ಸುದ್ದಿಗಳು

ಕಡಿಮೆಯಾದ ಕೊರೊನಾ ಅಲೆ: 20 ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಎಸ್ಒಪಿ ಹಿಂಪಡೆದ ಕರ್ನಾಟಕ ಹೈಕೋರ್ಟ್

Ramesh DK

ಕೊರೊನಾ ಸಾಂಕ್ರಾಮಿಕ ರೋಗದ ಪ್ರಮಾಣ ತಗ್ಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 20 ಜಿಲ್ಲೆಗಳಿಂದ ಈಗ ಅಸ್ತಿತ್ವದಲ್ಲಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಹಿಂಪಡೆದಿದ್ದು ಇದು ಜುಲೈ 19ರಿಂದ ಕಾರ್ಯರೂಪಕ್ಕೆ ಬರಲಿದೆ.

ಕಳೆದ ಏಳು ದಿನಗಳಿಂದ ರಾಜ್ಯದ 20 ಜಿಲ್ಲೆಗಳಲ್ಲಿ 1000 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ಎಸ್‌ಒಪಿಯನ್ನು ಹೈಕೋರ್ಟ್‌ ಬಿಡುಗಡೆ ಮಾಡಿದೆ.

ಅದರಂತೆ ಬಾಗಲಕೋಟೆ, ಬಳ್ಳಾರಿ, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಂತರ (ರಾಜ್ಯ ರಾಜಧಾನಿಯ ಸಿಟಿ ಸಿವಿಲ್‌ ಕೋರ್ಟ್‌ ಸಂಕೀರ್ಣದಲ್ಲಿರುವ ಬೆಂ. ಗ್ರಾ ನ್ಯಾಯಾಲಯಗಳನ್ನು ಹೊರತುಪಡಿಸಿ), ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿದ್ದ ಕೆಲ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ.

ಇದೇ ವೇಳೆ ಬೆಳಗಾವಿ, ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಕಿಣ ಕನ್ನಡ- ಮಂಗಳೂರು, ಹಾಸನ, ಕೊಡಗು- ಮಡಿಕೇರಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಜಿಲ್ಲೆಗಳಲ್ಲಿ ಜೂನ್‌ 25ರಂದು ಹೊರಡಿಸಲಾಗಿದ್ದ ಎಸ್‌ಒಪಿ ಮುಂದುವರೆಯಲಿದ್ದು ಕೆಲ ನಿರ್ಬಂಧಗಳಲ್ಲಿ ಮಾತ್ರ ಸಡಿಲಿಕೆ ಮಾಡಲಾಗಿದೆ.

ಆದರೆ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಮುಖ್ಯ ನ್ಯಾಯಾಲಯಗಳ ಹೊರಗಿನ ಪ್ರಕರಣ ದಾಖಲಿಸುವ ವ್ಯವಸ್ಥೆ ಮುಂದಿನ ಆದೇಶದವರೆಗೆ ಎಂದಿನಂತೆ ಮುಂದುವರೆಯಲಿದೆ. ಅಲ್ಲದೆ ಕ್ಯಾಂಟೀನ್‌ಗಳನ್ನು ತೆರೆಯಲು ಅನುಮತಿ ಸಿಗಬೇಕೆಂದರೆ ತಮ್ಮ ಎಲ್ಲಾ ಸಿಬ್ಬಂದಿಗೆ ಲಸಿಕೆ ಹಾಕಿಸುವಂತೆ ಕ್ಯಾಂಟೀನ್‌ ಪರವಾನಗಿ ಹೊಂದಿರುವವರಿಗೆ ನಿರ್ದೇಶನ ನೀಡಬೇಕು ಎಂದು ಪ್ರಕಟಣೆ ಸೂಚಿಸಿದೆ ನಿಯಮಗಳ ಹೆಚ್ಚಿನ ಸಡಿಲಿಕೆಗೆ ಸಂಬಂಧಿಸಿದಂತೆ ಮುಂದಿನ ವಾರ ನಿರ್ಧರಿಸಲಾಗುವುದು ಎಂದು ಪ್ರಕಟಣೆ ವಿವರಿಸಿದೆ.

ಎಸ್‌ಒಪಿ ವಿವರಗಳನ್ನು ಇಲ್ಲಿ ಓದಿ:

SOP.pdf
Preview