿಯೊಬ್ಬರ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಏಳು ವರ್ಷಗಳ ಕಠಿಣ ಶಿಕ್ಷೆಗೆ ಮಾರ್ಪಾಡು ಮಾಡಿ ಆದೇಶಿಸಿದೆ [ರಾಜೇಶ್‌ ವರ್ಸಸ್‌ ಕರ್ನಾಟಕ ರಾಜ್ಯ].

ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಬೊಮ್ಮನಹಳ್ಳಿಯ ರಾಜೇಶ್ ಬಿನ್‌ ವೆಂಕಟರಮಣಪ್ಪ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಆರೋಪಿಯು ತನ್ನ ಹೆಣ್ಣು ಮಗುವಿನ ಹೆಸರಿಗೆ ₹ 3 ಲಕ್ಷ ಮೊತ್ತವನ್ನು ಠೇವಣಿಯಾಗಿ ಇರಿಸಬೇಕು ಎಂದು ಆದೇಶದ ವೇಳೆ ನಿರ್ದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ್ದ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ಅವರು “ಆರೋಪಿಯು ತನ್ನ ಹೆಂಡತಿಯನ್ನು ಬೆಳಗಿನ ಜಾವ 4 ಗಂಟೆಯಲ್ಲಿ, ಗ್ರಾಮದ ಹೊರ ವಲಯದಲ್ಲಿನ ಹೊಲದಲ್ಲಿ ಪರ ಪುರುಷನ ಜೊತೆ ಇದ್ದುದ್ದನ್ನು ನೋಡಿದ್ದ. ಈ ವೇಳೆ ಉಂಟಾದ ಹಠಾತ್ ಪ್ರಚೋದನೆಯಿಂದ ಸ್ವಯಂ ನಿಯಂತ್ರಣ ಹಾಗೂ ಮಾನಸಿಕ ಸಮತೋಲನ ಕಳೆದುಕೊಂಡು ಹತ್ಯೆ ನಡೆಸಿದ್ದಾನೆ. ಅಂತೆಯೇ, ಆತ ಘಟನಾ ಸ್ಥಳಕ್ಕೆ ನಿರಾಯುಧನಾಗಿ ಹೋಗಿದ್ದು ಹೆಂಡತಿಯನ್ನು ಕೊಲೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಇದನ್ನು ಕೊಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ" ಎಂದು ಪ್ರತಿಪಾದಿಸಿದ್ದರು. ಈ ವಾದವನ್ನು ಪೀಠವು ಭಾಗಶಃ ಪುರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ದೊಡ್ಡಬೆಳವಂಗಲ ಹೋಬಳಿಯ ಬೊಮ್ಮನಹಳ್ಳಿ ನಿವಾಸಿ ರಾಜೇಶ್‌ ಅವರ ಮದುವೆಯು ಯುವತಿಯೊಬ್ಬರೊಂದಿಗೆ 2010ರಲ್ಲಿ ನೆರವೇರಿತ್ತು. ತನಗೆ ಈ ವಿವಾಹ ಇಷ್ಟವಿಲ್ಲ, ತಾನು ಪತಿಯ ಜೊತೆ ಜೀವನ ಮಾಡುವುದಿಲ್ಲ ಎಂದು ಪತ್ನಿಯು ಮದುವೆಯಾದ ಕೆಲ ಸಮಯದಲ್ಲಿಯೇ ಹಿರಿಯರ ಸಮ್ಮುಖದಲ್ಲಿ ನಡೆದಿದ್ದ ಪಂಚಾಯಿತಿಯಲ್ಲಿ ತಿಳಿಸಿದ್ದರು.

