ವರ್ಜಿನ್ ಭಾಸ್ಕರ್
ವರ್ಜಿನ್ ಭಾಸ್ಕರ್  
ಸುದ್ದಿಗಳು

ಪ್ರಚಾರಕ್ಕಾಗಿ ಸೂಕ್ಷ್ಮ ವಿಷಯಗಳ ಬಗ್ಗೆ ದೂರು ನೀಡುವುದು ಅಭ್ಯಾಸವಾಗಿದೆ ಎಂದು ಕಿಡಿಕಾರಿದ ಅಲಹಾಬಾದ್ ಹೈಕೋರ್ಟ್

Bar & Bench

ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಆಲ್ಟ್ ಬಾಲಾಜಿ ಮತ್ತು ಜೀ 5ನಲ್ಲಿ ‘ವರ್ಜಿನ್ ಭಾಸ್ಕರ್ ಸೀಸನ್ 2’ ವೆಬ್ ಸರಣಿ ಪ್ರಸಾರ ಮಾಡುವುದನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟಿನ ಲಖ್ನೋ ಪೀಠ ತಿರಸ್ಕರಿಸಿದ್ದು ಅರ್ಜಿದಾರರ ಮೇಲೆ ಗರಂ ಆಗಿದೆ.

ಪ್ರಚಾರದ ಕುಟಿಲ ಉದ್ದೇಶದಿಂದ ಸಲ್ಲಿಸಿದ ಅರ್ಜಿ ಇದು ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿರುವದಕ್ಕೆ ಕೆಂಡ ಕಾರಿದೆ.

ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ರಾಜೀವ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಹೀಗೆ ಹೇಳಿದೆ:

... ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಅನಗತ್ಯ ಪ್ರಚಾರ ಪಡೆಯಲು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕೇವಲ ಪ್ರಚಾರದ ಕುಟಿಲ ಉದ್ದೇಶದಿಂದ, ಅರ್ಜಿಯನ್ನು ಸಲ್ಲಿಸುವ ಮೊದಲೇ ಅಥವಾ ಯಾವುದೇ ಆದೇಶ ನೀಡುವ ಮೊದಲೇ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲಾಯಿತು.
ಅಲಹಾಬಾದ್ ಹೈಕೋರ್ಟ್

ವಂಚಿತರಿಗೆ ಮತ್ತು ದುರ್ಬಲರಿಗೆ ಮಾನವ ಹಕ್ಕುಗಳನ್ನು ಅರ್ಥಪೂರ್ಣ ರೀತಿಯಲ್ಲಿ ಒದಗಿಸಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ರೂಪುಗೊಂಡಿದೆ ಎಂದು ಸುಪ್ರೀಂ ಕೋರ್ಟ್ ಆಗಾಗ್ಗೆ ನೀಡುವ ಆದೇಶಗಳನ್ನು ಅದು ಪ್ರಸ್ತಾಪಿಸಿತು.

ಆನ್‌ಲೈನ್ ನಲ್ಲಿ ಪ್ರಚಾರ ಪಡೆಯುವ ಉದ್ದೇಶದಿಂದ ಅರ್ಜಿಗಳು ಹೆಚ್ಚಾಗಿ ಸಲ್ಲಿಕೆಯಾಗುತ್ತಿವೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಇದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ಎಚ್ಚರಿಕೆ ನೀಡಿದೆ.

