ಪಿನ್ಸ್ಟಾರ್ಮ್ ಸಂಸ್ಥಾಪಕ ಮತ್ತು ಭಾರತೀಯ ಮಾರುಕಟ್ಟೆದಾರ ಮಹೇಶ್ ಮೂರ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಸಿಂಗಾಪುರ ಮೂಲದ ಫ್ಯಾಶನ್ ಟೆಕ್ ಸಂಸ್ಥೆ ಝಿಲಿಂಗೋದ ಸಹ-ಸಂಸ್ಥಾಪಕಿ ಅಂಕಿತಿ ಬೋಸ್, ತಮ್ಮ ವಿರುದ್ಧ ಬರೆದ ಅವಹೇಳನಕಾರಿ ಲೇಖನಕ್ಕೆ ಸಂಬಂಧಿಸಿದಂತೆ ಮೂರ್ತಿ ಅವರು ₹ 820 ಕೋಟಿ ನಷ್ಟ ಪರಿಹಾರ ನೀಡಬೇಕೆಂದು ಕೋರಿದ್ದಾರೆ.
ಜಿಲಿಂಗೋ ಸಿಇಒ ಆಗಿದ್ದ ಅಂಕಿತಿ ಅವರನ್ನು ಹಣಕಾಸು ಅಕ್ರಮಗಳ ತನಿಖೆ ನಡೆಸಿದ ಕಂಪನಿ ಮಾರ್ಚ್ 2022ರಲ್ಲಿ ಅಮಾನತುಗೊಳಿಸಿತ್ತು. ಬಳಿಕ ಜನವರಿಯಲ್ಲಿ ದಿವಾಳಿಯಾದ ಕಂಪನಿ ತನ್ನನ್ನು ತೆಗೆದುಹಾಕಲು ಯತ್ನಿಸಿತು ಎಂದು ಅಂಕಿತಿ ಹೇಳಿದ್ದಾರೆ.
ಇದೇ ವೇಳೆ ಮೂರ್ತಿ ಅವರು ಔಟ್ಲುಕ್ ಬಿಸಿನೆಸ್ ನಿಯತಕಾಲಿಕಕ್ಕೆ ʼವಲ್ಚರ್ ಕ್ಯಾಪಿಟಲ್ ಟು ವಿಕ್ಟಿಮ್ ಕ್ಯಾಪಿಟಲ್; ಮಹೇಶ್ ಮೂರ್ತೀಸ್ ಟೇಕ್ ಆನ್ ವಿಸೀಸ್ ಇನ್ ಇಂಡಿಯಾʼ ಎಂಬ ಲೇಖನ ಬರೆದರು.
ಲೇಖನದಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಮತ್ತು ತಪ್ಪು ಹೇಳಿಕೆಗಳನ್ನು ಮೂರ್ತಿ ನೀಡಿದ್ದಾರೆ. ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಲೇಖನವನ್ನು ಮೂರ್ತಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಏಪ್ರಿಲ್ 20 ರಂದು ಅಂಕಿತಿ ಬಾಂಬೆ ಹೈಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಔಟ್ಲುಕ್ ಮತ್ತು ಮೂರ್ತಿ ಅವರು ತಮ್ಮ ಹೆಸರು, ಪ್ರತಿಷ್ಠೆ ಮತ್ತು ಸಾರ್ವಜನಿಕರ ದೃಷ್ಟಿಯಲ್ಲಿ ತಮ್ಮ ಸ್ಥಾನಮಾನಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿರುವ ಅಂಕಿತಿ ₹ 820 ಕೋಟಿ ನಷ್ಟ ಪರಿಹಾರ ಕೋರಿದ್ದಾರೆ.
ತಮ್ಮ ವಿರುದ್ಧ ಮಾನಹಾನಿಕರವಾದ ಯಾವುದೇ ವಸ್ತುವಿಷಯವನ್ನು ಪ್ರಕಟಿಸದಂತೆ ಅಥವಾ ಬರೆಯದಂತೆ ಮೂರ್ತಿ ಅವರಿಗೆ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಪ್ರಾರ್ಥಿಸಲಾಗಿದೆ. ಅಲ್ಲದೆ ಆನ್ಲೈನ್ ರೂಪದಲ್ಲಿರುವ ತಮ್ಮ ವಿರುದ್ಧದ ಯಾವುದೇ ಬರಹ ಅಥವಾ ಟ್ವೀಟ್ಗಳನ್ನು ತೆಗೆದುಹಾಕುವಂತೆ ಕೋರಲಾಗಿದೆ.