ಗೌತಮ್ ನವಲಖಾ, ಬಾಂಬೆ ಹೈಕೋರ್ಟ್
ಗೌತಮ್ ನವಲಖಾ, ಬಾಂಬೆ ಹೈಕೋರ್ಟ್ 
ಸುದ್ದಿಗಳು

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಬಾಂಬೆ ಹೈಕೋರ್ಟ್ ಜಾಮೀನು

Bar & Bench

ಭೀಮಾ ಕೋರೆಗಾಂವ್ ಗಲಭೆ ಪ್ರಕರಣದ ಆರೋಪಿ, ಸಾಮಾಜಿಕ ಹೋರಾಟಗಾರ ಗೌತಮ್ ನವಲಖಾ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಸಹ ಆರೋಪಿಗಳಾದ ಆನಂದ್ ತೇಲ್ತುಂಬ್ಡೆ ಮತ್ತು ಮಹೇಶ್ ರಾವುತ್‌ಗೆ ವಿಧಿಸಿದ ಷರತ್ತುಗಳನ್ನೇ ನವಲಾಖಾ ಅವರಿಗೂ ವಿಧಿಸಿ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಎಸ್‌ ಜಿ ದಿಗೆ ಅವರಿದ್ದ ವಿಭಾಗೀಯ ಪೀಠ ಜಾಮೀನು ನೀಡಿತು.

ಈ ಜಾಮೀನು ತೀರ್ಪನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬೇಕಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ತನ್ನ ಆದೇಶಕ್ಕೆ ಮೂರು ವಾರಗಳ ಕಾಲ ತಡೆ ನೀಡಿದೆ. ಆದೇಶದ ವಿವರಗಳು ಇನ್ನಷ್ಟೇ ದೊರೆಯಬೇಕಿದೆ.

ವಕೀಲೆ ಸುಧಾ ಭಾರದ್ವಾಜ್, ತೆಲುಗು ಕವಿ ವರವರ ರಾವ್, ಚಿಂತಕ ಆನಂದ್ ತೇಲ್ತುಂಬ್ಡೆ, ಸಾಮಾಜಿಕ ಕಾರ್ಯಕರ್ತರಾದ ವೆರ್ನಾನ್ ಗೊನ್ಸಾಲ್ವೆಸ್ ಹಾಗೂ ಅರುಣ್ ಫೆರೇರಾ ಅವರ ನಂತರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಜಾಮೀನು ಪಡೆದ ಏಳನೇ ಆರೋಪಿ ಗೌತಮ್‌ ಅವರಾಗಿದ್ದಾರೆ.

ವರವರ ರಾವ್‌ ಅವರಿಗೆ ವೈದ್ಯಕೀಯ  ಕಾರಣಗಳಿಗಾಗಿ ಜಾಮೀನು ನೀಡಲಾಗಿದ್ದು ಜಾಮೀನು ಆದೇಶದ ಮೇಲಿನ ತಡೆಯಾಜ್ಞೆ ವಿಸ್ತರಿಸಿರುವುದರಿಂದ ರಾವತ್‌ ಇನ್ನೂ ಜೈಲಿನಿಂದ ಬಿಡುಗಡೆಯಾಗಿಲ್ಲ.

ನವಲಖಾ ಅವರನ್ನು ಆರಂಭದಲ್ಲಿ ಜೈಲಿನಲ್ಲಿ ಇರಿಸಲಾಗಿತ್ತಾದರೂ, ನಂತರ ವಯಸ್ಸಿನ ಕಾರಣಕ್ಕೆ ಅವರು ಸಲ್ಲಿಸಿದ್ದ ಮನವಿ ಮೇರೆಗೆ ಸುಪ್ರೀಂ ಕೋರ್ಟ್‌ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು.

ಆರು ವರ್ಷಗಳ ಹಿಂದೆ ಎಲ್ಗಾರ್‌ ಪರಿಷತ್‌ ಸಮಾವೇಶದಲ್ಲಿ ನವಲಖಾ ಮಾಡಿದ ಪ್ರಚೋದನಕಾರಿ ಭಾಷಣದಿಂದಾಗಿ ಮರುದಿನಮನ ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರ ಸಂಭವಿಸಿತ್ತು ಎಂದು ಆರೋಪಿಸಿ ಮಾನವಹಕ್ಕುಗಳ ಕಾರ್ಯಕರ್ತ ಮತ್ತು ಪೀಪಲ್ಸ್‌ ಯೂನಿಯನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌ನ (PUDR) ಮಾಜಿ ಕಾರ್ಯದರ್ಶಿಯಾಗಿರುವ ನವಲಖಾ ಅವರನ್ನುಆಗಸ್ಟ್ 2018 ರಲ್ಲಿ ಬಂಧಿಸಲಾಗಿತ್ತು.