... ಸೂಕ್ಷ್ಮ ವಿಷಯಗಳ ಬಗ್ಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಚಾರ ಪಡೆಯುವುದು ಅಭ್ಯಾಸವಾಗುತ್ತಿದೆ, ಇದರಿಂದಾಗಿ ಅಂತಿಮ ಫಲಿತಾಂಶ ತಿಳಿದಿದ್ದೂ ಅದು ಸಾರ್ವಜನಿಕ ಚರ್ಚೆಯ ವಿಷಯವಾಗಿ ಪರಿಣಮಿಸುತ್ತಿದೆ. ಹೀಗಾಗಿ, ನ್ಯಾಯಾಲಯಗಳ ಮುಂದೆ ತರಲು ಉದ್ದೇಶಿಸಿದ ಯಾವುದೇ ವಿಷಯವನ್ನು ಬಹಿರಂಗಗೊಳಿಸುವುದು ವಾಸ್ತವವಾಗಿ ಆರೋಗ್ಯಕರ ಅಭ್ಯಾಸವಲ್ಲ. ಬದಲಾಗಿ ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ. ಇದು ಅನಗತ್ಯವಾಗಿ ನ್ಯಾಯಾಧೀಶರ ಮನಸ್ಸನ್ನು ಪೂರ್ವಗ್ರಹಪೀಡಿತವಾಗಿಸಬಹುದು.
ಅಲಹಾಬಾದ್ ಹೈಕೋರ್ಟ್

ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕಿದ್ದು ದಾವೆ ಹೂಡುವ ಮೊದಲೇ ಇಂತಹ ಅರ್ಜಿಗಳು ಪ್ರಕಟವಾಗುವುದನ್ನು ತಪ್ಪಿಸಬೇಕು ಎಂದು ಸೂಚಿಸಿತು.

ಅರ್ಜಿದಾರ ಯಾವುದೇ ಅವಕಾಶಗಳಿಂದ ವಂಚಿತನಾಗಿಲ್ಲ ಮತ್ತು ಮೂಲಭೂತ ಹಕ್ಕುಗಳ ಜಾರಿಗಾಗಿ ಯತ್ನಿಸುತ್ತಿಲ್ಲ ಎಂಬುದನ್ನು ಗ್ರಹಿಸಿರುವ ನ್ಯಾಯಾಲಯ, ಈ ಮೊಕದ್ದಮೆ ಪ್ರಚಾರದ ಬಯಕೆಯಿಂದ ಪ್ರೇರಿತವಾಗಿದೆ ಎಂದು ಅಭಿಪ್ರಾಯಪಟ್ಟಿತು.

‘ವರ್ಜಿನ್ ಭಾಸ್ಕರ್ ಸೀಸನ್ 2’ ಎಂಬ ವೆಬ್ ಸರಣಿಯ ಪ್ರಸಾರವನ್ನು ತಡೆಹಿಡಿಯಲು ಕ್ರಿಶನ್ ಕನ್ಹಯಾ ಪಾಲ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಸರಣಿಯ ನಿರ್ದಿಷ್ಟ ದೃಶ್ಯವೊಂದು ಮಾನಹಾನಿಕರವಾಗಿದೆ ಎಂದು ಅವರು ಆರೋಪಿಸಿದ್ದರು. ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ದೇವಿ ಹೆಸರನ್ನು ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಇಡಲಾಗಿದೆ ಎಂದು ಅವರು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಆಲ್ಟ್ ಬಾಲಾಜಿ ಮತ್ತು ಜೀ 5 ಪರ ವಾದಮಂಡಿಸಿದ ವಕೀಲರ ತಂಡ, ಸಾಮಾಜಿಕ ಜಾಲತಾಣದಲ್ಲಿ ಅರ್ಜಿ ಪ್ರಕಟವಾಗಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿತು. ಹಿರಿಯ ವಕೀಲ ಜೆಎನ್ ಮಾಥುರ್, ಅರ್ಜಿಯಲ್ಲಿ ಕೇವಲ ಪ್ರಚಾರದ ಉದ್ದೇಶ ಇದ್ದು ಸಾರ್ವಜನಿಕ ಹಿತಾಸಕ್ತಿಯ ಯಾವುದೇ ಅಂಶಗಳಿಲ್ಲ ಎಂದು ವಾದ ಮಂಡಿಸಿದರು.

ಅಗ್ಗದ ಪ್ರಚಾರ ಪಡೆಯಲು ದೂರು ನೀಡಲಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು.

ಆದೇಶವನ್ನು ಇಲ್ಲಿ ಓದಿ:

Krishan_Kanhaya_Pal_v__U_o_I____Final_Order_dated_September_18__2020.pdf
Preview