ಸುದ್ದಿಗಳು

ದಕ್ಷಿಣ ಕನ್ನಡ ಜಿಲ್ಲೆಯ ಕಂದಾಯ ನ್ಯಾಯಾಲಯಗಳಲ್ಲಿ 3,371 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ: ಕಂದಾಯ ಸಚಿವ ಅಶೋಕ್‌

Bar & Bench

ದಕ್ಷಿಣ ಕನ್ನಡ ಜಿಲ್ಲೆಯ ಕಂದಾಯ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳಲು ಒಟ್ಟು 3,371 ಪ್ರಕರಣಗಳು ಬಾಕಿ ಇವೆ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ಅವರು ಇತ್ತೀಚೆಗೆ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು ಟಿ ಖಾದರ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಂದಾಯ ನ್ಯಾಯಾಲಯಗಳಾದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ ಎಷ್ಟು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿರುವ ಸಚಿವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ 461, ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 2,066, ಪುತ್ತೂರು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 522, ಮಂಗಳೂರು ತಹಶೀಲ್ದಾರ್‌ ನ್ಯಾಯಾಲಯದಲ್ಲಿ 65, ಬಂಟ್ವಾಳ್‌ ತಹಶೀಲ್ದಾರ್‌ ನ್ಯಾಯಾಲಯದಲ್ಲಿ 29, ಮೂಡುಬಿದರೆ ತಹಶೀಲ್ದಾರ್‌ ನ್ಯಾಯಾಲಯದಲ್ಲಿ 15, ಪುತ್ತೂರು ತಹಶೀಲ್ದಾರ್‌ ನ್ಯಾಯಾಲಯದಲ್ಲಿ 139, ಕಡಬ ತಹಶೀಲ್ದಾರ್‌ ನ್ಯಾಯಾಲಯದಲ್ಲಿ 9, ಬೆಳ್ತಂಗಡಿ ತಹಶೀಲ್ದಾರ್‌ ನ್ಯಾಯಾಲಯದಲ್ಲಿ 25, ಸುಳ್ಯ ತಹಶೀಲ್ದಾರ್‌ ನ್ಯಾಯಾಲಯದಲ್ಲಿ 3, ಉಳ್ಳಾಲ ತಹಶೀಲ್ದಾರ್‌ ನ್ಯಾಯಾಲಯದಲ್ಲಿ 28 ಹಾಗೂ ಮುಲ್ಕಿ ತಹಶೀಲ್ದಾರ್‌ ನ್ಯಾಯಾಲಯದಲ್ಲಿ 9 ಸೇರಿ ಇಟ್ಟು 3,371 ಪ್ರಕರಣಗಳು ಬಾಕಿ ಇವೆ ಎಂದು ವಿವರಿಸಲಾಗಿದೆ.

ಪ್ರತಿ ಮಂಗಳವಾರ ಮತ್ತು ಗುರುವಾರದಂದು ತಪ್ಪದೇ ಕಂದಾಯ ಅರೆ ನ್ಯಾಯಿಕ ಪ್ರಕರಣಗಳ ವಿಚಾರಣೆ ನಡೆಸಿ, ಶೀಘ್ರವಾಗಿ ವಿಲೇವಾರಿಗೆ ಸೂಚಿಸಲಾಗಿದೆ. ಕಂದಾಯ ಅರೆ ನ್ಯಾಯಿಕ ಪ್ರಕರಣ/ಮೇಲ್ಮನವಿಗಳನ್ನು ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಉತ್ತರದಲ್ಲಿ ವಿವರಿಸಲಾಗಿದೆ.

ಹಕ್ಕು ಬದಲಾವಣೆಗಳ ಸಂಬಂಧ (ಬಾಕಿ ಇರುವ ಪ್ರಕರಣಗಳು ಸೇರಿ) ತಕರಾರು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ದೃಷ್ಟಿಯಿಂದ ಹೋಬಳಿಗಳಲ್ಲಿ ಕಾರ್ಯನಿರ್ವಹಿಸುವ ಉಪ ತಹಶೀಲ್ದಾರ್‌ ಹುದ್ದೆಯು ಶಿರಸ್ತೇದಾರ್‌ ಹುದ್ದೆಗೆ ಸಮಾನಾಂತರವಾಗಿರುವುದರಿಂದ ಸಂಬಂಧಪಟ್ಟ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳನ್ನು ಆಯಾ ಉಪ ತಹಶೀಲ್ದಾರ್‌ಗಳು ಹಾಗೂ ಕಸಬಾ ಹೋಬಳಿಯ ಪ್ರಕರಣಗಳನ್ನು ತಹಶೀಲ್ದಾರ್‌ ಇತ್ಯರ್ಥಪಡಿಸಲು ಆದೇಶಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.