ಈ ಸಮಯದಲ್ಲಿ ಆಕೆಯ ರಾಜೇಶ್‌ ಎರಡನೇ ಮದುವೆಯಾಗಲು ತನಗೆ ಯಾವುದೇ ಅಭ್ಯಂತರವಿಲ್ಲ ಎಂದು ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದರು. ಅದರಂತೆ ರಾಜೇಶ್‌ ಎರಡನೆಯ ಮದುವೆಯಾಗಿದ್ದರು. ಈ ನಡುವೆ ಮೊದಲ ಪತ್ನಿಗೆ ಒಂದು ಹೆಣ್ಣು ಮಗು ಜನಿಸಿತ್ತು. ನಂತರ ಉಂಟಾದ ವ್ಯಾಜ್ಯದಲ್ಲಿ ರಾಜೇಶ್‌ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಸೆಕ್ಷನ್‌ 498ಎ ಅನುಸಾರ ಪ್ರಕರಣ ದಾಖಲಿಸಲಾಗಿತ್ತು. ಜೀವನ ನಿರ್ವಹಣೆಗಾಗಿ ಮೊದಲ ಪತ್ನಿಗೆ ಪ್ರತಿ ತಿಂಗಳೂ ₹ 2 ಸಾವಿರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.

ಈ ಮಧ್ಯೆ, ಗ್ರಾಮದ ಹಿರಿಯರು ಹಾಗೂ ಮೊದಲ ಪತ್ನಿಯ ಮನೆಯವರು ನಡೆಸಿದ್ದ ರಾಜಿಪಂಚಾಯಿತಿಯಲ್ಲಿ ಮೊದಲ ಪತ್ನಿಗೆ ಬೇರೆ ಮನೆ ಕಟ್ಟಿಸಿಕೊಡುವಂತೆ ಹೇಳಿದ್ದನ್ನು ರಾಜೇಶ ಒಪ್ಪಿದ್ದರು. ಇದರ ಅನುಸಾರ ಆಕೆಗೆ ಹೊಸ ಮನೆ ಕಟ್ಟಿಸಿಕೊಟ್ಟಿದ್ದರು. 2018ರ ಫೆಬ್ರವರಿ 8ರಂದು ಮೊದಲ ಪತ್ನಿಯು ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದರು. ಅಂದು ಬೆಳಗಿನ ಜಾವ 4 ಗಂಟೆಯಲ್ಲಿ ತನ್ನ ಪಕ್ಕದಲ್ಲಿ ಮೊದಲ ಪತ್ನಿ ಇಲ್ಲದೇ ಇದ್ದುದನ್ನು ಗಮನಿಸಿದ್ದ ರಾಜೇಶ್‌ ಆಕೆಯನ್ನು ಹುಡುಕಿಕೊಂಡು ಹೊರಟರು. ಈ ವೇಳೆ ವಾಣಿಗರಹಳ್ಳಿ ಬಳಿ ಹೊಲದಲ್ಲಿ ಯಾರೋ ಮಾತನಾಡುವುದು ಕೇಳಿಸಿ, ಅಲ್ಲಿ ನೋಡಿದಾಗ, ಪತ್ನಿಯು ಪರ ಪುರುಷನ ಜೊತೆಯಲ್ಲಿ ಇರುವುದನ್ನು ಕಂಡು ಕೋಪೋದ್ರಿಕ್ತರಾದರು. ಆಕೆ ತೊಟ್ಟಿದ್ದ ವೇಲ್‌ನಿಂದಲೇ ಕುತ್ತಿಗೆ ಬಿಗಿದು ಅವಳನ್ನು ಸಾಯಿಸಿದ್ದರು. ಆಕೆಯ ಜೊತೆಗಿದ್ದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದ.

ಮೃತ ಪತ್ನಿಯ ದೇಹವನ್ನು ರಾಜೇಶ್‌ ಅಲ್ಲೇ ಮರದ ಬುಡದಲ್ಲಿದ್ದ ಎಲೆಗಳಿಂದ ಮುಚ್ಚಿ ಮರೆಮಾಡಿ ಬಂದಿದ್ದರು. ಮರು‌ದಿನ ಬೆಳಗ್ಗೆ ತನ್ನ ಬಾಲ್ಯದ ಗೆಳೆಯನ ಬಳಿ ಹೋಗಿ, ನನ್ನ ಪತ್ನಿ ಕಾಣಿಸುತ್ತಿಲ್ಲ ಎಂದು ಹೇಳಿ, ಪತ್ನಿ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ವಿಷಯ ತಿಳಿದ ಪತ್ನಿಯ ಮನೆಯವರು ಆಕೆಗಾಗಿ ಹುಡುಕಾಡಿ ಅವಳಿಗೇನಾದರೂ ಆಗಿದ್ದರೆ ನಿನ್ನನ್ನು ಉಳಿಸುವುದಿಲ್ಲ ಎಂದು ಆರೋಪಿ ರಾಜೇಶ್‌ನನ್ನು ಎಚ್ಚರಿಸಿದ್ದರು.

