ಯೋಗೀಶ್‌ ಗೌಡ ಹತ್ಯೆ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ; ಬಿ ವರದಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

ನ್ಯಾಯಯುತ ತನಿಖೆ ನಡೆಸುವುದರಿಂದ ತಪ್ಪಿಸಿಕೊಳ್ಳಲು ತನಿಖಾಧಿಕಾರಿ ಪ್ರಯತ್ನಿಸಿದ್ದಾರೆ ಎಂಬುದು ಅವರ ಜಡ ವರ್ತನೆಯಿಂದ ತಿಳಿಯುತ್ತದೆ ಎಂದಿರುವ ನ್ಯಾಯಾಲಯ.
Yogesh Gowda
Yogesh GowdaFacebook

ಧಾರವಾಡದ ಕೊಲೆಗೀಡಾದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನುಡಿಯುವುದಕ್ಕೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ್ದ ʼಬಿʼ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ತಿರಸ್ಕರಿಸಿದೆ.

ಯೋಗೀಶ್‌ ಸಹೋದರ ಗುರುನಾಥ್‌ ಗೌಡ ಸಲ್ಲಿಸಿದ್ದ ಖಾಸಗಿ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್‌) ನ್ಯಾಯಾಧೀಶೆ ಜೆ ಪ್ರೀತ್‌ ಅವರು ಪುರಸ್ಕರಿಸಿದ್ದು, ಹುಬ್ಬಳ್ಳಿ-ಧಾರವಾಡ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಲ್ಲಿಸಿದ್ದ ಬಿ ವರದಿಯನ್ನು ತಿರಸ್ಕರಿಸಿದ್ದಾರೆ.

“ಧಾರವಾಡದ ಉಪನಗರ ಠಾಣೆಯ ಪೊಲೀಸರು ಪ್ರಕರಣದ ತನಿಖೆ ನಡೆಸಿ, ಅಂತಿಮ/ಹೆಚ್ಚುವರಿ ವರದಿಯನ್ನು ಕಾನೂನಿನ ಅಡಿ ತುರ್ತಾಗಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

“ತನಿಖಾಧಿಕಾರಿಯು ದೂರುದಾರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಲ್ಲದೇ, ದೂರುದಾರರಿಂದ ಯಾವುದೇ ದಾಖಲೆಯನ್ನು ಪಡೆದುಕೊಂಡಿಲ್ಲ. ಆರೋಪಿಗಳ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಧ್ವನಿ ರೆಕಾರ್ಡಿಂಗ್‌ ಮತ್ತು ಸಿಸಿಟಿವಿ ತುಣುಕುಗಳಿವೆ, ಆದರೆ, ಅವುಗಳನ್ನು ಸ್ವೀಕರಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಬಹುದಿತ್ತು. ಡಿಜಿಟಲ್‌ ಸಾಕ್ಷಿಯನ್ನು ಸಂಗ್ರಹಿಸುವ ತ್ರಾಸನ್ನಾದರೂ ತನಿಖಾಧಿಕಾರಿ ತೆಗೆದುಕೊಳ್ಳಬಹುದಿತ್ತು. ಮೌಖಿಕ ಸಾಕ್ಷ್ಯಕ್ಕಿಂತ ಡಿಜಿಟಲ್‌ ಸಾಕ್ಷಿಯು ಮಹತ್ತರ ಪಾತ್ರವಹಿಸಲಿದೆ. ಆದರೆ, ಅದನ್ನು ಸಂಪೂರ್ಣವಾಗಿ ತನಿಖಾಧಿಕಾರಿ ನಿರ್ಲಕ್ಷಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ತನಿಖಾಧಿಕಾರಿಯು ಐವರು ಸಾಕ್ಷಿಗಳ ಹೇಳಿಕೆ ದಾಖಲಿಸಿ, ಸ್ಥಳ ಮಹಜರ್‌ ನಡೆಸಿ, ಯಾವುದೇ ಪ್ರಕರಣವಿಲ್ಲ ಎಂದು ಬಿ ವರದಿ ಸಲ್ಲಿಸಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

“ದೂರುದಾರರನ್ನು ವಿಚಾರಣೆಯಲ್ಲಿ ಭಾಗಿಯಾಗಲು ಮತ್ತು ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್‌ ಅನ್ನೂ ಜಾರಿ ಮಾಡಿಲ್ಲ. ಆರೋಪಿಗಳನ್ನು ತನಿಖೆಗೂ ಕರೆದಿಲ್ಲ. ನ್ಯಾಯಯುತ ತನಿಖೆ ನಡೆಸುವುದರಿಂದ ತಪ್ಪಿಸಿಕೊಳ್ಳಲು ತನಿಖಾಧಿಕಾರಿ ಪ್ರಯತ್ನಿಸಿದ್ದಾರೆ ಎಂಬುದು ಅವರ ಜಡ ವರ್ತನೆಯಿಂದ ತಿಳಿಯುತ್ತದೆ. ತನಿಖಾಧಿಕಾರಿಯ ಅಭಿಪ್ರಾಯವು ಕಾನೂನಿನ ತಪ್ಪು ಅರಿವಿನಿಂದಾಗಿದೆ. ಹೀಗಾಗಿ, ತನಿಖಾಧಿಕಾರಿಯ ಅಭಿಪ್ರಾಯವನ್ನು ಒಪ್ಪಲಾಗದು ಮತ್ತು ಅದು ನಂಬಿಕೆಗೆ ಅರ್ಹವಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ತಾನು ಸಾಕ್ಷಿಯಾಗಿದ್ದು, ಆರೋಪಿಗಳು ಸಾಕ್ಷಿ ನುಡಿಯವುದಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಗುರುನಾಥ್‌ ಗೌಡರ್‌ ಸಿಆರ್‌ಪಿಸಿ ಸೆಕ್ಷನ್‌ 195ಎ ಅಡಿ ಅರ್ಜಿ ಧಾರವಾಡದ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನು ವ್ಯಾಪ್ತಿ ಹೊಂದಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿ, ಪ್ರಕರಣವನ್ನು ತನಿಖೆಗಾಗಿ 2019ರ ಏಪ್ರಿಲ್‌ 8ರಂದು ಧಾರವಾಡದ ಉಪನಗರ ಠಾಣೆಗೆ ವರ್ಗಾಯಿಸಲಾಗಿತ್ತು.

ಆರೋಪಿ ಡಿವೈಎಸ್‌ಪಿಗಳಾದ ತುಳಜಪ್ಪ ಸುಲ್ಪಿ, ಚಂದ್ರಶೇಖರ್‌ ಹಾಗೂ ಮಾಜಿ ಸಚಿವ, ಹಾಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 195ಎ ಜೊತೆ 34ರ ಅಡಿ ದಾಖಲಿಸಿದ್ದ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್‌ ಅವರು ಐಪಿಸಿ ಸೆಕ್ಷನ್‌ 173(2)ರ ಅಡಿ ಬಿ ವರದಿ ಸಲ್ಲಿಸಿದ್ದರು.

ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಸೇರಿದಂತೆ ಹಲವು ಆರೋಪಿಗಳಿದ್ದು, ಗುರುನಾಥ್‌ ಈ ಪ್ರಕರಣದಲ್ಲಿ 19ನೇ ಸಾಕ್ಷಿಯಾಗಿದ್ದಾರೆ.

Attachment
PDF
Gurunathgouda Vs Tulajappa Sulpi.pdf
Preview

Related Stories

No stories found.
Kannada Bar & Bench
kannada.barandbench.com