Supreme Court
Supreme Court  
ಸುದ್ದಿಗಳು

ಬೆಂಗಳೂರು ಸ್ಫೋಟ ಪ್ರಕರಣ: ಪಬ್ಲಿಕ್ ಪ್ರಾಸಿಕ್ಯೂಟರ್ ಉಳಿಸಿಕೊಳ್ಳಲು ಸರ್ಕಾರ ಮಾಡಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ

Bar & Bench

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಬ್ದುಲ್ ನಾಸರ್ ಮದನಿ ಆರೋಪಿಯಾಗಿರುವ 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಿರುವ ಹಾಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನೇ ರಾಜ್ಯದ ಚುನಾವಣೆಯ ನಂತರವೂ ಉಳಿಸಿಕೊಳ್ಳುವಂತೆ ಕರ್ನಾಟಕ ಸರ್ಕಾರ ಸೋಮವಾರ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಉಳಿಸಿಕೊಳ್ಳುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಖಿಲ್ ಗೋಯೆಲ್ ಅವರು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠಕ್ಕೆ ಮನವಿ ಮಾಡಿದ್ದರು.

ಕರ್ನಾಟಕದಲ್ಲಿ ಸರ್ಕಾರ ಬದಲಾಗಿ, ಪ್ರಕರಣದ ಪ್ರಾಸಿಕ್ಯೂಟರ್ ಕೂಡ ಬದಲಾದರೆ, ವಿಚಾರಣೆ ವಿಳಂಬವಾಗಬಹುದು ಎಂದು ಅವರು ಹೇಳಿದರು. ಆದರೆ, ಸರ್ಕಾರದ ಈ ಮನವಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಪೀಠ, ನಿರ್ಧಾರ ತೆಗೆದುಕೊಳ್ಳುವುದು ಪ್ರಾಸಿಕ್ಯೂಟರ್‌ ಅವರಿಗೆ ಸಂಬಂಧಿಸಿದ್ದು ಎಂದು ಹೇಳಿತು.

ಕೇರಳ ಭೇಟಿ ರದ್ದು

ಪ್ರಕರಣದಲ್ಲಿ ಮದನಿ 8 ವರ್ಷಗಳಿಂದ ಜಾಮೀನಿನ ಮೇಲೆ ಇದ್ದಾರೆ. ಹಾಸಿಗೆ ಹಿಡಿದಿರುವ ತಮ್ಮ ತಂದೆಯನ್ನು ನೋಡಲು ತಾನು ಕೇರಳಕ್ಕೆ ತೆರಳಬೇಕಿದ್ದು, ಈ ವೇಳೆ ರಕ್ಷಣೆ ನೀಡಲು ಕರ್ನಾಟಕ ಪೊಲೀಸರು ಹೆಚ್ಚಿನ ಭದ್ರತಾ ವೆಚ್ಚ ಪಾವತಿಸುವಂತೆ ಕೇಳಿದ್ದಾರೆ. ಹೀಗಾಗಿ ಆ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ಕೋರಿ ಮದನಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್‌ ಮನವಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮದನಿ ಕೇರಳ ಭೇಟಿ ರದ್ದುಗೊಳಿಸಿದ್ದಾರೆ. ಮದನಿ ಅವರಿಗೆ ಭದ್ರತೆ ಒದಗಿಸಲು ₹ 52 ಲಕ್ಷ ನೀಡುವಂತೆ ಕರ್ನಾಟಕ ಪೊಲೀಸರು ಕೇಳಿದ್ದರು. ಮದನಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ವಕೀಲ ಹಾರಿಸ್ ಬೀರನ್ ವಾದ ಮಂಡಿಸಿದರು..