ಸುದ್ದಿಗಳು

ವಿಮಾನ ಅಪಘಾತಗಳ ಮಾಧ್ಯಮ ವರದಿ ನಿಯಂತ್ರಣ: ಮದ್ರಾಸ್ ಹೈಕೋರ್ಟ್‌ಗೆ ಪಿಐಎಲ್

ವಿಮಾನ ಅಪಘಾತಗಳ ನಂತರ ಮಾಧ್ಯಮಗಳು ಅಕಾಲಿಕವಾಗಿ ಅಥವಾ ಊಹಾತ್ಮಕವಾಗಿ ವರದಿ ಮಾಡುವುದನ್ನು ತಡೆಯಲು ಸಮಗ್ರ ಮಾರ್ಗಸೂಚಿ ರೂಪಿಸಬೇಕು ಎಂದು ಕೊಯಮತ್ತೂರಿನ ವಕೀಲ ಎಂ. ಪ್ರವೀಣ್ ಸಲ್ಲಿಸಿರುವ ಅರ್ಜಿ ತಿಳಿಸಿದೆ.

Bar & Bench

ವಿಮಾನ ಅಪಘಾತಗಳ ಮಾಧ್ಯಮ ವರದಿ ನಿಯಂತ್ರಿಸುವುದಕ್ಕಾಗಿ ಮಾರ್ಗಸೂಚಿ ಅಥವಾ ಸಲಹೆ ನೀಡುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಸಲ್ಲಿಸಲಾಗಿದೆ.

ವಿಮಾನ ಅಪಘಾತಗಳ ನಂತರ ಮಾಧ್ಯಮಗಳು ಅವಸರದ ಅಥವಾ ಊಹಾತ್ಮಕ ವರದಿ ಮಾಡುವುದನ್ನು ತಡೆಯಲು ಸಮಗ್ರ ಮಾರ್ಗಸೂಚಿ ರೂಪಿಸಬೇಕು ಎಂದು ಕೊಯಮತ್ತೂರಿನ ವಕೀಲ ಎಂ. ಪ್ರವೀಣ್ ಸಲ್ಲಿಸಿರುವ ಅರ್ಜಿ ತಿಳಿಸಿದೆ. ಪ್ರಕರಣವನ್ನು ಹೈಕೋರ್ಟ್‌ ಈ ವಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಅಪಘಾತದ ನಂತರ ಪ್ರಸಾರವಾಗುವ ಆಧಾರರಹಿತ ಆರೋಪಗಳು ಮತ್ತು ಊಹಾಪೋಹದ ನಿರೂಪಣೆಗಳು ಮೃತರಿಗೆ ಮಾನಹಾನಿ ಮಾಡುತ್ತವೆ. ದುಃಖದಲ್ಲಿರುವ ಕುಟುಂಬಗಳಿಗೆ ಭಾವನಾತ್ಮಕ ಆಘಾತ ಉಂಟು ಮಾಡುತ್ತವೆ ಎಂದು ಅರ್ಜಿ ಹೇಳಿದೆ.

ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ದುರಂತ ಅಪಘಾತ ಸೇರಿದಂತೆ ಇತ್ತೀಚಿನ ವಿಮಾನ ಅಪಘಾತಗಳಲ್ಲಿ, ಅಧಿಕೃತ ತನಿಖೆ ಮುಗಿಯುವ ಮೊದಲೇ ಪೈಲಟ್‌ಗಳನ್ನು ತರಾತುರಿಯಲ್ಲಿ ದೂಷಿಸುವ ಪ್ರವೃತ್ತಿ ಕಂಡುಬಂದಿದೆ ಎಂದು ಮನವಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ಪರಿಶೀಲಿಸದ ವರದಿಗಳು ಪೈಲಟ್‌ಗಳ ವೃತ್ತಿಪರ ವರ್ಚಸ್ಸಿಗೆ ಧಕ್ಕೆ ಉಂಟುಮಾಡುತ್ತವೆ. ವಾಯುಯಾನ ಸುರಕ್ಷತೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಇರಿಸಿರುವ ವಿಶ್ವಾಸವನ್ನು ಕುಗ್ಗಿಸುತ್ತದೆ ಮತ್ತು ಔಪಚಾರಿಕ ತನಿಖಾ ಪ್ರಕ್ರಿಯೆಗಳ ಸಮಗ್ರತೆ ಮುಕ್ಕಾಗುತ್ತದೆ ಎಂದು ಅರ್ಜಿ ವಿವರಿಸಿದೆ.

ಜುಲೈ 14ರಂದು ನಾಗರಿಕ ವಿಮಾನಯಾನ ಸಚಿವಾಲಯ, ಡಿಜಿಸಿಎ ಮತ್ತು ಸಚಿವಾಲಯಕ್ಕೆ ವಿವರವಾದ ಪತ್ರ ಬರೆದಿದ್ದರೂ  ಅದಕ್ಕೆ ಸಂಬಂಧಿಸಿದಂತೆ  ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

ಅನಿಯಂತ್ರಿತ ಮಾಧ್ಯಮ ವರದಿಗಾರಿಕೆ ಸಂವಿಧಾನದ 14, 19(1) (ಎ), ಮತ್ತು 21ನೇ ವಿಧಿಗಳ ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.