Attorney General KK Venugopal
Attorney General KK Venugopal  
ಸುದ್ದಿಗಳು

ಮೂಲಭೂತ ಕರ್ತವ್ಯ ಜಾರಿ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮನವಿಗೆ ಅಟಾರ್ನಿ ಜನರಲ್ ವೇಣುಗೋಪಾಲ್ ವಿರೋಧ

Bar & Bench

ಸಂವಿಧಾನದ 51ಎ ವಿಧಿಯಡಿ ಸೂಚಿಸಲಾದ ಮೂಲಭೂತ ಕರ್ತವ್ಯಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅಟಾರ್ನಿ ಜನರಲ್ (ಎಜಿ) ಕೆ ಕೆ ವೇಣುಗೋಪಾಲ್ ವಿರೋಧ ವ್ಯಕ್ತಪಡಿಸಿದರು.

ಕಾನೂನು ಮತ್ತು ನ್ಯಾಯಾಂಗ ಇಲಾಖೆ ತನ್ನ ಜಾಲತಾಣದಲ್ಲಿ 51ಎ ವಿಧಿ ಬಗ್ಗೆ ವಿವರವಾಗಿ ಮಾಹಿತಿ ನೀಡಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠಕ್ಕೆ ಎಜಿ ತಿಳಿಸಿದರು.

51ನೇ ಎ ವಿಧಿಗೆ ಬದ್ಧವಾಗಿರುವಂತೆ ನೋಡಿಕೊಳ್ಳಲು ಸಮಗ್ರ ಕಾನೂನು ರೂಪಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ದುರ್ಗದತ್‌ ಎಂಬುವವರು ಅರ್ಜಿ ಸಲ್ಲಿಸಿದ್ದರು. “ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ರಸ್ತೆ ಮತ್ತು ರೈಲು ಮಾರ್ಗಗಳನ್ನು ತಡೆಯುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಪ್ರತಿಭಟನಾಕಾರರು ತೋರುತ್ತಿರುವ ಹೊಸ ಕಾನೂನುಬಾಹಿರ ಪ್ರವೃತ್ತಿಯಿಂದಾಗಿ ಮೂಲಭೂತ ಕರ್ತವ್ಯಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವ ಅಗತ್ಯತೆ ಉದ್ಭವಿಸಿದೆ” ಎಂದು ಅವರು ಪ್ರತಿಪಾದಿಸಿದ್ದರು.

ಈ ಹಿಂದೆ ಪ್ರಕರಣದಲ್ಲಿ ಎಜಿ ಅವರ ನೆರವು ಕೋರಿದ್ದ ಪೀಠ ಇಂದು ವಿಚಾರಣೆ ಕೈಗೆತ್ತಿಕೊಂಡಾಗ ಅವರ ನಿಲುವು ಬಯಸಿತು. ಮೂಲಭೂತ ಕರ್ತವ್ಯಗಳನ್ನು ಜಾರಿಗೊಳಿಸಲು ಮತ್ತು ನಾಗರಿಕರಿಗೆ ಅವರ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲು ಕೋರಿರುವ ಮನವಿಗೆ ಎಜಿ ಆಕ್ಷೇಪ ವ್ಯಕ್ತಪಡಿಸಿದರು. ಮೂಲಭೂತ ಕರ್ತವ್ಯಗಳ ಕುರಿತು ಸರ್ಕಾರ ಈಗಾಗಲೇ ಪ್ರಚಾರ ನಡೆಸಿದೆ ಎಂಬುದನ್ನು ಎಜಿ ವೇಣುಗೋಪಾಲ್‌ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಒಂದು ಹಂತದಲ್ಲಿ ಅವರು ಅರ್ಜಿದಾರರ ಪ್ರಾರ್ಥನೆ ಮನ್ನಿಸಲು ಸಾಧ್ಯವಿಲ್ಲ ಎಂದರು. ಅಲ್ಲದೆ, ನ್ಯಾಯಾಲಯವು ಸಂಸತ್ತಿಗೆ ಕಾನೂನು ಮಾಡಲು ನಿರ್ದೇಶಿಸಲಾಗದು ಎಂದು ಖಚಿತವಾಗಿ ನುಡಿದರು. ಆಗ ನ್ಯಾಯಾಲಯ ಕೇಂದ್ರ ಸರ್ಕಾರ ಮೂಲಭೂತ ಕರ್ತವ್ಯಗಳ ಜಾರಿ ಕುರಿತಂತೆ ಏನಾದರೂ ಕ್ರಮ ಕೈಗೊಂಡಿದೆಯೇ ಎಂದಷ್ಟೇ ಕೇಳುತ್ತಿದ್ದೇವೆ ಎಂದಿತಲ್ಲದೆ ನಾಲ್ಕು ವಾರಗಳಲ್ಲಿ ಇದಕ್ಕೆ ಉತ್ತರಿಸುವಂತೆ ಕೇಂದ್ರಕ್ಕೆ ಆದೇಶಿಸಿತು.