Azam Khan
Azam Khan 
ಸುದ್ದಿಗಳು

ಆಜಂ ಖಾನ್ ಒಂದು ಪ್ರಕರಣದಲ್ಲಿ ಜಾಮೀನು ಪಡೆದರೆ, ಇನ್ನೊಂದು ದೂರು ಸಿದ್ಧವಾಗಿರುತ್ತದೆ: ಸುಪ್ರೀಂ ಕೋರ್ಟ್

Bar & Bench

ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ಗೆ ನ್ಯಾಯಾಲಯ ಜಾಮೀನು ನೀಡಿದಂತೆಲ್ಲಾ ಅವರ ವಿರುದ್ಧ ಹೊಸ ದೂರು ಸಲ್ಲಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.

ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಆಜಂ ಅವರ ಬಾಕಿ ಇರುವ ಅನೇಕ ಜಾಮೀನು ಅರ್ಜಿಗಳಲ್ಲಿ ಒಂದನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ವಿಚಾರಣೆ ನಡೆಸಿತು.

“ಇದು ಮುಂದುವರೆಯಲಿದೆ. ಒಂದು ಪ್ರಕರಣದ ವಿಚಾರಣೆ ನಡೆಸುತ್ತಿದ್ದಂತೆ ಹೆಚ್ಚು ದೂರುಗಳು ದಾಖಲಾಗುತ್ತವೆ. ಅವರು ಒಂದು ಪ್ರಕರಣದಲ್ಲಿ ಜಾಮೀನು ಪಡೆದಾಗಲೆಲ್ಲಾ ಇಂತಹ ಕಾಕತಾಳೀಯ ನಡೆಯುವುದೇಕೆ?” ಎಂದು ನ್ಯಾ. ಗವಾಯಿ ಮೌಖಿಕವಾಗಿ ಅಭಿಪ್ರಾಯಪಟ್ಟರು.

ಆದರೆ ಆಜಾಂ ಅವರ ವಿರುದ್ಧದ ಯಾವುದೇ ಪ್ರಕರಣಗಳು ಕ್ಷುಲ್ಲಕವಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು ಸಮರ್ಥಿಸಿಕೊಂಡರು. ಈ ಬಗ್ಗೆ ವಿವರವಾದ ಉತ್ತರ ಸಲ್ಲಿಸಲಾಗುವುದು ಎಂದಾಗ, ಆಜಂ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ರಾಜ್ಯದ ಪ್ರತಿಕ್ರಿಯೆಯ ಪ್ರತಿಯನ್ನು ತಮಗೆ ಮುಂಚಿತವಾಗಿ ರವಾನಿಸುವಂತೆ ಕೇಳಿಕೊಂಡರು.

ಮೇಕೆ, ಎಮ್ಮೆ ಕದ್ದಿದ್ದರಿಂದ ಹಿಡಿದು ಭೂಗಳ್ಳತನ, ವಿದ್ಯುಚ್ಛಕ್ತಿ ಕಳ್ಳತನದವರೆಗೆ ಸುಮಾರು 100 ಕ್ರಿಮಿನಲ್ ಪ್ರಕರಣಗಳನ್ನು ಆಜಂ ಎದುರಿಸುತ್ತಿದ್ದಾರೆ. ಆಜಂ ಅವರ ವಿರುದ್ಧ 87 ರಾಜಕೀಯ ಪ್ರೇರಿತ ಪ್ರಕರಣಗಳಿದ್ದು ಅವುಗಳಲ್ಲಿ 84 ಪ್ರಕರಣಗಳಲ್ಲಿ ಜಾಮೀನು ದೊರೆತಿದೆ ಎಂದು ಖಾನ್‌ ಪರ ವಕೀಲ ಬಿ ಎಫ್ ಲ್ಝಫೀರ್ ಅಹ್ಮದ್ ಹೇಳಿದ್ದಾರೆ.