Justice Raveendran, Justice Lokur, Justice Sikri  
ಸುದ್ದಿಗಳು

ಸರಾಫ್- ಲೂತ್ರಾ ಮಧ್ಯಸ್ಥಿಕೆ ವ್ಯಾಜ್ಯ: ಎಲ್ಲಾ ಮೂವರು ಮಧ್ಯಸ್ಥಿಕೆದಾರರ ರಾಜೀನಾಮೆ

Bar & Bench

ಲುಥ್ರಾ ಮತ್ತು ಲುಥ್ರಾ ಕಾನೂನು ಕಚೇರಿಗಳ ಸಂಸ್ಥಾಪಕ ಪಾಲುದಾರ ದಿವಂಗತ ರಾಜೀವ್ ಲೂಥ್ರಾ ಮತ್ತು ಸಂಸ್ಥೆಯ ಮಾಜಿ ಹಿರಿಯ ಪಾಲುದಾರ ಮೋಹಿತ್ ಸರಾಫ್ ಅವರ ನಡುವಿನ ವ್ಯಾಜ್ಯ ಇತ್ಯರ್ಥಕ್ಕಾಗಿ ನೇಮಕಗೊಂಡಿದ್ದ ಎಲ್ಲಾ ಮೂವರು ಮಧ್ಯಸ್ಥಿಕೆದಾರರು ರಾಜೀನಾಮೆಗೆ ಮುಂದಾಗಿದ್ದಾರೆ.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಾದ ಆರ್‌ ವಿ ರವೀಂದ್ರನ್‌, ಎ ಕೆ ಸಿಕ್ರಿ ಹಾಗೂ ಮದನ್‌ ಬಿ ಲೋಕೂರ್‌ ಅವರನ್ನು ಮಧ್ಯಸ್ಥಿಕೆ ಕೇಂದ್ರ ಒಳಗೊಂಡಿತ್ತು. ನ್ಯಾ. ರವೀಂದ್ರನ್ ಅವರನ್ನು ಮೋಹಿತ್ ಸರಾಫ್ ಅವರು ನಾಮನಿರ್ದೇಶನ ಮಾಡಿದ್ದರು. ನ್ಯಾಯಮೂರ್ತಿ ಸಿಕ್ರಿ ಅವರನ್ನು ರಾಜೀವ್ ಲೂಥ್ರಾ ಅವರು ನೇಮಿಸಿದ್ದರು. ನ್ಯಾಯಮೂರ್ತಿ ಲೋಕೂರ್ ಅವರನ್ನು ಇಬ್ಬರು ಮಧ್ಯಸ್ಥಿಕೆದಾರ ನ್ಯಾಯಮೂರ್ತಿಗಳು ನಾಮನಿರ್ದೇಶನ ಮಾಡಿದ್ದರು.

ವಿಶ್ವಾಸಾರ್ಹ ಮೂಲಗಳ ಪ್ರಕಾರ, ನ್ಯಾಯಮೂರ್ತಿ ಲೋಕುರ್ ಅವರು ಎರಡೂ ಕಡೆಯ ಪಕ್ಷಕಾರರಿಗೆ ಪತ್ರ ಬರೆದು ತಮ್ಮನ್ನೂ ಒಳಗೊಂಡಂತೆ ಮೂವರೂ ಮಧ್ಯಸ್ಥಿಕೆದಾರರು ಇನ್ನು ಮುಂದೆ ಮಧ್ಯಸ್ಥಿಕೆ ಮುಂದುವರೆಸುವುದಿಲ್ಲ ಎಂದು ತಿಳಿಸಿದ್ದರು.

ಸರಾಫ್‌ ಪರ ವಕೀಲ ರಾಘವೇಂದ್ರ ಕೆ ಸಿಂಗ್ ಅವರು ಸೆಪ್ಟೆಂಬರ್ 28 ರಂದು ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಸರಾಫ್‌ ಅವರು ನ್ಯಾಯಮಂಡಳಿ ಸದಸ್ಯರನ್ನು ಬದಲಿಸಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯನ್ನು ವಿಸರ್ಜಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಇಮೇಲ್‌ ನ ವಿಚಾರಗಳನ್ನು ಚರ್ಚಿಸಿದ ಬಳಿಕ ಮಧ್ಯಸ್ಥಿಕೆ ಮಂಡಳಿಯ ಸದಸ್ಯರು ಅಲ್ಲಿಂದ ಹೊರಬರಲು ನಿರ್ಧರಿಸಿದ್ದಾರೆ ಎಂದು ನ್ಯಾ. ಲೋಕೂರ್‌ ಅವರು ಕಕ್ಷಿದಾರರಿಗೆ ವಿವರಿಸಿದ್ದಾರೆ.

