Congress MLA Satish Sail & Karnataka HC 
ಸುದ್ದಿಗಳು

ಬೇಲೆಕೇರಿ ಅದಿರು ಕಳವು: ಶಾಸಕ ಸತೀಶ್‌ ಸೈಲ್‌ ಶಿಕ್ಷೆ ಅಮಾನತು; ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ನಿರ್ಬಂಧ

ಮೇಲ್ಮನವಿ ನಿರ್ಧಾರವಾಗುವವರೆಗೆ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 151ರ ಅನ್ವಯ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬಾರದು ಎಂದು ಆದೇಶಿಸಿರುವ ನ್ಯಾಯಾಲಯ.

Bar & Bench

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರಿಗೆ ವಿಧಿಸಿರುವ ಜೈಲು ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಅಮಾನತುಗೊಳಿಸಿದೆ. ಕಾರವಾರ ಕ್ಷೇತ್ರಕ್ಕೆ ಉಪಚುನಾವಣೆ ನಡೆಸದಂತೆ, ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ವಿಶೇಷ ಸತ್ರ ನ್ಯಾಯಾಲಯವು ವಿಧಿಸಿರುವ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸತೀಶ್‌ ಸೈಲ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“24.10.2024ರಂದು ವಿಶೇಷ ನ್ಯಾಯಾಲಯ ಮಾಡಿರುವ ಆದೇಶಕ್ಕೆ ತಡೆ ನೀಡಲಾಗಿದೆ. ಮೇಲ್ಮನವಿ ನಿರ್ಧಾರವಾಗುವವರೆಗೆ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 151ರ ಅನ್ವಯ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬಾರದು. ವಿಧಾನ ಸಭೆಯ ಕಲಾಪದಲ್ಲಿ ಭಾಗಿಯಾಗಲು ಸತೀಶ್‌ ಸೈಲ್‌ ಅರ್ಹರಾಗಿಲ್ಲ. ವಿಧಾನಸಭೆಯಲ್ಲಿ ಮತ ಚಲಾಯಿಸಲು ಅಥವಾ ಭತ್ಯೆ ಪಡೆಯಲು ಅರ್ಹರಲ್ಲ. ಮೇಲ್ಮನವಿ ಬಾಕಿ ಇರುವಾಗ ಮೇಲ್ಮನವಿದಾರರನ್ನು ಭವಿಷ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಬಾರದು” ಎಂದು ನ್ಯಾಯಾಲಯ ಆದೇಶಿಸಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕಾಗಿರುವುದರಿಂದ ಅದನ್ನು 10.02.2025ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

ಇದೇ ಪ್ರಕರಣದಲ್ಲಿ ದಂಡದ ಮೊತ್ತದ ಪೈಕಿ ಶೇ. 25ರಷ್ಟನ್ನು ವಿಚಾರಣಾಧೀನ ನ್ಯಾಯಾಲಯದಲ್ಲಿ ಆರು ವಾರಗಳಲ್ಲಿ ಠೇವಣಿ ಇಡುವ ಷರತ್ತಿಗೆ ಒಳಪಟ್ಟು ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಸೇರಿ ಮತ್ತಿತರರಿಗೆ ಹೈಕೋರ್ಟ್‌ ನವೆಂಬರ್‌ 13ರಂದು ಜಾಮೀನು ಮಂಜೂರು ಮಾಡಿತ್ತು.

ಪ್ರಕರಣದ ಹಿನ್ನೆಲೆ: ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ಅಕ್ರಮ ರಫ್ತು ಮಾಡಿದ ಪ್ರಕರಣದಲ್ಲಿ ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಪ್ರೈ ಲಿಮಿಟೆಡ್‌ ಮತ್ತು ಸತೀಶ್‌ ಸೈಲ್‌ಗೆ ಒಟ್ಟು ಆರು ಪ್ರಕರಣಗಳಲ್ಲಿ ಕ್ರಮವಾಗಿ ₹90 ಲಕ್ಷ, ₹6 ಕೋಟಿ, ₹9.52 ಕೋಟಿ, ₹9.36 ಕೋಟಿ, ₹9.06 ಕೋಟಿ, ₹9.25 ಕೋಟಿ ದಂಡ ವಿಧಿಸಿದೆ. ವಂಚನೆ ಮತ್ತಿತರ ಅಪರಾಧಗಳಿಗೆ ಗರಿಷ್ಠ ಏಳು ವರ್ಷ ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿದೆ.