District Court, Raigad-Alibag, Arnab
District Court, Raigad-Alibag, Arnab 
ಸುದ್ದಿಗಳು

[ಬ್ರೇಕಿಂಗ್] ಆತ್ಮಹತ್ಯೆಗೆ ಪ್ರಚೋದನೆ: ಅರ್ನಾಬ್ ಗೋಸ್ವಾಮಿಗೆ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್

Bar & Bench

ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯಕ್‌ ಹಾಗೂ ಅವರ ತಾಯಿ ಕುಮುದಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರ ಜಾಮೀನು ಅರ್ಜಿಯನ್ನು ಸೋಮವಾರ ಬಾಂಬೆ ಹೈಕೋರ್ಟ್‌ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎಂ ಎಸ್‌ ಕಾರ್ನಿಕ್‌ ಅವರಿದ್ದ ಪೀಠವು ಈ ಆದೇಶ ನೀಡಿದೆ. ಜಾಮೀನಿಗಾಗಿ ಸೆಷನ್ಸ್‌ ನ್ಯಾಯಾಲಯ ಸಂಪರ್ಕಿಸುವ ಸ್ವಾತಂತ್ರ್ಯವನ್ನು ಗೋಸ್ವಾಮಿ ಅವರಿಗೆ ಕಲ್ಪಿಸಿರುವ ಹೈಕೋರ್ಟ್‌ ನಾಲ್ಕು ದಿನಗಳ ಒಳಗೆ ಜಾಮೀನು ಅರ್ಜಿಯ ವಿಚಾರಣೆ ಇತ್ಯರ್ಥಪಡಿಸುವಂತೆ ಹೇಳಿದೆ.

ಈ ಮಧ್ಯೆ, ಈಗಾಗಲೇ ಗೋಸ್ವಾಮಿ ಅವರು ಜಾಮೀನು ಕೋರಿ ಅಲಿಬಾಗ್‌ನ ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

“ವಿಶೇಷ ನ್ಯಾಯಿಕ ವ್ಯಾಪ್ತಿಯನ್ನು ಕೋರಿರುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮೇಲ್ನೋಟಕ್ಕೆ ಕಾಣುವಂಥ ಯಾವುದೇ ಕಾರಣ ವಿವರಿಸಿಲ್ಲ… ಸೆಷನ್ಸ್‌ ನ್ಯಾಯಾಲಯದಲ್ಲಿ ಅವರಿಗೆ ಪರಿಹಾರವಿದ್ದು, ಅದನ್ನು ಪಡೆದುಕೊಳ್ಳಬಹುದು ಎಂದು ನಮಗನ್ನಿಸುತ್ತದೆ. ನಮ್ಮ ಆದೇಶದಲ್ಲಿ ಮಾಡಿದ ಅವಲೋಕನಗಳು ಈ ಅರ್ಜಿಗೆ ಮಾತ್ರ ಸೀಮಿತವಾಗಿರುತ್ತವೆ” ಎಂದು ಪೀಠ ಹೇಳಿದೆ.

ಸುದೀರ್ಘ ವಿಚಾರಣೆ ನಡೆಸಿದ್ದ ಪೀಠವು ಶನಿವಾರ ತೀರ್ಪು ಕಾಯ್ದಿರಿಸಿತ್ತು. ಸೆಷನ್ಸ್ ‌ನ್ಯಾಯಾಲಯದಲ್ಲಿ ಕ್ರಿಮಿನಲ್ ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 439ರ ಅಡಿ ಜಾಮೀನು ಪಡೆಯಲು ಹೈಕೋರ್ಟ್‌ನಲ್ಲಿ ಹೊರಡಿಸಲಾಗುವ ಯಾವುದೇ ಆದೇಶಗಳು ಅಡ್ಡಿಯಾಗಲಿವೆ ಎಂದು ಭಾವಿಸಬಾರದು ಎಂದೂ ಪೀಠ ಹೇಳಿತ್ತು.