Justice GR Swaminathan
Justice GR Swaminathan 
ಸುದ್ದಿಗಳು

ಸಂವಿಧಾನದ 72ನೇ ವಿಧಿಯು ವಾಲ್ಮೀಕಿ ರಾಮಾಯಣವನ್ನು ಆಧರಿಸಿದೆ: ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಸ್ವಾಮಿನಾಥನ್

Bar & Bench

ಸಂವಿಧಾನದ 72ನೇ ವಿಧಿಯನುಸಾರ ಚಾಲ್ತಿಯಲ್ಲಿರುವ ಬಿಡುಗಡೆಯ ಕಾನೂನು, ರಾಷ್ಟ್ರಪತಿಗಳ ಕ್ಷಮಾದಾನ ಅಥವಾ ಅಪರಾಧಿಗಳ ಶಿಕ್ಷೆಯನ್ನು ಅಮಾನತಿನಲ್ಲಿಡುವ ಇಲ್ಲವೇ ರದ್ದುಪಡಿಸುವ ಸಿಆರ್‌ಪಿಸಿ ಸೆಕ್ಷನ್‌ 432- ಈ ಎಲ್ಲವೂ ವಾಲ್ಮೀಕಿ ರಾಮಾಯಣವನ್ನು ಆಧರಿಸಿವೆ ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಬುಧವಾರ ಹೇಳಿದರು.

ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್‌ನ ಕಾನೂನು ಘಟಕವಾದ ಅಖಿಲ ಭಾರತೀಯ ಅಧಿವಕ್ತ ಪರಿಷತ್ತಿನ 16ನೇ ರಾಷ್ಟ್ರೀಯ ಸಮ್ಮೇಳನದಲ್ಲಿ '75 ವರ್ಷಗಳ ಪುನರುತ್ಥಾನದ ಭಾರತ: ಸನ್ನಿಹಿತವಾದ ಭಾರತೀಯ ನ್ಯಾಯಶಾಸ್ತ್ರದ ಸಮಯ' ಎಂಬ ವಿಷಯದ ಕುರಿತು ನ್ಯಾಯಮೂರ್ತಿಗಳು ಬುಧವಾರ ಮಾತನಾಡಿದರು.

ಕೆಲ ದಶಕಗಳ ಹಿಂದೆ ಮಸೀದಿಯೊಂದರಲ್ಲಿ ಅಡಗಿ ಕೂತಿದ್ದು ಅದನ್ನೇ ಸ್ಫೋಟಿಸುವುದಾಗಿ ಹೇಳಿದ್ದ ಉಗ್ರಗಾಮಿಗಳಿಗೆ ರಂಜಾನ್‌ ವೇಳೆ ಬಿರಿಯಾನಿ ನೀಡುವಂತೆ ನ್ಯಾಯಾಲಯವೊಂದು ಆದೇಶಿಸಿತ್ತು. ನನಗೆ ಸಾಲ್ಮಂಡ್ ಮತ್ತು ಡಯಾಸ್ ನ್ಯಾಯಶಾಸ್ತ್ರದ ಬಗ್ಗೆ ತಿಳಿದಿದೆ. ಆದರೆ ಬಿರಿಯಾನಿ ನ್ಯಾಯಶಾಸ್ತ್ರದ ಬಗ್ಗೆ ಗೊತ್ತಿರಲಿಲ್ಲ ಎಂದು ಮಾರ್ಮಿಕವಾಗಿ ನುಡಿದ ಅವರು 28 ವರ್ಷಗಳಲ್ಲಿ, ಗುರುತರ ಬದಲಾವಣೆಯಾಗಿದ್ದು ನಾನೀಗ ʼಭಾರತೀಯ ನ್ಯಾಯಶಾಸ್ತ್ರʼದ ಬಗ್ಗೆ ಮಾತನಾಡುವ ಅದೃಷ್ಟಶಾಲಿಯಾಗಿದ್ದೇನೆ ಎಂದರು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿಗಳನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಕುರಿತು ಅವರು ಮಾತನಾಡಿದರು.

“ಅವರಿಗೆ ಮೊದಲು ಮರಣದಂಡನೆ ವಿಧಿಸಲಾಗಿತ್ತು. ನಂತರ ಶಿಕ್ಷೆ ಜೀವಾವಧಿಗೆ ಬದಲಾಯಿತು. 30 ವರ್ಷಗಳ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು. ಅಪರಾಧಿಗಳಲ್ಲಿ ಒಬ್ಬನಾದ ಪೇರರಿವಾಳನ್‌ನನ್ನು ಒಂದು ಸಮ್ಮೇಳನದ ತಾರಾ ಭಾಷಣಕಾರನ್ನಾಗಿ ಆಹ್ವಾನಿಸಲಾಯಿತು. ನಾನೂ ಸೇರಿದಂತೆ ಚೆನ್ನೈನ ಹಲವರು ಇದರಿಂದ ಸಾಕಷ್ಟು ವಿಚಲಿತರಾದೆವು. ಆದರೆ ರಾಮಾಯಣದ ಶ್ಲೋಕವೊಂದು ಪ್ರತೀಕಾರದ ಭಾವನೆ ತೊರೆದು ಕ್ಷಮಿಸಬೇಕು ಎನ್ನುತ್ತದೆ. ಆ ಸುಂದರ ಶ್ಲೋಕಗಳನ್ನು ಓದಿದಾಗ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಸಂವಿಧಾನದ 72ನೇ ವಿಧಿ, ಸಿಆರ್‌ಪಿಸಿ ಸೆಕ್ಷನ್‌ 432 ಈ ಎಲ್ಲಕ್ಕೂ ರಾಮಾಯಣ ಆಧಾರ ” ಎಂದು ಹೇಳಿದರು.