ಕಕ್ಷಿದಾರರಿಗೆ ಕಳುಹಿಸಿದ ಪತ್ರದಲ್ಲಿ, ನ್ಯಾಯಮೂರ್ತಿ ಲೋಕೂರ್ ಅವರು ಇಮೇಲ್‌ನಲ್ಲಿ ಸರಾಫ್ ಪರ ವಕೀಲರು ಮಾಡಿದ ಅವಲೋಕನಗಳನ್ನೂ ಉಲ್ಲೇಖಿಸಿದ್ದಾರೆ. ಸಿಂಗ್ ಅವರು ಮಾಡಿದ ಇಂತಹ ಅವಲೋಕನಗಳ ನಿಖರತೆಯನ್ನು ನಿರಾಕರಿಸುವ ಸಂದರ್ಭದಲ್ಲಿ, ನ್ಯಾ. ಲೋಕೂರ್‌ ಅವರು ಮಧ್ಯಸ್ಥಿಕೆಯನ್ನು ಮುಂದುವರಿಸದಿರುವ ನಿರ್ಧಾರದ ದೃಷ್ಟಿಯಿಂದ ಪತ್ರದಲ್ಲಿ ಅದನ್ನು  ಚರ್ಚಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಮಧ್ಯಸ್ಥಿಕೆ ಮಂಡಳಿಯ ಆದೇಶದ ಅವಧಿ ಮುಗಿದಿದ್ದು, ಅಸ್ತಿತ್ವದಲ್ಲಿರುವ ಅದರ ಆದೇಶವನ್ನು ವಿಸ್ತರಿಸಲು ನ್ಯಾಯಾಲಯವನ್ನು ಸಂಪರ್ಕಿಸುವ ಬದಲು ಮಂಡಳಿ ಪುನಾರಚನೆಗೆ ಕ್ರಮಕೈಗೊಳ್ಳಲು ಕಕ್ಷಿದಾರರಿಗೆ ಈ ಪತ್ರ ಕಳುಹಿಸಲಾಗುತ್ತಿದೆ ಎಂದು ಪತ್ರ ವಿವರಿಸಿದೆ.

ಲುಥ್ರಾ ಅವರನ್ನು ಎಲ್ ಅಂಡ್‌ ಎಲ್ ಪಾಲುದಾರಿಕೆಯಿಂದ ತೆಗೆದುಹಾಕಲಾಗಿತ್ತು. ಇದನ್ನು ಪ್ರಶ್ನಿಸಿ  ಸರಾಫ್ ಅವರು ಅಕ್ಟೋಬರ್ 2020 ರಲ್ಲಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ಸಲಹೆ ಮೇರೆಗೆ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಲೂತ್ರಾ ಮತ್ತು ಸರಾಫ್ ಅವರ ನಡುವೆ ಮಧ್ಯಸ್ಥಿಕೆ ವಹಿಸಲು ಒಪ್ಪಿಕೊಂಡಿದ್ದರು. ಆದರೆ, ಅದು ಫಲಪ್ರದವಾಗಲಿಲ್ಲ. ಪ್ರಕರಣ ಹೈಕೋರ್ಟ್‌ ಅಂಗಳಕ್ಕೆ ಮರಳಿದಾಗ ಎಲ್‌ ಅಂಡ್‌ ಎಲ್‌ ಪಾಲುದಾರಿಕೆಯಿಂದ ಸರಾಫ್‌ ಅವರನ್ನು ವಜಾಗೊಳಿಸುವುದಕ್ಕೆ ಏಕಸದಸ್ಯ ಪೀಠ ತಡೆ ನೀಡಿತ್ತು.

ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ಲೂತ್ರಾ, ಏಕ ಸದಸ್ಯ ಪೀಠದ ಆದೇಶ ಅಸಂಗತತೆಯಿಂದ ಕೂಡಿದೆ ಎಂದು ವಾದಿಸಿದರು. ಈ ಮಧ್ಯೆ, ವಿವಾದಕ್ಕೆ ಸಂಬಂಧಿಸಿದ ವಿಚಾರಣೆಗಳು ಮಧ್ಯಸ್ಥಿಕೆ ಮಂಡಳಿ ಮುಂದೆ ಬಾಕಿ ಉಳಿದಿದ್ದು ಅದನ್ನು ಇದೀಗ ಮುಕ್ತಾಯಗೊಳಿಸಲಾಗಿದೆ.