City civil court Complex, Bengaluru
City civil court Complex, Bengaluru  
ಸುದ್ದಿಗಳು

ಬಿಜೆಪಿ ಟಿಕೆಟ್‌ ಹಗರಣ: ಚೈತ್ರಾ ಸುದ್ದಿ ಪ್ರಕಟಿಸುವಾಗ ಕುಂದಾಪುರ ಹೆಸರು ಬಳಕೆಗೆ ನ್ಯಾಯಾಲಯ ಮಧ್ಯಂತರ ನಿರ್ಬಂಧ

Bar & Bench

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಐದು ಕೋಟಿ ರೂಪಾಯಿ ಪಡೆದು ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಹಿಂದೂಪರ ಸಂಘಟನೆಯ ಚೈತ್ರಾ ಅವರಿಗೆ ಸಂಬಂಧಿಸಿದಂತೆ ಸುದ್ದಿ ಪ್ರಕಟ ಹಾಗೂ ಪ್ರಸಾರ ಮಾಡುವಾಗ ಕುಂದಾಪುರ ಹೆಸರು ಉಲ್ಲೇಖಿಸಬಾರದು ಎಂದು ಮಾಧ್ಯಮಗಳಿಗೆ ನಿರ್ಬಂಧ ಹೇರಿ ಬೆಂಗಳೂರಿನ ಹೆಚ್ಚುವರಿ  ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಶನಿವಾರ ಏಕಪಕ್ಷೀಯ ಮಧ್ಯಂತರ ಆದೇಶ ಮಾಡಿದೆ.

ಚೈತ್ರಾ ಪ್ರಕರಣದಲ್ಲಿ ಕುಂದಾಪುರ ಹೆಸರು ಉಲ್ಲೇಖಿಸುವುದಕ್ಕೆ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಬಸವನಗುಡಿಯಲ್ಲಿ "ಕಾಫಿ ಶಾಪ್‌" ಹೋಟೆಲ್ ಮಾಲೀಕ ಕುಂದಾಪುರ ಮೂಲದ ಗಣೇಶ್‌ ಶೆಟ್ಟಿ ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆಯನ್ನು ಬೆಂಗಳೂರಿನ 7ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಬಾಲಗೋಪಾಲ ಕೃಷ್ಣ ಅವರು ಆದೇಶಿಸಿದ್ದಾರೆ.

ಸುದ್ದಿ ವಾಹಿನಿ, ಮಾಧ್ಯಮದಲ್ಲಿ ಕುಂದಾಪುರ ಹೆಸರು ಉಲ್ಲೇಖ ಮತ್ತು ಪ್ಯಾನಲ್‌ ಚರ್ಚೆ ನಡೆಸುವುದಕ್ಕೆ ಮುಂದಿನ ಆದೇಶದವರೆಗೆ ತಾತ್ಕಾಲಿಕ ನಿರ್ಬಂಧ ಆದೇಶ ಮಾಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ವಂಚನೆ ಆರೋಪದಲ್ಲಿ ಚೈತ್ರಾ ಹಾಗೂ ಇತರೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೈತ್ರ ಸಹ ಕುಂದಾಪುರದ ಮೂಲದವರಾಗಿದ್ದಾರೆ. ಆದರೆ, ಈ ವಂಚನೆ ಪ್ರಕರಣಕ್ಕೆ ಮಾಧ್ಯಮಗಳು ಚೈತ್ರಾ ಹೆಸರು ಬಳುಸುವಾಗ ಕುಂದಾಪುರ ಎಂಬುದಾಗಿ ಉಲ್ಲೇಖಿಸುತ್ತಿವೆ. ಇದರಿಂದ ಕುಂದಾಪುರ ಪಟ್ಟಣದ ಹೆಸರು ಮತ್ತು ಘನತೆಗೆ ಧಕ್ಕೆಯಾಗುತ್ತಿದೆ. ಕುಂದಾಪುರ ಎಂದು ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದು ಅವಹೇಳನಕಾರಿಯಾಗಿದೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿದೆ.

ಮಾಧ್ಯಮಗಳು ತಮ್ಮ ಟಿಆರ್‌ಪಿ, ಲೈಕ್ಸ್ ಮತ್ತು ವ್ಯೂಸ್‌ ಹೆಚ್ಚಿಸುವ ಉದ್ದೇಶದಿಂದ ಕುಂದಾಪುರ ಹೆಸರು ಬಳಸುತ್ತಿವೆ. ಕುಂದಾಪುರ ಪಟ್ಟಣದಲ್ಲಿ ಜನಿಸಿರುವ ದಾವೆದಾರರು ಕಳೆದ 23 ವರ್ಷಗಳಿಂದ ಬೆಂಗಳೂರಿನ ಬಸನಗುಡಿಯಲ್ಲಿ ಕಾಫಿ ಶಾಪ್‌ ನಡೆಸುತ್ತಿದ್ದಾರೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಶಾಪ್‌ಗೆ ಭೇಟಿ ನೀಡುತ್ತಾರೆ. ಚೈತ್ರಾ ಪ್ರಕರಣ ಬೆಳಕಿಗೆ ಬಂದ ನಂತರ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ದೂಷಣೆಗೆ ಒಳಗಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ದಾವೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.