ಇದರಿಂದ ಭಯಗೊಂಡ ರಾಜೇಶ್‌, ಹೆಣ ಏನಾದರೂ ಇವರಿಗೆ ದೊರೆತರೆ, ನನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆಣವನ್ನು ಬಚ್ಚಿಟ್ಟಿದ್ದ ಸ್ಥಳಕ್ಕೆ ಹೋಗಿ, ಅಡಿಕೆ ಸುಲಿಯುವ ಕತ್ತಿಯಿಂದ ಹೆಣವನ್ನು ನಾಲ್ಕು ಭಾಗಗಳಾಗಿ ತುಂಡರಿಸಿದ್ದರು. ನಂತರ ಅಲ್ಲೇ ಇದ್ದ ಗುಂಡಸಂದ್ರ ಕೆರೆ ಪೈಪ್‌ಲೈನ್ ಜಾಗದಲ್ಲಿ ನೆಲ ಅಗೆದು ಮಣ್ಣಿನಲ್ಲಿ ಆ ತುಂಡುಗಳನ್ನು ನಾಲ್ಕು ಜಾಗಗಳಲ್ಲಿ ಹೂತು ಹಾಕಿದ್ದರು.

ಆದರೆ, ತಾನು ಮಾಡಿದ ಅಪರಾಧವನ್ನು ಮುಚ್ಚಿಡಲು ಮನಸಿಲ್ಲದೆ, ಪುನಃ ತನ್ನ ಗೆಳೆಯ ರಾಜಣ್ಣನ ಬಳಿ ಹೋಗಿ ನಡೆದ ಸಂಗತಿಯನ್ನೆಲ್ಲ ವಿವರಿಸಿ, ಇದನ್ನು ಪೊಲೀಸರಿಗೆ ತಿಳಿಸುವಂತೆ ಹೇಳಿದ್ದರು. ರಾಜಣ್ಣ ದಾಖಲಿಸಿದ ದೂರಿನ ಮೇರೆಗೆ ದೊಡ್ಡಬೆಳವಂಗಲ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ, ಆರೋಪಿ ರಾಜೇಶನನ್ನು ದಸ್ತಗಿರಿ ಮಾಡಿದ್ದರು.

ನಂತರ ಮ್ಯಾಜಿಸ್ಟ್ರೇಟ್‌ ಸಮಕ್ಷಮದಲ್ಲಿ ಆರೋಪಿ ತುಂಡರಿಸಿ ಹೂತು ಹಾಕಿದ್ದ ದೇಹದ ಭಾಗಗಳನ್ನು ಹೊರ ತೆಗೆದು ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ಪೂರ್ಣಗೊಂಡ ನಂತರ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ 302, 201 ಮತ್ತು 203ರ ಅಡಿಯಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ವಿಚಾರಣೆ ನಡೆಸಿದ್ದ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಮೇಶ ದುರುಗಪ್ಪ ಏಕಬೋಟೆ ಅವರು ಆರೋಪಿಯ ಕೃತ್ಯವನ್ನು ಪರಿಗಣಿಸಿ ಐಪಿಸಿ ಸೆಕ್ಷನ್‌ 302, 201 ಹಾಗೂ 203 ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹ 45 ಸಾವಿರ ದಂಡ ವಿಧಿಸಿ ಆದೇಶಿಸಿದ್ದರು. ಈ ಸಂಬಂಧ ರಾಜೇಶ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com